ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಣಾಳಿಕೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಕಾಂಗ್ರೆಸ್‌ನ ಸವಾಲು

Published 13 ಏಪ್ರಿಲ್ 2024, 0:30 IST
Last Updated 13 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಮತದಾರರ ಕೈಯಲ್ಲಿ ಇಂದ್ರ– ಚಂದ್ರರನ್ನೇ ತಂದು ಇರಿಸುತ್ತೇವೆ ಎಂಬಂತಹ ಭರವಸೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಕೊಡುತ್ತವೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಭರವಸೆಗಳನ್ನು ಈ ಪಕ್ಷಗಳು ಮರೆಯುತ್ತವೆ. ಅವಾಸ್ತವಿಕ ಮತ್ತು ಅತಿರೇಕದ ಭರವಸೆಗಳನ್ನು ನಿಷೇಧಿಸಬೇಕು ಎಂಬ ಪ್ರಸ್ತಾಪ ಹಿಂದೊಮ್ಮೆ ಕೇಳಿಬಂದಿತ್ತು. ಆದರೆ, ಅದು ವಿವೇಕಯುತವಾದ ಕ್ರಮ ಅಲ್ಲ. ಪ್ರಣಾಳಿಕೆ ಎಂಬುದು ರಾಜಕೀಯ ಪಕ್ಷಗಳು ಮತ್ತು ಮತದಾರರ ನಡುವಣ ವಿಚಾರ. ಮತದಾರರು ಅವುಗಳ ಕುರಿತು ತೀರ್ಮಾನ ಮಾಡಬೇಕು. ಜಾರಿಗೊಳಿಸಬಹುದಾದ ಭರವಸೆಗಳಿಗಿಂತಲೂ ಹೆಚ್ಚಾಗಿ ರಾಜಕೀಯ ನಿಲುವುಗಳು ಮತ್ತು ಪಕ್ಷಗಳು ಮಾಡಿಕೊಳ್ಳಬಹುದಾದ ಹೊಂದಾಣಿಕೆಗಳನ್ನು ಈ ಪ್ರಣಾಳಿಕೆಗಳು ಪ್ರತಿನಿಧಿಸುತ್ತವೆ. ಕಾಂಗ್ರೆಸ್‌ ಪಕ್ಷವು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕೂಡ ಈ ದೃಷ್ಟಿಕೋನದಲ್ಲಿಯೇ ನೋಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅದರ ನೀತಿಗಳು ಮತ್ತು ತೆಗೆದುಕೊಂಡ ನಿರ್ಧಾರಗಳ ಕುರಿತು ಕಾಂಗ್ರೆಸ್‌ ಪಕ್ಷವು ಮುಖ್ಯವಾಗಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಟೀಕೆಗಳೇ ಈ ಪ್ರಣಾಳಿಕೆಯಲ್ಲಿರುವ ಭರವಸೆಗಳಿಗೆ ಆಧಾರವಾಗಿವೆ. ಈಚಿನ ವರ್ಷಗಳಲ್ಲಿ ಬಿಜೆಪಿ ಮರುರೂಪಿಸಿರುವ ರಾಜಕೀಯ ವ್ಯವಸ್ಥೆಯಲ್ಲಿ, ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ಕಾಂಗ್ರೆಸ್‌ ಯೋಚಿಸುತ್ತಿದೆ ಎಂಬುದನ್ನು ಈ ಭರವಸೆಗಳು ಸೂಚಿಸುತ್ತಿವೆ. 

ಸಮಗ್ರ ನ್ಯಾಯ ಎಂದು ಕಾಂಗ್ರೆಸ್‌ ಪಕ್ಷವು ಭಾವಿಸಿರುವ ವಿಚಾರಗಳನ್ನು ಖಾತರಿಪಡಿಸಲು
ಪ್ರಣಾಳಿಕೆಯಲ್ಲಿ ವಿಶೇಷ ಗಮನ ನೀಡಲಾಗಿದೆ. ನಿರುದ್ಯೋಗ, ಬಡತನ ಮತ್ತು ಅಸಮಾನತೆ ನಿವಾರಣೆ ಹಾಗೂ ಆರೋಗ್ಯ ಸೇವೆ ಮತ್ತು ರೈತರ ಅಭಿವೃದ್ಧಿ ಕುರಿತಂತೆ ಹಲವು ಭರವಸೆಗಳನ್ನು ನೀಡಲಾಗಿದೆ. ಪ್ರಣಾಳಿಕೆಗೆ ‘ನ್ಯಾಯಪತ್ರ’ ಎಂದು ಹೆಸರಿಡಲಾಗಿದೆ. ಅದರಲ್ಲಿ ನ್ಯಾಯದ ಐದು ಸ್ತಂಭಗಳು ಮತ್ತು 25
ಗ್ಯಾರಂಟಿಗಳನ್ನು ಉಲ್ಲೇಖಿಸಲಾಗಿದೆ. ಹೊಸ ಜಾತಿ ಗಣತಿ, ಮೀಸಲಾತಿಗೆ ಶೇ 50ರ ಮಿತಿ ರದ್ದತಿ, ವೃತ್ತಿ ತರಬೇತಿಯ ಹಕ್ಕು (ಅಪ್ರೆಂಟಿಸ್‌ಶಿಪ್‌), ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯ ಖಾತರಿ, ಆರೋಗ್ಯ ರಕ್ಷಣೆಗಾಗಿ ರಾಜಸ್ಥಾನ ಮಾದರಿಯ ವಿಮೆ, ಅಗ್ನಿಪಥ ಯೋಜನೆ ರದ್ದು ಮುಂತಾದ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ವಾಕ್‌ ಸ್ವಾತಂತ್ರ್ಯಕ್ಕೆ ಅಡಚಣೆಯಾಗಿರುವ ಕಾನೂನುಗಳು ಮತ್ತು ಈಗ ಕೇಂದ್ರೀಯ ತನಿಖಾ ಸಂಸ್ಥೆಗಳು ಕಿರುಕುಳ ನೀಡಲು ಬಳಸುವ ಕಾನೂನುಗಳ ಮರುಪರಿಶೀಲನೆಯ ಭರವಸೆ ನೀಡಲಾಗಿದೆ. ಪ್ರತಿ ಬಡ ಕುಟುಂಬಕ್ಕೂ ವರ್ಷಕ್ಕೆ ₹ 1 ಲಕ್ಷ ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕೆಲವು ವಿಷಯಗಳ ಕುರಿತು ಏನನ್ನೂ ಹೇಳದೇ ಇರುವುದು ಕೂಡ ಗಮನಾರ್ಹವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಮರುಸ್ಥಾಪನೆ ಕುರಿತು ಪ್ರಣಾಳಿಕೆಯು ಮೌನವಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಕುರಿತು ಕೂಡ ಏನನ್ನೂ ಹೇಳಿಲ್ಲ. 

ಪ್ರಣಾಳಿಕೆಗಳಲ್ಲಿ ಕೊಟ್ಟಿರುವ ಭರವಸೆಗಳು ಮತ್ತು ಬಿಟ್ಟಿರುವ ಅಂಶಗಳ ಕುರಿತು ಚರ್ಚೆ ನಡೆಯುತ್ತದೆ; ಆದರೆ, ಪಕ್ಷಗಳಿಗೆ ತಮ್ಮ ಸಂದೇಶಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆಯೇ ಎಂಬುದು ಇಲ್ಲಿ ಹೆಚ್ಚು ಮಹತ್ವದ ವಿಚಾರವಾಗಿದೆ. ಭರವಸೆಗಳು ಜನರ ಮನಮುಟ್ಟಬೇಕು; ಆದರೆ, ಅದು ಆ ಸಂದರ್ಭದಲ್ಲಿ ಜನರಲ್ಲಿ ಪ್ರಬಲವಾಗಿರುವ ಆಕಾಂಕ್ಷೆಗಳು ಮತ್ತು ರಾಜಕೀಯ ಹಾಗೂ ಇತರ ಭಾವನೆಗಳ ಮೇಲೆ ಅವಲಂಬಿತವಾಗಿದೆ. ಯಾವೆಲ್ಲ ರೀತಿಯ ಭರವಸೆಗಳನ್ನು ನೀಡಲಾಗಿದೆ ಎಂಬುದರ ಮೇಲೆಯೂ ಅದು ಅವಲಂಬಿತ ಆಗಿರಬಹುದು. ತನ್ನ ಸಂದೇಶವನ್ನು ಜನರಿಗೆ ತಲುಪಿಸುವುದಕ್ಕಾಗಿ ಪಕ್ಷಗಳಲ್ಲಿ ಸಮರ್ಪಕ ವ್ಯವಸ್ಥೆ ಮತ್ತು ಜನರು ಕೂಡ ಬೇಕು. 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯ ವೇಳೆಯಲ್ಲಿ ತನ್ನ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿತ್ತು. ಆದರೆ, ಕರ್ನಾಟಕ ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಸಂದೇಶವನ್ನು ತಲುಪಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಈಗ ತನ್ನ ಪ್ರಣಾಳಿಕೆಯನ್ನು ಜನರಿಗೆ ತಲುಪಿಸುವುದು ಮತ್ತು ಅದನ್ನು ವಿಶ್ವಾಸಾರ್ಹವಾಗಿಸುವುದು ಪಕ್ಷದ ಮುಂದೆ ಇರುವ ಸವಾಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT