ಉಳ್ಳಾಲ, ಮೇ 7 (ಪಿಟಿಐ)– ಈ ಪ್ರದೇಶದಲ್ಲಿ ಅತ್ಯಧಿಕ ಪ್ರಮಾಣದ ಸ್ವಾಭಾವಿಕ ವಿಕಿರಣವಿದೆಯೆಂದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರಿಂದ, 30,000 ಜನಸಂಖ್ಯೆ ಹೊಂದಿರುವ ಮೀನುಗಾರಿಕೆಗೆ ಹೆಸರಾದ ಕರಾವಳಿ ಗ್ರಾಮ ಉಳ್ಳಾಲವು ವಿಶ್ವದ ಗಮನ ಸೆಳೆದಿದೆ.
ಅತ್ಯಧಿಕ ಸ್ವಾಭಾವಿಕ ವಿಕಿರಣ ಹೊಂದಿರುವ ವಿಶ್ವದ ಮೂರು ಸ್ಥಳಗಳ ಜೊತೆ ಈಗ ಉಳ್ಳಾಲ ನಾಲ್ಕನೇ ಮತ್ತು ದೇಶದ ಎರಡನೇ ಪ್ರದೇಶವಾಗಿ ಸೇರಿಕೊಂಡಿದೆ. ವಿಶ್ವದ ಇಂತಹ ಇತರ ಮೂರು ಪ್ರದೇಶಗಳೆಂದರೆ, ಬ್ರೆಜಿಲ್, ಚೀನಾದ ಕರಾವಳಿ ಗ್ರಾಮ ಹಾಗೂ ಕೇರಳದ ಕೊಲ್ಲಂ ಜಿಲ್ಲೆ.
ಸರ್ಕಾರಿ ವೈದ್ಯರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ನಿಷೇಧ
ಬೆಂಗಳೂರು, ಮೇ 7– ನರ್ಸಿಂಗ್ ಹೋಮ್ಗಳನ್ನು ನಿಯಂತ್ರಿಸಲು ಕಾನೂನು, ಸರ್ಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ನಿಷೇಧ ಹಾಗೂ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಅಗತ್ಯ ಸೇವಾ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.