ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ನಲುಗಿದ ಗ್ರಾಮೀಣ ಭಾರತ: ದುರಿತ ಕಾಲದ ದುಸ್ತರ ಬದುಕು

ಬೆಳೆ ಕೊಯ್ಲಿಗೆ ಸಮಸ್ಯೆ | ಮತ್ತೊಂದು ಆರ್ಥಿಕ ಪರಿಹಾರ ಪ್ಯಾಕೇಜ್ ಸಿದ್ಧಪಡಿಸುತ್ತಿದೆ ಕೇಂದ್ರ
Last Updated 6 ಏಪ್ರಿಲ್ 2020, 10:44 IST
ಅಕ್ಷರ ಗಾತ್ರ
ADVERTISEMENT
""
""
""
""
""

ಕೊರೊನಾ ವೈರಸ್‌ ಹರಡದಂತೆ ತಡೆಯಲು ಹೇರಿರುವ ಲಾಕ್‌ಡೌನ್‌ಗೆ ಭಾರತದ ಆತ್ಮವೆನಿಸಿದ ಗ್ರಾಮೀಣ ಪ್ರದೇಶಗಳು ಅಕ್ಷರಶಃ ನಲುಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿರುವುದು ವರದಿಯಾಗಿಲ್ಲ. ಆದರೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದವರಿಗೆ ಇದ್ದಕ್ಕಿದ್ದಂತೆ ಸಂಪಾದನೆ ನಿಂತು ಹೋಗಿದ್ದು ಅವರ ಬದುಕು ದುಸ್ತರಗೊಂಡಿದೆ.

ಹಳ್ಳಿಗಳಲ್ಲೇ ಉಳಿದು ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರೂ ಈಗಿನ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಬೆಳೆದ ಹಣ್ಣು, ತರಕಾರಿಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಿಲ್ಲ. ತಮ್ಮ ಕೃಷಿ ಉತ್ಪನ್ನಗಳನ್ನು ಅನಿವಾರ್ಯವಾಗಿ ಹಸುಗಳಿಗೆ ತಿನ್ನಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದಟನ್‌ಗಟ್ಟಲೆ ದ್ರಾಕ್ಷಿಯನ್ನು ಗೊಬ್ಬರದ ಗುಂಡಿಗೆ ಸುರಿಯಲಾಗಿದೆ. ಆದರೆ ಇಷ್ಟಕ್ಕೇ ಎಲ್ಲವೂ ಮುಗಿಯಿತು ಎಂದಲ್ಲ. ಮನೆಯಲ್ಲೇ ಉಳಿಯಿರಿ ಎಂಬ ಲಾಕ್‌ಡೌನ್ ಮಾದರಿಯಆದೇಶ ಮುಂದುವರಿದರೆ, ನಿಗದಿತ ದಿನಾಂಕಕ್ಕೆ ಲಾಕ್‌ಡೌನ್‌ ಆದೇಶ ತೆರವಾಗದಿದ್ದರೆ ಹಳ್ಳಿಗಳಲ್ಲಿರುವ ರೈತರು ದೊಡ್ಡಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈವರೆಗೆ ಸರ್ಕಾರಗಳ ಪಾಲಿಗೆ ಕೃಷಿ ಕ್ಷೇತ್ರದ ಸಂಕಷ್ಟ ಎಂದರೆ ಅದು ಕೇವಲ ಮಾರುಕಟ್ಟೆಗೆ ಉತ್ಪನ್ನಗಳನ್ನು ಸರಬರಾಜು ಮಾಡುವಲ್ಲಿ ಇರುವ ಸಮಸ್ಯೆ ಎಂದಷ್ಟೇ ಅನ್ನಿಸುತ್ತಿತ್ತು. ಆದರೆ ಈಗ ಅದರ ಸ್ವರೂಪ ಬದಲಾಗುವ ಸಾಧ್ಯತೆ ನಿಚ್ಚಳವಾಗಿದೆ. ಸರ್ಕಾರಗಳ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು.

ಗೋಧಿ ಕೊಯ್ಲಿಗೆ ಜನರಿಲ್ಲ

ಇನ್ನೊಂದು ವಾರ ಕಳೆದರೆ ಸಾಕು, ದೇಶದ ಅತಿಮುಖ್ಯ ಆಹಾರ ಧಾನ್ಯ ಎನಿಸಿದ ಗೋಧಿಯ ಕೊಯ್ಲು ಕಾಲ ಬರುತ್ತದೆ. ಕೊಯ್ಲು ಮಾಡಲು ಜನರಿಲ್ಲದಿರುವುದು ಖಂಡಿತ ದೊಡ್ಡ ಸಮಸ್ಯೆಯಾಗುತ್ತದೆ. ಬೆಳೆದು ನಿಂತ ಫಸಲು ಹೊಲಗಳಲ್ಲಿಯೇ ಕೊಳೆಯುತ್ತಿದೆ. ಕಾರ್ಮಿಕರು ಮತ್ತು ಪೂರಕ ಸೇವೆಗಳ ಕೊರತೆಯಿಂದ ಈಗಾಗಲೇ ಅಕ್ಕಿಯ ರಫ್ತು ನಿಂತು ಹೋಗಿದೆ. ಭಾರತಕ್ಕೆ ವಿಶ್ವದಲ್ಲಿಯೇ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವೆಂಬ ಶ್ರೇಯವಿತ್ತು ಎಂಬುದನ್ನು ಈಗ ಒಮ್ಮೆ ನೆನಪಿಸಿಕೊಳ್ಳಬೇಕು.

ಕೊರೊನಾ ಪಿಡುಗು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (The Indian Council of Agricultural Research - ICAR) ರೈತರಿಗೆ ಗೋಧಿ ಕೊಯ್ಲನ್ನು ಏಪ್ರಿಲ್ 20ರವರೆಗೆಮುಂದೂಡುವಂತೆ ಮನವಿ ಮಾಡಿದೆ. ಈ ಗಡುವಿನ ನಂತರವೂ ಗೋಧಿ ಕೊಯ್ಲು ಮಾಡದಂತೆ ರೈತರನ್ನು ತಡೆಯಲು ಸಾಧ್ಯವಿಲ್ಲ. ಒಂದು ವೇಳೆ ತಡೆದರೆ ಈ ವರ್ಷದ ಧಾನ್ಯ ಹಾಳಾಗುತ್ತದೆ.

ಕೊಯ್ಲು ಮತ್ತು ಬಿತ್ತನೆಯ ಋತುಮಾನವನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರವು ರೈತರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನ ಮಾರಾಟಗಾರರ ಸಂಚಾರಕ್ಕೆ ವಿನಾಯ್ತಿ ನೀಡಿತ್ತು. ಇನ್ನೊಂದೆಡೆ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳ ಪ್ಯಾಕೇಜಿಂಗ್ ಘಟಕಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆ ಇರಬಾರದು ಎಂದು ಸೂಚಿಸಿತ್ತು.

'ಆಹಾರ ಧಾನ್ಯಗಳ ಸರಬರಾಜು ಜಾಲವನ್ನು ಜೀವಂತವಾಗಿಡಲು ಈ ವಿನಾಯ್ತಿಗಳು ಅನಿವಾರ್ಯ' ಎಂದು ಅಧಿಕಾರಿಯೊಬ್ಬರು ಹೇಳಿದರು. ಆದರೆ ಹಲವು ರಾಜ್ಯ ಸರ್ಕಾರಗಳು ಕಳೆದ ಶುಕ್ರವಾರದವರೆಗೆ ರೈತರಿಗೆ ಲಾಕ್‌ಡೌನ್‌ನಿಂದ ವಿನಾಯ್ತಿ ನೀಡಿಲ್ಲ. ಕೊಯ್ಲಿನ ಸಮಯದಲ್ಲಿ ಹೊಲಗಳಲ್ಲಿ ಹತ್ತಿರ ಹತ್ತಿರ ಕೆಲಸ ಮಾಡುವ ಕೃಷಿ ಕಾರ್ಮಿಕರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ ಎನ್ನುವುದು ರಾಜ್ಯ ಸರ್ಕಾರಗಳ ಆತಂಕ.

ಇತರ ದೇಶಗಳಲ್ಲೂ ಇದೇ ಕಥೆ

ಕೃಷಿ ಕ್ಷೇತ್ರದ ಈ ಬಿಕ್ಕಟ್ಟು ಭಾರತವೊಂದಕ್ಕೆ ಸೀಮಿತವಾಗಿಲ್ಲ. ವಿಶ್ವದ ಇತರ ದೇಶಗಳಲ್ಲಿಯೂ ಇಂಥದ್ದೇ ಪರಿಸ್ಥಿತಿ ಕಂಡುಬರುತ್ತಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲೆಂದು ಹಲವು ದೇಶಗಳ ಸರ್ಕಾರಗಳು ಕಟ್ಟುನಿಟ್ಟಿನ ಲಾಕ್‌ಡೌನ್ ಆದೇಶ ಜಾರಿಗೊಳಿಸಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಆಹಾರ ಸರಬರಾಜು ಜಾಲವೇ ಅಸ್ತವ್ಯಸ್ತಗೊಂಡಿದೆ.

ಫ್ರಾನ್ಸ್‌ನಲ್ಲಿ ಬೆಳೆ ಕೊಯ್ಲು ಮಾಡಲು ಕೃಷಿ ಕಾರ್ಮಿಕರ ಕೊರತೆ ಕಾಣಿಸಿಕೊಂಡಿರುವ ಕಾರಣ, ರೈತರಿಗೆ ಸಹಾಯ ಮಾಡಲು ಸರ್ಕಾರವು ನಿರುದ್ಯೋಗಿಗಳನ್ನು ವಿನಂತಿಸಿದೆ. ಅಮೆರಿಕದಲ್ಲಿ ವೈರಸ್‌ ಪಿಡುಗು ಹೆಚ್ಚಾಗುತ್ತಿದ್ದಂತೆ ಅಲ್ಲಿನ ಸರ್ಕಾರವು ಗ್ರಾಮೀಣ ಪ್ರದೇಶಗಳಿಗೂ ನಿರ್ಬಂಧ ವಿಸ್ತರಿಸಿತು. ಕೃಷಿ ಭೂಮಿಯಿಂದ ಕಾರ್ಮಿಕರುದೂರವುಳಿದರು. ಈ ಪೈಕಿ ಅರ್ಧಕ್ಕರ್ಧ ಜನರು ವಲಸಿಗರೇ ಆಗಿದ್ದರು. 2 ಲಕ್ಷ ಕೋಟಿ ಡಾಲರ್ ಮೌಲ್ಯದಷ್ಟು ನಷ್ಟವಾಗಬಹುದು ಎಂಬ ಭೀತಿಯು ದೇಶವನ್ನೇ ಆತಂಕಕ್ಕೆ ದೂಡಿದೆ.

ವಿಶ್ವದಲ್ಲಿ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿ ವರ್ಷವೂ ಕೊಯ್ಲು ಮತ್ತು ಬಿತ್ತನೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಹಿಡುವಳಿದಾರರಿಗೆ ನೆರವಾಗುತ್ತಾರೆ.ನಗರಗಳಿಗೆ ವಲಸೆ ಹೋಗಿರುವ ಕಾರ್ಮಿಕರ ಸಹ ಗೋಧಿ ಕೊಯ್ಲಿನ ಸಮಯದಲ್ಲಿದೊಡ್ಡಸಂಖ್ಯೆಯಲ್ಲಿ ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಾರೆ.ಗೋಧಿ ಬೆಳೆಯುವ ಉತ್ತರ ಪ್ರದೇಶ, ಪಂಜಾಬ್, ಮಧ್ಯ ಪ್ರದೇಶ ಮತ್ತು ಹರ್ಯಾಣಗಳಲ್ಲಿ ಇದು ಈ ಕಾಲದಲ್ಲಿ ಸಾಮಾನ್ಯ ವಿದ್ಯಮಾನ.

ಅಸಹಾಯಕ ಕಾರ್ಮಿಕರು

ಆದರೆ ಈ ವರ್ಷದ ಕಥೆಯೇ ಬೇರೆ.ಕೃಷಿ ಕಾರ್ಮಿಕರು ಎಲ್ಲೆಲ್ಲಿದ್ದರೋ ಅಲ್ಲಲ್ಲೇ ಸಿಲುಕಿಕೊಂಡಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ನಗರಗಳಿಂದ ಹಳ್ಳಿಗಳಿಗೆ ಹಿಂದಿರುಗಲು ಹೊರಟವರು ದಾರಿ ಮಧ್ಯೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಹಳ್ಳಿಗಳಿಗೆ ಹಿಂದಿರುಗಿದ ಕೆಲವರನ್ನು ಊರುಗಳಿಂದ ಹೊರಗೆ ಉಳಿಸಲಾಗಿದೆ.

ಉತ್ತರ ಪ್ರದೇಶ ಬಲ್ಲಿಯಾ ಗ್ರಾಮದ ವಲಸೆ ಕಾರ್ಮಿಕ ಭೋಲಾ ಮಾತಿಗೆ ಸಿಕ್ಕಿದರು. 'ನನಗೆ ಈ ವರ್ಷ ಕೈತುಂಬಾ ಕೆಲಸವಿದೆ. ಗೋಧಿ ಬೆಳೆಗಾರರು ನಾಲ್ಕುಪಟ್ಟು ಹೆಚ್ಚು ಕೂಲಿ ಕೊಡುವುದಾಗಿ ಭರವಸೆ ನೀಡಿದ್ದಾರೆ' ಎಂದು ಭೋಲಾ ಮಾಹಿತಿಕೊಟ್ಟರು. ಭೋಲಾ ಅವರ ಮಾತು ದೇಶದ ಒಟ್ಟಾರೆ ಗೋಧಿ ಉತ್ಪಾದನೆಯಲ್ಲಿ ಶೇ 35ರಷ್ಟು ಪಾಲು ಪಡೆದರಾಜ್ಯದಲ್ಲಿ ಕಂಡು ಬರುತ್ತಿರುವ ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿತ್ತು.

'ಈ ಲಾಕ್‌ಡೌನ್ ಎಂದಿಗೆ ಮುಗಿಯುತ್ತೋ ಎಂದು ನಾವೆಲ್ಲರೂ ಕಾದಿದ್ದೇವೆ. ಏಪ್ರಿಲ್ 15ರ ಆಸುಪಾಸಿಗೆ ಲಾಕ್‌ಡೌನ್ ತೆರವಾಗಬಹುದು ಎಂದು ಟೀವಿಗಳಲ್ಲಿ ನೋಡಿದೆ. ಗೋಧಿ ಮತ್ತು ಸಾಸಿವೆ ಕೊಯ್ಲಾಗುವ ಹೊತ್ತಿಗೆ ನಾವು ಹೊಲಗಳಿಗೆ ಹೋಗಲು ಸಾಧ್ಯವಾಗದಿದ್ದರೆ ನಮ್ಮ ಕುಟುಂಬಗಳು ಹಸಿವಿನಿಂದ ಸಾಯುತ್ತವೆ. ಹೊಲಗಳಲ್ಲಿ ಕೆಲಸ ಮಾಡಿದಾಗ ನಮಗೆ ಕೂಲಿಯ ಜೊತೆಗೆ ಧಾನ್ಯದಲ್ಲಿಯೂ ಪಾಲು ಸಿಗುತ್ತದೆ. ಕಣದಲ್ಲಿ ಸಿಗುವ ಧಾನ್ಯದಿಂದ ವರ್ಷದ ಬಹುದಿನಗಳು ನಮ್ಮ ಹೊಟ್ಟೆಪಾಡು ನಡೆಯುತ್ತದೆ' ಎಂದು ಪಂಜಾಬ್‌ನ ಕೃಷಿ ಕಾರ್ಮಿಕ ಹರ್ವಿಂದರ್ ಸಿಂಗ್ ಪ್ರತಿಕ್ರಿಯಿಸಿದರು. ಹೊಲಗಳಲ್ಲಿ ಕೆಲವಿಲ್ಲದಾಗ ಅವರು ದೆಹಲಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿ, ಸಂಪಾದನೆ ಮಾಡುತ್ತಾರೆ.

ಶೀಘ್ರ ಮತ್ತೊಂದು ಪ್ಯಾಕೇಜ್ ಘೋಷಣೆ

ಸರ್ಕಾರವು ಈವರೆಗೆ 1.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪರಿಹಾರ ಪ್ಯಾಕೇಜ್‌ ಘೋಷಿಸಿದೆ. ಇದು ನಮ್ಮ ಜಿಡಿಪಿಯ ಶೇ 1.2 ರಷ್ಟಾಗುತ್ತದೆ. ಈ ಪ್ಯಾಕೇಜ್‌ನ ಬಹುತೇಕ ಪ್ರಯೋಜನಗಳು ಔಪಚಾರಿಕ ವಲಯದ ನೌಕರರಿಗೆ ಸಿಗುತ್ತದೆ.

ದೇಶದ ಶೇ 80ರಷ್ಟು ಕಾರ್ಮಿಕರುಅನೌಪಚಾರಿಕ ವಲಯದಲ್ಲಿದ್ದಾರೆ. ಇವರಿಗಾಗಿ ಸರ್ಕಾರ ಇನ್ನಾದರೂ ಏನಾದರೂ ಮಾಡಬೇಕಿದೆ. ಈ ವರ್ಗದಲ್ಲಿರುವ ಬಹುತೇಕರು ಸ್ವಂತ ಉದ್ಯೋಗಿಗಳು, ದಿನಗೂಲಿಗಳು, ವಲಸೆ ಕಾರ್ಮಿಕರು, ಚಿಂದಿ ಆಯುವವರು, ಬೀದಿ ವ್ಯಾಪಾರಿಗಳು, ಸಣ್ಣ ಮತ್ತು ಅತಿಸಣ್ಣ ಘಟಕಗಳಲ್ಲಿ ಕೆಲಸ ಮಾಡುವವರು ಆಗಿದ್ದಾರೆ.

ದೊಡ್ಡಮಟ್ಟದ ಮತ್ತೊಂದು ಪರಿಹಾರ ಪ್ಯಾಕೇಜ್ ಘೋ‍ಷಣೆಗಾಗಿಹಿರಿಯ ಅಧಿಕಾರಿಗಳು ಕೆಲಸ ಶುರು ಮಾಡಿದ್ದಾರೆ. ಅದು ಮಾರ್ಚ್ 26ರಂದು ಘೋಷಣೆಯಾದ ಪರಿಹಾರಕ್ಕಿಂತಲೂ ದೊಡ್ಡಮಟ್ಟದ್ದಾಗಿರುತ್ತದೆ. ಇದರ ಮೌಲ್ಯ 6ರಿಂದ 8 ಲಕ್ಷ ಕೋಟಿ ರೂಪಾಯಿಯಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅನೌಪಚಾರಿಕ ವಲಯಗಳಲ್ಲಿ ಕೆಲಸ ಮಾಡುತ್ತಿರುವ, ಸರ್ಕಾರದ ನೆರವು ತುರ್ತಾಗಿ ತಲುಪಬೇಕಾದವರನ್ನು ಗಮನದಲ್ಲಿರಿಸಿಕೊಂಡು ಈ ಪ್ಯಾಕೇಜ್ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆ ಶೀಘ್ರ ಮುಗಿದು, ಬೀದಿಗಳಲ್ಲಿ ನಿಂತಿರುವವರಿಗೆ ಸರ್ಕಾರದ ಸಹಾಯ ಹಸ್ತ ಸಿಗದಿದ್ದರೆ ಅವರು ಬಂಡಾಯವೇಳುವ ಅಪಾಯವಿದೆ. ಕೊರೊನಾ ವೈರಸ್‌ ಪಿಡುಗಿಗಿಂತಲೂ ಹಸಿವಿನ ನೋವು ದೇಶದ ದೊಡ್ಡ ಸಮಸ್ಯೆಯಾಗುವ ಅಪಾಯ ಎದುರಾಗುತ್ತದೆ.

ಬೀದಿಗಳಲ್ಲಿ ಹಸಿದು ಕಂಗೆಟ್ಟು ನಿಂತವರಿಗೆ ಸರ್ಕಾರದ ನೆರವು ಸಿಗುವುದು ತಡವಾದಷ್ಟೂ ರೋಗ ನಿಯಂತ್ರಣದ ಸವಾಲೂ ಹೆಚ್ಚಾಗುತ್ತದೆ. ಹಸಿದ ಕಾರ್ಮಿಕರುಲಾಕ್‌ಡೌನ್ ಅದೇಶವನ್ನು ಉಲ್ಲಂಘಿಸಿ ಬೀದಿಗಳಿಗೆ ಇಳಿಯಬಹುದು. ಆಗ ಪೊಲೀಸರಿಗೂ ಅವರನ್ನು ನಿಯಂತ್ರಿಸುವುದು ಸವಾಲಾಗುತ್ತದೆ.

ಹಿಂದೆಂದೂ ಎದುರಾಗಿರಲಿಲ್ಲ ಇಂಥ ಬಿಕ್ಕಟ್ಟು

ಮೋದಿ ಸರ್ಕಾರದ ಮೊದಲ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಪ್ರಕಾರ, ಇಂಥ ಪರಿಸ್ಥಿತಿಯನ್ನು ದೇಶ ಹಿಂದೆಂದೂ ಎದುರಿಸಿರಲಿಲ್ಲ. ಈ ಹಿಂದೆ ದೇಶಕ್ಕೆ ಎದುರಾಗಿದ್ದ ಆರ್ಥಿಕ ಸಂಕಷ್ಟಗಳಿಗೆ ಹೋಲಿಸಿದರೆ ಇದು ಅತಿದೊಡ್ಡದು ಎಂಬುದು ಅವರ ವಿಶ್ಲೇಷಣೆ.ಲಾಕ್‌ಡೌನ್‌ನಿಂದ ಬಡವರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ತಕ್ಷಣ ಅವರ ನೆರವಿಗೆ ಧಾವಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಗದು ಹರಿವಿಗೆ ಅನುಕೂಲ ಕಲ್ಪಿಸಬೇಕು.

'ಆರ್ಥಿಕ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವುದು ಹೇಗೆ ಎಂಬ ಬಗ್ಗೆ ನಿಧಾನವಾಗಿ ಆಲೋಚಿಸೋಣ. ಆದರೆ ಮೊದಲು ಹಸಿದವರಿಗೆ ಅನ್ನ ಸಿಗುವ ವ್ಯವಸ್ಥೆ ರೂಪಿಸಬೇಕಿದೆ. ನಮ್ಮ ಬಳಿ ಹೆಚ್ಚು ಸಮಯವಿಲ್ಲ' ಎಂದು ಸುಬ್ರಹ್ಮಣ್ಯನ್ ಟೀವಿ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಪ್ರತಿದಿನವೂ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ಗಮನಿಸಿದರೆ ಭಾರತವು ತಕ್ಷಣಕ್ಕೆ ಲಾಕ್‌ಡೌನ್ ತೆರವುಗೊಳಿಸುವ ಸಾಧ್ಯತೆ ಕಂಡುಬರುತ್ತಿಲ್ಲ. ಮನೆಯಲ್ಲಿಯೇ ಉಳಿಯಬೇಕೆನ್ನುವ ನಿಯಮಗಳು ಮುಂದುವರಿದರೆ ಸರ್ಕಾರ ತಕ್ಷಣ ಬಡವರ ಅನ್ನಕ್ಕೆ ವ್ಯವಸ್ಥೆ ಮಾಡಬೇಕು. ಆರ್ಥಿಕ ಸ್ಥಿತಿ ಮತ್ತೆ ಸುಧಾರಿಸಿ, ಅವರ ಅನ್ನ ಅವರು ಸಂಪಾದನೆ ಮಾಡಿಕೊಳ್ಳುವ ಸ್ಥಿತಿ ಬರುವವರೆಗೆ ಸರ್ಕಾರದ ಸಹಾಯ ಹಸ್ತ ಮುಂದುವರಿಯಬೇಕಿದೆ.

ಭಾರತದ ಒಟ್ಟು ಜನಸಂಖ್ಯೆ 130 ಕೋಟಿ. ಈ ಪೈಕಿ ಕಾಲುಭಾಗ ಜನರು ಈಗ ಸರ್ಕಾರದ ಸಹಾಯಕ್ಕಾಗಿ ಕಾದು ನಿಂತಿದ್ದಾರೆ. ಭಾರತದಲ್ಲಿ ವಿಧಿಸಿರುವ ಲಾಕ್‌ಡೌನ್ ವಿಶ್ವದ ಹಲವು ಪ್ರಮುಖ ದೇಶಗಳಷ್ಟೇ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಆದರೆ ಲಾಕ್‌ಡೌನ್‌ ಪರಿಣಾಮಗಳನ್ನು ನಮ್ಮ ದೇಶ ಹೇಗೆ ಎದುರಿಸುತ್ತದೆ? ಇಲ್ಲಿನ ಜನರ ತುರ್ತು ಅಗತ್ಯಗಳಿಗೆ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT