ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಆಕ್ಷೇಪ ಆಹ್ವಾನ ಜೇನುಗೂಡಿಗೆ ಕಲ್ಲೆಸೆದಂತೆ

ಪರಿಷ್ಕೃತ ಪಠ್ಯದ ಕುರಿತು ಸಾರ್ವಜನಿಕರಿಂದಆಕ್ಷೇಪ ಆಹ್ವಾನ ಸರಿಯಾದ ಕ್ರಮವೇ?
Last Updated 10 ಜೂನ್ 2022, 20:28 IST
ಅಕ್ಷರ ಗಾತ್ರ

ಸಾರ್ವಜನಿಕರ ಅಭಿಮತದ ಆಧಾರದಲ್ಲಿ ತಿದ್ದುಪಡಿಯಾದ ಪಠ್ಯವು ಎಲ್ಲರಿಗೂ ಒಪ್ಪಿತವಾಗಬಹುದೇ? ಎಷ್ಟೋ ಜಾತಿಗಳು ಮತ್ತು ಗುಂಪುಗಳು ತಮಗೆ ಸಂಬಂಧಿಸಿದ ಪಾಠವು ಪಠ್ಯದಲ್ಲಿ ಸೇರಿಲ್ಲ ಎಂದು ಗದ್ದಲ ಎಬ್ಬಿಸಬಹುದು. ಆಗ ಮತ್ತೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗುವುದೇ? ಮತ್ತೆ ತಿದ್ದುಪಡಿ, ಮತ್ತೆ ಸಾರ್ವಜನಿಕ ಆಕ್ಷೇಪ ಆಹ್ವಾನ, ಮತ್ತೆ ತಿದ್ದುಪಡಿ... ಹೀಗೆ ಇದು ಕೊನೆಯಿಲ್ಲದಂತೆ ಸಾಗುತ್ತಲೇ ಇರಬಹುದು.

***

ಪಠ್ಯ ಪುಸ್ತಕಗಳು ನಮ್ಮ ಮನೋಧರ್ಮವನ್ನು ರೂಪಿಸುತ್ತವೆ. ಅವು ಕಲಿಸುವವರ–ಕಲಿಯುವವರ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತವೆ. ಯಾವ ಹಂತದ ಮಗುವಿಗೆ ಏನನ್ನು ಕಲಿಸಬೇಕು ಎಂಬುದಕ್ಕೆ ಒಂದು ಲೆಕ್ಕಾಚಾರ ಇದೆ.ಪಠ್ಯ ಪುಸ್ತಕ ರಚನೆಯಲ್ಲಿ ಪಾಲಿಸಬೇಕಾದ ಆಶಯ, ಶಿಸ್ತಿಗಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಎಂಬುದಿದೆ. ಅದರಡಿಯಲ್ಲಿಯೇ ಪಠ್ಯಗಳು ರಚನೆಯಾಗಬೇಕು. ಪಠ್ಯ ಪರಿಷ್ಕರಣೆ ಎಂಬುದು ಸುಲಭವೂ ಅಲ್ಲ; ಸರ್ವಮಾನ್ಯವೂ ಅಲ್ಲ. ಎಂಥ ಪಠ್ಯವೇ ಆದರೂ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಒಳಗೊಂಡಿರುತ್ತದೆ. ಏಕೆಂದರೆ ಏಕಾಭಿಪ‍್ರಾಯದ ಪಠ್ಯ ತಯಾರಿಕೆ ಎಲ್ಲ ಕಾಲಕ್ಕೂ ಸವಾಲಿನದ್ದೇ ಆಗಿದೆ. ಅದರಲ್ಲೂ ಬಹುತ್ವ ಭಾರತದಲ್ಲಿ ಇದು ಸದಾ ಸಂದಿಗ್ಧವೇ ಆಗಿರುತ್ತದೆ. ಕರ್ನಾಟಕದ ಪಠ್ಯಗಳು ರಾಜಕಾರಣದಿಂದ ಮುಕ್ತವಾಗಿರಬೇಕಾಗಿತ್ತು. ಆದರೆ, ಪಠ್ಯವನ್ನೇ ರಾಜಕಾರಣಗೊಳಿಸಿದ ಕಾರಣ ಶೈಕ್ಷಣಿಕ ಚರ್ಚೆಗಳು ನಗಣ್ಯವಾಗಿ ರಾಜಕಾರಣ ಮತ್ತು ಜಾತೀಯ ಚಹರೆಗಳ ಬಗೆಗೆ ಹೆಚ್ಚು ಚರ್ಚೆಗಳಾಗಿ ಒಟ್ಟಾರೆಯಾಗಿ ದಿಕ್ಕು ತಪ್ಪಿದ ಚರ್ಚೆಗಳಾಗಿ, ಗೊಂದಲವಲ್ಲದೇ ಬೇರೇನೂ ಇಲ್ಲದಂತೆ ಕಾಣುತ್ತಿದೆ.

ಪಠ್ಯ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಪಠ್ಯ ಪುಸ್ತಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕರ ಆಕ್ಷೇಪ ಆಹ್ವಾನಿಸಿ, ಅದರ ಆಧಾರದಲ್ಲಿ ಪಠ್ಯದಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಇದು ಹಿಂದೆಂದೂ ಕೇಳರಿಯದಂತಹ ಕ್ರಮ. ಪಠ್ಯ ರಚನೆ ಅಥವಾ ಪರಿಷ್ಕರಣೆ ಎನ್ನುವುದು ಯಾವ ಬರಹಕ್ಕೆ ಹೆಚ್ಚು ಮತ ಬಂದಿದೆ ಎಂಬುದರ ಆಧಾರದ ಮೇಲೆ ಮಾಡುವಂತಹ ಕೆಲಸ ಅಲ್ಲ. ಮಕ್ಕಳ ಪಠ್ಯ ರಚನೆ ಅಥವಾ ಪರಿಷ್ಕರಣೆಯು ಶೈಕ್ಷಣಿಕವಾಗಿ, ಮನಶ್ಶಾಸ್ತ್ರೀಯವಾಗಿ, ಸಾಂಸ್ಕೃತಿಕವಾಗಿ ಇರಬೇಕು. ಪಠ್ಯ ಪುಸ್ತಕ ರಚನೆ ಅಥವಾ ಪರಿಷ್ಕರಣೆಯು ರಾಜಕೀಯವಾದ ಪ್ರಕ್ರಿಯೆ ಅಲ್ಲ ಎಂಬುದು ಪಠ್ಯ ಪುಸ್ತಕವನ್ನು ಸಿದ್ಧಪಡಿಸುವವರ ಗಮನದಲ್ಲಿ ಸದಾ ಇರಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಈ ವಿಚಾರಕ್ಕೆ ವಿರುದ್ಧವಾಗಿ ವರ್ತಿಸಿದ್ದೇ ರಾಜ್ಯದ ಪಠ್ಯ ಪುಸ್ತಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿವಾದ ಸೃಷ್ಟಿಯಾಗುತ್ತಿದೆ. ಭಗತ್‌ ಸಿಂಗ್ ಪಾಠ ಕೈಬಿಟ್ಟಿದ್ದಾರೆ, ನಾರಾಯಣ ಗುರು ಪಾಠ ಕೈಬಿಟ್ಟಿದ್ದಾರೆ, ಕುವೆಂಪು ಅವರಿಗೆ, ಬಸವಣ್ಣನವರಿಗೆ ಅವಮಾನ ಆಗಿದೆ ಎಂಬುದೆಲ್ಲ ಈಗ ಹಳೆಯದಾಗಿದೆ. ದಿನವೂ ಹೊಸ ಹೊಸತು ವಿವಾದಗಳು ಮುನ್ನೆಲೆಗೆ ಬರುತ್ತಿವೆ. ಒಕ್ಕಲಿಗರು, ಲಿಂಗಾಯತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವು ಜಾತಿ ಕೇಂದ್ರಿತವೂ ರಾಜಕೀಯ ಪಕ್ಷವೊಂದರ ಸಿದ್ಧಾಂತ ಕೇಂದ್ರಿತವೂ ಆದಂತೆ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಆಕ್ಷೇಪ ಆಹ್ವಾನಿಸಿ, ಅದರಂತೆ ಪಾಠ ತಿದ್ದಲು ಹೊರಟರೆ ಜೇನು ಗೂಡಿಗೆ ಕಲ್ಲೆಸೆದಂತೆ ಆಗಬಹುದು.ಕರ್ನಾಟಕದಲ್ಲಿ 1,503 ಜಾತಿ, ಉಪ ಜಾತಿಗಳಿವೆ. ಹಲವು ರಾಜಕೀಯ ಪಕ್ಷಗಳಿವೆ. ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸುವ ಗುಂಪುಗಳು ಇವೆ, ಜನರು ಇದ್ದಾರೆ. ತಮಗೆ ಸಂಬಂಧಿಸಿದ ಪಾಠವೊಂದು ಪಠ್ಯದಲ್ಲಿ ಇರಲೇಬೇಕು ಎಂದು ಈ ಎಲ್ಲರೂ ಪ್ರತಿಪಾದಿಸುವುದಿಲ್ಲ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ.

ಈ ಎಲ್ಲರೂ ತಮ್ಮ ಅಭಿಮತಗಳನ್ನು ಸಲ್ಲಿಸಿದರೆ ಅದನ್ನು ಕ್ರೋಡೀಕರಿಸುವುದೇ ದೊಡ್ಡದೊಂದು ಕೆಲಸ. ಕ್ರೋಡೀಕರಿಸಿ, ವಿಂಗಡಿಸಿ, ಅದರ ಆಧಾರದಲ್ಲಿ ಪಠ್ಯವನ್ನು ತಿದ್ದುವವರು ಯಾರು? ಏಕೆಂದರೆ, ‘ಪಠ್ಯ ಪರಿಶೀಲನಾ ಸಮಿತಿ’ಯನ್ನು ವಿಸರ್ಜಿಸಲಾಗಿದೆ. ಸರ್ಕಾರವುಪಠ್ಯ ತಿದ್ದಲು ಹೊಸ ಸಮಿತಿ ರಚಿಸಲೇಬೇಕಾಗುತ್ತದೆ. ಹೊಸ ಸಮಿತಿ ರಚನೆಯಾಗಿ, ಪಠ್ಯ ತಿದ್ದುಪಡಿಯಾಗಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ. ಶಾಲೆಗಳು ಈಗಾಗಲೇ ಆರಂಭವಾಗಿವೆ. ಆದರೆ, ಮಕ್ಕಳ ಕೈಯಲ್ಲಿ ಪಠ್ಯ ಪುಸ್ತಕ ಇಲ್ಲ. ಈಗಿನ ಸನ್ನಿವೇಶವನ್ನು ನೋಡಿದರೆ, ಈ ವರ್ಷವಿಡೀ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುವ ಲಕ್ಷಣವೂ ಕಾಣಿಸುತ್ತಿಲ್ಲ.

ಸಾರ್ವಜನಿಕರ ಅಭಿಮತದ ಆಧಾರದಲ್ಲಿ ತಿದ್ದುಪಡಿಯಾದ ಪಠ್ಯವು ಎಲ್ಲರಿಗೂ ಒಪ್ಪಿತವಾಗಬಹುದೇ? ಎಷ್ಟೋ ಜಾತಿಗಳು ಮತ್ತು ಗುಂಪುಗಳು ತಮಗೆ ಸಂಬಂಧಿಸಿದ ಪಾಠವು ಪಠ್ಯದಲ್ಲಿ ಸೇರಿಲ್ಲ ಎಂದು ಗದ್ದಲ ಎಬ್ಬಿಸಬಹುದು. ಆಗ ಮತ್ತೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗುವುದೇ? ಮತ್ತೆ ತಿದ್ದುಪಡಿ, ಮತ್ತೆ ಸಾರ್ವಜನಿಕ ಆಕ್ಷೇಪ ಆಹ್ವಾನ, ಮತ್ತೆ ತಿದ್ದುಪಡಿ... ಹೀಗೆ ಇದು ಕೊನೆಯಿಲ್ಲದಂತೆ ಸಾಗುತ್ತಲೇ ಇರಬಹುದು.

ಸಾರ್ವಜನಿಕ ಅಭಿಮತ ಆಲಿಸಿಯೇ ಎಲ್ಲವನ್ನೂ ಮಾಡಬಹುದು ಎಂಬುದು ಹುಂಬತನ. ಪಠ್ಯ ಪರಿಷ್ಕರಣೆಯಂತಹ ವಿಚಾರ ಅಪಾರ ವಿದ್ವತ್ತು, ಶೈಕ್ಷಣಿಕ ಶಿಸ್ತು ಬೇಡುವ ಕೆಲಸ. ಯಾರೋ ಏನೋ ಅಂದರು ಎಂಬುದರ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಎನ್ನುವುದೇ ಹಾಸ್ಯಾಸ್ಪದ. ಸರ್ಕಾರವು ‘ಪಠ್ಯ ಪರಿಶೀಲನೆ’ಗಾಗಿ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರಚನೆ ಮಾಡುವಾಗ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡಿದೆಯೇ?

ಅಭಿಪ್ರಾಯ–ಭಿನ್ನಾಭಿಪ್ರಾಯಗಳ ನಡುವೆಯೇ ಹೆಚ್ಚು ಜನರಿಗೆ ಒಪ್ಪಿತವೆನ್ನಿಸಬಹುದಾದ ಪಠ್ಯಗಳನ್ನು ಸಿದ್ಧ ಮಾಡುವುದು ಸದ್ಯದ ಆದರ್ಶವೆಂದು ಭಾವಿಸಬೇಕಾಗುತ್ತದೆ. ಆದ್ದರಿಂದಲೇ ಪಠ್ಯಗಳ ರಚನೆಯಲ್ಲಿ ವಿದ್ವನ್ಮಂಡಳಿಯ ಪಾತ್ರ ಪ್ರಮುಖ ಆಗಬೇಕು. ಆಗ ಶಿಕ್ಷಣವೇ ಮುಖ್ಯವಾಗಿ ಉಳಿದೆಲ್ಲವನ್ನೂ ನಗಣ್ಯವಾಗಿಸುವುದು ಸಾಧ್ಯವಾಗುತ್ತದೆ.

ಮರುಪರಿಷ್ಕೃತ ಪಠ್ಯವನ್ನು ಅಳವಡಿಸಿ, ಆಕ್ಷೇಪಗಳನ್ನು ಸಲ್ಲಿಸುವ ಅವಕಾಶಗಳನ್ನು ತೆರೆದ ತಕ್ಷಣ ಸರ್ಕಾರವು ಸಮಸ್ಯೆಗಳನ್ನು ಬಗೆಹರಿಸಿದಂತಾಗುವುದಿಲ್ಲ. ಬದಲಿಗೆ ಸಮಸ್ಯೆಗಳನ್ನು ಮೈಮೇಲೆ ಎಳೆದು ಕೊಂಡಂತಾಗುತ್ತದೆ. ಪಠ್ಯಪುಸ್ತಕಗಳ ಆಕ್ಷೇಪಗಳನ್ನು ನಿಂತ ನಿಲುವಿನಲ್ಲೇ ಬಗೆಹರಿಸಿಕೊಳ್ಳಬೇಕೇ ಹೊರತು ಮುಂದೂಡುತ್ತಾ ಹೋಗಬಾರದು. ಚರಿತ್ರೆ, ಮಾಹಿತಿ ಮುಂತಾದವು ತಿದ್ದಿದ ತಕ್ಷಣ ಪರಿಹಾರ ಹೊಂದುವುದಿಲ್ಲ.

ಸರ್ಕಾರವು ಪಠ್ಯಗಳ ವಿಷಯದಲ್ಲಿ ಅಂತರವನ್ನು ಕಾಯ್ದುಕೊಳ್ಳಲೇಬೇಕು. ಇಲ್ಲದಿದ್ದರೆ ಅದು ಅಭಿಪ್ರಾಯಗಳ ಹೇರಿಕೆಯ ಪರವಹಿಸಿದಂತೆ ಆಗುತ್ತದೆ. ಸರ್ಕಾರವು ಸದಾ ನಿಷ್ಪಕ್ಷಪಾತವಾಗಿಯೇ ಇರಬೇಕಾಗುವುದರಿಂದ ಪಠ್ಯದ ವಿಷಯದಲ್ಲಿಯೂ ಹಟವು ಸರಿಯಾದ ನಡೆಯಲ್ಲ. ಪಠ್ಯವು ಕೇವಲ ಮುದ್ರಿತ ಪುಸ್ತಕಗಳಲ್ಲ; ಅಥವಾ ಕೇವಲ ಸರಕೂ ಅಲ್ಲ. ಅವು ಮಕ್ಕಳ ವ್ಯಕ್ತಿತ್ವವನ್ನು ಅರಳಿಸುವ ಕುಸುಮಗಳು. ಆದ್ದರಿಂದ ಸರ್ಕಾರವು ಎಲ್ಲರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು. ನಾಡಿನ ಅಸಂಖ್ಯಾತ ಲೇಖಕರ, ಬುದ್ಧಿಜೀವಿಗಳ ಅಭಿಪ್ರಾಯವನ್ನು ಸರ್ಕಾರವು ಅನಿವಾರ್ಯವಾಗಿ ಕೇಳಬೇಕಾದ ಸಂದಿಗ್ಧದಲ್ಲಿದೆ. ಹಾಗೆ ಕೇಳಿದಲ್ಲಿ ಸರ್ಕಾರಕ್ಕೆ ಒಳಿತೇ ಹೊರತು ಕೆಡುಕಾಗುವಂಥದ್ದೇನೂ ಇಲ್ಲ.

ಆದ್ದರಿಂದ ತಿದ್ದಲ್ಪಟ್ಟ ಪಠ್ಯಗಳು ಸರ್ವಸಮ್ಮತವಾಗಿಲ್ಲವೆಂಬ ಅಂಶಗಳನ್ನು ಮನಗಂಡು ಹಳೆಯ ಪಠ್ಯಗಳನ್ನೇ ಮುಂದುವರಿಸುವುದು ಒಳಿತು. ಈ ವಿಷಯದಲ್ಲಿ ವ್ಯಕ್ತಿಗಳು ಮುಖ್ಯವಲ್ಲ. ತಿದ್ದಿರುವ ಸಮಿತಿ, ತಿದ್ದಿಸಿರುವ ಶಿಕ್ಷಣ ಮಂತ್ರಿ ಇವರೆಲ್ಲರಿಗಿಂತ ನಾಡಿನ ಮಕ್ಕಳ ಹಿತ ಮುಖ್ಯ ಆಗಬೇಕು. ಹೊಸ ಸಮಿತಿ ನೇಮಿಸಲು ಸರ್ಕಾರಕ್ಕೆ ಅವಕಾಶವಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪುಸ್ತಕಗಳಿಗಿಂತ ಉತ್ತಮ ಪಠ್ಯಗಳನ್ನು ನಂತರ ಮಾಡಲು ಅವಕಾಶವಿದೆ. ಉತ್ತಮ ಶೈಕ್ಷಣಿಕ ವಾತಾವರಣವನ್ನು ಕರ್ನಾಟಕದಲ್ಲಿ ಮಾಡಬೇಕಾಗಿದೆ. ಇದು ಸರ್ಕಾರದ ಆದ್ಯತೆಯಾಗಬೇಕಾಗಿದೆ.

ಲೇಖಕ: ಕನ್ನಡ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT