ಜೆರುಸಲೇಂ: ದಕ್ಷಿಣ ಮತ್ತು ಮಧ್ಯ ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ 71 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲೂ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿದೆ. ಇಲ್ಲಿನ ಚೆಕ್ಪಾಯಿಂಟ್ ಬಳಿಯ ರಸ್ತೆಯೊಂದರಲ್ಲಿ ಗುರುವಾರ ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಬ್ಬ ಇಸ್ರೇಲ್ ವ್ಯಕ್ತಿ ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ. ದಾಳಿಕೋರರಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ಮೂರನೇ ವ್ಯಕ್ತಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವ ಬೆನ್ನಲ್ಲೇ ಯುರೋಪಿನ ರಾಜತಾಂತ್ರಿಕರು ಕದನ ವಿರಾಮಕ್ಕೆ ಒತ್ತಡ ಹೆಚ್ಚಿಸುತ್ತಿದ್ದಾರೆ. ಇದರ ಬೆನ್ನಲ್ಲೇ ‘ನಮ್ಮ ಒತ್ತೆಯಾಳುಗಳ ಸಮಾಲೋಚಕರಿಗೆ ನೀಡಿರುವ ಅಧಿಕಾರವನ್ನು ನಾವು ಮತ್ತಷ್ಟು ವಿಸ್ತರಿಸುತ್ತೇವೆ’ ಎಂದು ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಗುರುವಾರ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ 15 ಲಕ್ಷಕ್ಕೂ ಹೆಚ್ಚು ಮಂದಿ ಈಜಿಪ್ಟ್ ಗಡಿಯ ಸಮೀಪವಿರುವ ರಫಾ ನಗರಕ್ಕೆ ಆಶ್ರಯ ಅರಸಿ ಬಂದಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯದ ಅಂದಾಜಿನ ಪ್ರಕಾರ ಯುದ್ಧ ಆರಂಭವಾದ ಬಳಿಕ 29,000ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಪ್ರಜೆಗಳು ಮೃತಪಟ್ಟಿದ್ದಾರೆ.
ಗಾಜಾಪಟ್ಟಿ ನಿಯಂತ್ರಣ– ನೇತನ್ಯಾಹು ಯೋಜನೆ: ಹಮಾಸ್ ವಿರುದ್ಧದ ಯುದ್ಧ ಕೊನೆಗೊಂಡ ಬಳಿಕ ಇಸ್ರೇಲ್ ಗಾಜಾಪಟ್ಟಿಯಲ್ಲಿ ಭದ್ರತೆಯನ್ನು ನಿಯಂತ್ರಿಸುವ ಮತ್ತು ನಾಗರಿಕ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೊಂದಿದ್ದಾರೆ. ಈ ಕುರಿತು ಯೋಜನೆಯನ್ನು ಅವರು ಅನುಮೋದನೆಗಾಗಿ ಸಂಪುಟದ ಮುಂದಿಟ್ಟಿದ್ದಾರೆ.
ಯುದ್ಧಾನಂತರದ ಇಸ್ರೇಲ್ನ ಪಾತ್ರ ಮತ್ತು ನೋಟದ ಕುರಿತ ಯೋಜನೆ ಇದಾಗಿದೆ. ಅದಾಗ್ಯೂ ಪ್ಯಾಲೆಸ್ಟೀನ್ನ ಸ್ವಾಯತ್ತ ಸರ್ಕಾರಕ್ಕಾಗಿ ಅಮೆರಿಕದ ಪ್ರಸ್ತಾಪಗಳಿಗೆ ಇದು ವ್ಯತಿರಿಕ್ತವಾಗಿದೆ ಎನ್ನಲಾಗುತ್ತಿದೆ. ಪ್ರಧಾನಮಂತ್ರಿಗಳ ಕಚೇರಿ ಈ ಯೊಜನೆಯನ್ನು ಗುರುವಾರ ರಾತ್ರಿ ಪ್ರಕಟಿಸಿದೆ. 2007ರಲ್ಲಿ ಗಾಜಾ ಪಟ್ಟಿಯನ್ನು ಅತಿಕ್ರಮಿಸಿದ ಬಂಡುಕೋರ ಹಮಾಸ್ ಗುಂಪನ್ನು ಹತ್ತಿಕ್ಕಲು ಇಸ್ರೇಲ್ ನಿರ್ಧರಿಸಿರುವುದನ್ನು ಈ ಯೋಜನೆ ಪುನರುಚ್ಚರಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.