ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಇದು ಪ್ರಕೃತಿ ವಿಕೋಪವಲ್ಲ ಅಭಿವೃದ್ಧಿಯ ಪ್ರತಾಪ

Last Updated 8 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕಟ್ಟೆ ಕುಸಿದಿದ್ದರಿಂದ ಕೆಲವರು ಪ್ರಾಣ ತೆತ್ತು, 170ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಅಬ್ಬರಕ್ಕೆ ರಸ್ತೆ- ಸೇತುವೆ ಕುಸಿದಿವೆ, ಅಣೆಕಟ್ಟೆಗಳು ಒಡೆದಿವೆ, ಜಲವಿದ್ಯುದಾಗಾರ ಭಗ್ನವಾಗಿ ಕಾಂಕ್ರೀಟ್‌ ಸುರಂಗಗಳಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಮಳೆ, ಗಾಳಿ, ಹಿಮಕುಸಿತ ಯಾವುದೂ ಇಲ್ಲದೆ ಸಂಭವಿಸಿದ ಈ ದುರಂತಕ್ಕೆ ಭೂಮಿಯ ತಾಪಮಾನದ ಹೆಚ್ಚಳವೇ ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ. ಹಿಮಾಲಯದ ಕಣಿವೆಗಳಲ್ಲಿ ಹೆಪ್ಪುಗಟ್ಟಿದ ನೀರು ಮೊಸರಿನಂತೆ ಮೆಲ್ಲಗೆ, ವರ್ಷಕ್ಕೆ ಹತ್ತಿಪ್ಪತ್ತು ಮೀಟರ್‌ ವೇಗದಲ್ಲಿ ತಗ್ಗಿನ ಕಡೆ ಜಾರುತ್ತಿರುತ್ತದೆ. ಅಂಥ ಹಿಮನದಿಯ ಕೆಳತುದಿಯಲ್ಲಿ ಬಂಡೆಗಲ್ಲು, ನೀರ್ಗಲ್ಲುಗಳು ಕಟ್ಟೆಯಂತೆ ನಿಂತಿರುತ್ತವೆ. ಎತ್ತರದಲ್ಲಿದ್ದ ಹಿಮವೆಲ್ಲ ಕರಗಿ ನೀರಾಗಿ ಹರಿಯುತ್ತ ಇಲ್ಲಿ ಸಂಚಯವಾಗಿ, ಸರೋವರವಾಗಿ, ಭಾರ ಜಾಸ್ತಿಯಾದಾಗ ಕಟ್ಟೆ ಕುಸಿಯುತ್ತದೆ. ಜಗತ್ತಿನ ಎಲ್ಲ ಹಿಮಪರ್ವತಗಳಲ್ಲೂ ಇಂಥ ಕಟ್ಟೆಗಳ, ಹಿಮಸರೋವರಗಳ ಸಂಖ್ಯೆ ಈಗೀಗ ಹೆಚ್ಚುತ್ತಿದೆ. 2013ರಲ್ಲಿ ಕೇದಾರನಾಥದ ಬಳಿ ಇಂಥದ್ದೇ ಹಿಮಕಟ್ಟೆ ಜಡಿಮಳೆಯಿಂದಾಗಿ ತುಂಬಿ ಕುಸಿದು 5,700ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ತದನಂತರ ಹಿಮಾಲಯದುದ್ದಕ್ಕೂ ಸಮೀಕ್ಷೆ ನಡೆಸಿದ್ದ ಸ್ವಿಸ್‌ ಸಂಶೋಧಕರು ಈ ಪರ್ವತಮಾಲೆಯಲ್ಲಿ ಇಂಥ 251 ಹಿಮ ಸರೋವರಗಳಿವೆಯೆಂದೂ ಅವುಗಳಲ್ಲಿ 104 ಅಪಾಯಕಾರಿಯೆಂದೂ ಎಚ್ಚರಿಸಿದ್ದರು. ಮತ್ತೆ 2019ರಲ್ಲಿ ಜರ್ಮನಿಯ ಪೋಟ್ಸಡ್ಯಾಮ್‌ ಸಂಶೋಧಕರು ಮಧ್ಯ ಹಿಮಾಲಯದಲ್ಲೇ ಅಂಥ ಹಿಮಕಟ್ಟೆಗಳು ಜಾಸ್ತಿ ಇವೆ ಎಂದು ಗುರುತಿಸಿದ್ದರು. ಎರಡು ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಗ್ಲೇಸಿಯರ್‌ ತಜ್ಞರು ಕೇಂದ್ರ ಸರ್ಕಾರಕ್ಕೆ ಇಂಥ ಅಪಾಯಕಟ್ಟೆಗಳ ಮೇಲೆ ಕಣ್ಣಿಡಬೇಕಾದ ತುರ್ತು ಹಾಗೂ ನಿಭಾಯಿಸಬೇಕಾದ ವಿಧಾನಗಳ ಬಗ್ಗೆ ಸಲಹೆಯನ್ನೂ ನೀಡಿದ್ದರು. ಯಾರೂ ಗಮನ ಹರಿಸಿರಲಿಲ್ಲ. ಇದೀಗ ಇಸ್ರೊ ಮತ್ತು ರಕ್ಷಣಾ ಸಂಶೋಧನಾ ಇಲಾಖೆಯ ತಜ್ಞರನ್ನು ಸಮೀಕ್ಷೆಗೆ ಕರೆಸಲಾಗುತ್ತಿದೆ. ವಿಪತ್ತು ಸಂಭವಿಸಿದ ನಂತರ ಧಿಗ್ಗನೆದ್ದು ವರದಿ ತಯಾರಿಸುವಲ್ಲಿ ನಾವು ಸದಾ ಮುಂದು.

ಹಿಮಾಲಯ ಪರ್ವತಮಾಲೆ ಸದಾ ಬೆಳೆಯು ತ್ತಿದೆ. ಗುರುತ್ವ ಅದನ್ನು ಸದಾ ಕೆಳಕ್ಕೆ ಕೆಡವುತ್ತಿರು ತ್ತದೆ. ಅಲ್ಲಿ ಭೂಕಂಪನ, ಬಂಡೆಕುಸಿತ, ಹಿಮ ಕುಸಿತ, ಅನಿರೀಕ್ಷಿತ ಕಂದರಗಳ ನಿರ್ಮಾಣ, ಹಿಮನದಿಗಳ ಬಿರುಕು ಇವೆಲ್ಲ ಪದೇಪದೇ ಆಗುತ್ತಿರುತ್ತವೆ. ಅಂಥ ಅಸ್ಥಿರ ಭೂಪ್ರದೇಶ
ದಲ್ಲಿ ಮನುಷ್ಯರ ಅನುಕೂಲಕ್ಕೆಂದು ರಸ್ತೆ, ಸುರಂಗ, ಸೇತುವೆ, ರೋಪ್‌ವೇ, ಅಣೆಕಟ್ಟು ಹೀಗೆ ಏನನ್ನೇ ನಿರ್ಮಿಸಿದರೂ ಅವು ಆಗೀಗ ಮನುಷ್ಯರಿಗೇ ಕಂಟಕ ತರುವ ಸಂಭವ ಹೆಚ್ಚಿಗೆ ಇರುತ್ತದೆ. ಅದರಲ್ಲೂ ಭೂಮಿಯ ತಾಪಮಾನ ಏರುತ್ತಿರುವ ಈ ಯುಗದಲ್ಲಿ ಅಲ್ಲಿ ಯಾವುದೇ ಬಗೆಯ ನಿರ್ಮಾಣಕ್ಕೂ ಕಟ್ಟೆಚ್ಚರ ಬೇಕಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಹಿಮಾಲಯದಲ್ಲಿ (ಹಾಗೂ ನಮ್ಮ ಪಶ್ಚಿಮ ಘಟ್ಟಗಳಲ್ಲಿ) ಅತ್ಯುಚ್ಚ ಸುರಕ್ಷಾ ಮಾನದಂಡಗಳು ಜಾರಿಯಲ್ಲಿ ಇರಬೇಕಾಗುತ್ತದೆ. ಆದರೆ ಅದಕ್ಕೆ ತದ್ವಿರುದ್ಧದ ವಿದ್ಯಮಾನಗಳು ಅಲ್ಲಿ ನಡೆಯುತ್ತಿವೆ. ಚಾರ್‌ಧಾಮ್‌ ಯಾತ್ರಾರ್ಥಿಗಳಿಗಾಗಿ 19 ಮೀಟರ್‌ ಅಗಲದ ವಿಶಾಲ ಹೆದ್ದಾರಿಯ ನಿರ್ಮಾಣದ ಮಹಾಯೋಜನೆ ಕಳೆದ ವರ್ಷ ಹಿಮಾಲಯದಲ್ಲಿ ಜಾರಿಗೆ ಬಂದಿತ್ತು. ಎಲ್ಲ ಸುರಕ್ಷಾ ನಿಯಮಗಳನ್ನೂ ಪರಿಸರ ಕಾನೂನುಗಳನ್ನೂ ಧಿಕ್ಕರಿಸಿ ಲೆಕ್ಕವಿಲ್ಲದಷ್ಟು ಮರಗಳನ್ನು ಕೆಡವಿದ್ದು, ಕಡಿದಾದ ಪರ್ವತಗಳನ್ನು ಕೆತ್ತಿ ಬೀಳಿಸಿದ್ದರ ಸಾಕ್ಷ್ಯಗಳು ಸಿಕ್ಕಿದ್ದವು. ‘ನೀವು ರೂಪಿಸಿದ ಕಾನೂನು ಕಟ್ಟಲೆಗಳನ್ನು ನೀವೇ ಏಕೆ ಧಿಕ್ಕರಿಸಿದ್ದೀರಿ?’ ಎಂದು ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರವನ್ನೂ ರಸ್ತೆ ಸಾರಿಗೆ ಸಚಿವಾಲಯವನ್ನೂ ಕೇಳಿತ್ತು. ಈಗಂತೂ ಹಿಮಾಲಯದ ಪಾದಭೂಮಿಯಲ್ಲಿ 24 ಅಣೆಕಟ್ಟೆಗಳು ನಿರ್ಮಾಣ ಹಂತದಲ್ಲಿವೆ. 30ಕ್ಕೂ ಹೆಚ್ಚು ಜಲವಿದ್ಯುತ್‌ ಯೋಜನೆಗಳು ನೀಲನಕ್ಷೆಯಲ್ಲಿವೆ. ಅಭಿವೃದ್ಧಿಯ ಹುಚ್ಚು ಧಾವಂತದಲ್ಲಿ ಅಸ್ಥಿರ ಯೋಜನೆಗಳನ್ನು ಜಾರಿಗೆ ತಂದರೆ ಅದರಿಂದಾಗುವ ದುರಂತಗಳಿಗೆ ಶ್ರಮಿಕರು, ಸಾಮಾನ್ಯ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳೇ ಬಲಿಯಾಗುತ್ತಾರೆ. ಅಂಥ ದುರಂತಗಳನ್ನು ‘ನಿಸರ್ಗ ವಿಕೋಪ’ದ ಫಲ ಎಂತಲೂ ಹೇಳುವಂತಿಲ್ಲ. ಬದಲಿಗೆ ಅವು ಅಪ್ಪಟ ಮಾನವಕೃತ್ಯಗಳೆಂದೇ ವರ್ಗೀಕರಿಸಬೇಕಾಗುತ್ತದೆ. ಪರಿಹಾರ ಮತ್ತು ನಷ್ಟಭರ್ತಿಯ ರೂಪದಲ್ಲಿ ದೇಶದ ತೆರಿಗೆದಾರರು ದಂಡ ತೆರುತ್ತಿದ್ದರೆ ಅದಕ್ಕೆ ಹೊಣೆಗಾರರಾದ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ನಿರುಮ್ಮಳವಾಗಿ ಇನ್ನೊಂದು ಯೋಜನೆಯ ಸೂತ್ರ ಹಾಕುತ್ತಿರುತ್ತಾರೆ. ದುರಂತವೆಂದರೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT