ಕನ್ನಡ ಭಾಷೆಯನ್ನು ಹರಡುವುದಕ್ಕೆ ಹಲವು ಮಾರ್ಗಗಳಿವೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವುದು ಅದರಲ್ಲಿ ಒಂದು. ಅದು, ರಾಜ್ಯಕ್ಕೆ ಬಂದ ‘ಹೊರಗಿನ’ವರನ್ನು ‘ಒಳಗಿನ’ವರನ್ನಾಗಿ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಅನ್ಯಭಾಷಿಕರಿಗೆ ಕನ್ನಡ ನುಡಿಯ ಜೇನನ್ನು ಹಂಚುತ್ತಿರುವ ಸಂಸ್ಥೆ–ವ್ಯಕ್ತಿಗಳ ಪರಿಚಯ ಇಲ್ಲಿದೆ. ಜತೆಗೆ, ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ವಿವಿಧ ಬಣ್ಣ, ವಿನ್ಯಾಸಗಳಲ್ಲಿ ಕನ್ನಡದಲ್ಲಿ ವಿಪುಲವಾಗಿ ಮೈದಳೆಯುತ್ತಿರುವ ಮಕ್ಕಳ ಸಾಹಿತ್ಯದ ಬಗೆಗಿನ ನೋಟವಿದೆ. ಕನ್ನಡದ ಸಮೃದ್ಧ ನಾಳೆಗಳಿಗಾಗಿ ಕನ್ನಡಿಗರು ಏನು ಮಾಡಬೇಕು ಎನ್ನುವುದರ ಹೊಳಹು ಇಲ್ಲಿದೆ.
ಎಳೆಯರಿಗಾಗಿ ಬರೆಯುತ್ತಿರುವವರಲ್ಲಿ ಸಾಹಿತ್ಯ ರಚನೆಗೆ ಸಂಬಂಧಿಸಿದ ಗ್ರಹಿಕೆ ಬದಲಾಗುತ್ತಿರುವುದು, ಮಕ್ಕಳ ಸಾಹಿತ್ಯದಲ್ಲಿನ ಇತ್ತೀಚಿನ ದಿನಗಳ ಪ್ರಮುಖ ಬದಲಾವಣೆ. ಲೇಖಕ ಬರೆಯುವುದು ತನಗಾಗಿ, ತನ್ನ ತೃಪ್ತಿಗಾಗಿ ಎನ್ನುವ ಗ್ರಹಿಕೆ ಈ ಮೊದಲಿತ್ತು. ಈಗ, ಬರವಣಿಗೆಯ ಕೇಂದ್ರದಲ್ಲಿ ಮಕ್ಕಳನ್ನು ತಲಪುವ ಉದ್ದೇಶವಿದೆ.