ಬೆಂಗಳೂರು: ಕೊರೊನಾ ವೈರಸ್ ಸೋಂಕು ಭೀತಿಯಿಂದಾಗಿ ಈ ಬಾರಿ ರಾಜ್ಯ ಪಠ್ಯಕ್ರಮದ 7, 8 ಮತ್ತು 9ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸದೆ, ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಗುರುವಾರ ಈ ವಿಷಯ ತಿಳಿಸಿದರು.
‘7 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಯಾವುದೇ ಷರತ್ತು ಇಲ್ಲದೆ ಮುಂದಿನ ತರಗತಿಗಳಿಗೆ ಉತ್ತೀರ್ಣಗೊಳಿಸಲಾಗುವುದು. 9ನೇ ತರಗತಿ ವಿದ್ಯಾರ್ಥಿಗಳು ಸಹ 10ನೇ ತರಗತಿಗೆ ಬಡ್ತಿ ಹೊಂದುತ್ತಾರೆ. ಆದರೆ ರೂಪಣಾತ್ಮಕ (ಎಫ್ಎ) ಮತ್ತು ಸಂಕಲನಾತ್ಮಕ (ಎಸ್ಎ) ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದವರ ಕಲಿಕಾ ಮಟ್ಟವನ್ನು ಹೆಚ್ಚಿಸಲು ಶಾಲೆಗಳು ಈ ರಜಾ ಅವಧಿ ಬಳಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ತರಗತಿ ಆರಂಭಕ್ಕೆ ಮೊದಲು ಇನ್ನೊಮ್ಮೆ ಪರೀಕ್ಷೆ ನಡೆಸಿ ಇವರ ಕಲಿಕಾ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ಅನುತ್ತೀರ್ಣವೂ ಸಾಧ್ಯ 7, 8, 9ನೇ ತರಗತಿಗಳಿಗೆ ಪರೀಕ್ಷೆ ರದ್ದುಪಡಿಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಗುರುವಾರ ಸಂಜೆ ಸುತ್ತೋಲೆ ಹೊರಡಿಸಿದ್ದಾರೆ. 9ನೇ ತರಗತಿಯಲ್ಲಿ ಕಲಿಕಾ ಮಟ್ಟ ತೀರಾ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದೂ ಸಾಧ್ಯವಿದೆ ಎಂದು ಉಲ್ಲೇಖಿಸಲಾಗಿದೆ.
‘ಎಫ್ಎ, ಎಸ್ಎ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡವರಿಗೆ 10ನೇ ತರಗತಿ ಆರಂಭಕ್ಕೆ ಮೊದಲು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಬೇಕು. ಅಲ್ಲಿನ ಫಲಿತಾಂಶ ನೋಡಿಕೊಂಡು ಉತ್ತೀರ್ಣಗೊಳಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ತಿಳಿಸಲಾಗಿದೆ.
ಎಸ್ಸೆಸ್ಸೆಲ್ಸಿ-14ಕ್ಕೆನಿರ್ಧಾರ:ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಮತ್ತು ಪಿಯು 1 ಪರೀಕ್ಷೆಯ ಬಗ್ಗೆ ಇದೇ 14ರ ಬಳಿಕ ನಿರ್ಧರಿಸಲಾಗುವುದು ಎಂದರು.
ಪರೀಕ್ಷೆ ಇಲ್ಲ ಎಂದು ವಿದ್ಯಾರ್ಥಿಗಳು ಓಡಾಡುವಂತಿಲ್ಲ, ಲಾಕ್ ಡೌನ್ ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಇರುವ ಸಮಯವನ್ನು ಉಪಯುಕ್ತ ಜ್ಞಾನ ಸಂಪಾದನೆಗೆ ಬಳಸಬೇಕು ಎಂದು ಸಲಹೆ ನೀಡಿದರು.