ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಕಾರ್ಮಿಕರ ಜೀವಕ್ಕಿಲ್ಲ ಕಬ್ಬಿಣದಷ್ಟೂ ಕಿಮ್ಮತ್ತು

ಉತ್ತರ–ಮಧ್ಯ ಕರ್ನಾಟಕದಿಂದ ವಲಸೆ ಬಂದ ಕಟ್ಟಡ ಕಾರ್ಮಿಕರ ದಯನೀಯ ಸ್ಥಿತಿ
Last Updated 22 ಫೆಬ್ರುವರಿ 2020, 22:53 IST
ಅಕ್ಷರ ಗಾತ್ರ

ಬೆಂಗಳೂರು:ಇಟ್ಟಿಗೆ ಬಿದ್ದ ರಭಸಕ್ಕೆ ಕಾರ್ಮಿಕನ ತಲೆಯಿಂದ ಚಿಮ್ಮಿದ ರಕ್ತದ ಬಿಸಿ ಇನ್ನೂ ಆರಿಲ್ಲ. ಮೇಸ್ತ್ರಿ ಮಾಯವಾಗಿದ್ದಾನೆ. ಆತಂಕದಲ್ಲಿಯೇ ಆಸ್ಪತ್ರೆ ಸೇರಿಸಿದ ಗುತ್ತಿಗೆದಾರನ ಫೋನ್‌ ಮರುಕ್ಷಣದಲ್ಲಿಯೇ ಸ್ವಿಚ್ಡ್‌ ಆಫ್. ದೂರದ ರಾಯಚೂರಿನಿಂದ ಬಂದ ಆ ಕಾರ್ಮಿಕನಿಗೆ ಕಟ್ಟಡದ ಸ್ಥಳ, ಗುತ್ತಿಗೆದಾರನ ಫೋನ್‌ ನಂಬರ್ ಬಿಟ್ಟರೆ ಬೇರೇನೂ ತಿಳಿದಿಲ್ಲ. ನನಗೂ–ನಿನಗೂ ಸಂಬಂಧವಿಲ್ಲ ಎಂದು ಕಟ್ಟಡದ ಮಾಲೀಕ ಹೇಳಿದರೆ, ಹಣ ಕಟ್ಟದಿದ್ದರೆ ಚಿಕಿತ್ಸೆ ಇಲ್ಲ ಎನ್ನುತ್ತಾರೆ ವೈದ್ಯರು. ತಲೆ ಮೇಲೆ ಬಿದ್ದ ಇಟ್ಟಿಗೆ ಕಣ್ಣು ಕಪ್ಪಾಗಿಸಿದ್ದಷ್ಟೇ ಅಲ್ಲ, ಬದುಕನ್ನೂ ಕತ್ತಲಾಗಿಸಿದೆ.

***

ಆ ಗುಡಿಸಲಿನಲ್ಲಿ ಗುಬ್ಬಚ್ಚಿಯಂತೆ ಮಲಗಲು ಅಷ್ಟೇ ಸಾಧ್ಯ. ಶೌಚಕ್ಕೆ ಬಯಲಿಗೇ ಹೋಗಬೇಕು. ಜಾಲಿಗಿಡದ ಬುಡದಲ್ಲಿ ಧುತ್ತೆಂದು ಎದುರಾದ ಹಾವು ಕಂಡ ಮೂರು ವರ್ಷದ ಆ ಮಗು ಇನ್ನೂ ಬೆಚ್ಚಿ ಬೀಳುತ್ತಿದೆ. ದಿನ ರಾತ್ರಿ ಜ್ವರದಿಂದ ಬಳಲುತ್ತಿದೆ. ಕಾಲು–ಕೈಯಲ್ಲಿ ಕಸುವು ಕಳೆದುಕೊಂಡ ಆ ಅಜ್ಜಿಗೆ ದುಡಿಮೆ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲ. ದೇವರ ಮೇಲೆ ಭಾರ ಹಾಕಿ ದಿನ ದೂಡುತ್ತಿದ್ದಾರೆ ಅಜ್ಜಿ–ಮೊಮ್ಮಗಳು!

***

‘ಕಾಯಿಲೆ ಕಸಾಲೆ ಬಂದೋ, ಕೆಲಸ ಮಾಡುವಾಗ ಏಟು ಬಿದ್ದೋ ಯಾರಾದರೂ ಸತ್ತರೆ ಅವರ ಕುಟುಂಬದವರ ಜೀವವೂ ಹೋದಂತಾಗುತ್ತದೆ. ಹೆಣವನ್ನು ರಾಯಚೂರು ಅಥವಾ ಕಲಬುರ್ಗಿಗೆ ಒಯ್ಯಲು ಆಂಬುಲೆನ್ಸ್‌ನವರು 30 ಸಾವಿರ ರೂಪಾಯಿ ಕೇಳ್ತಾರೆ. ಆರೇಳು ತಿಂಗಳ ದುಡಿಮೆ ಇದಕ್ಕೆ ಹೋಗುತ್ತದೆ. ಆದರೂ ನಮಗೆ ಇದು ಅನಿವಾರ್ಯ. ನಮ್ಮೂರಿನಲ್ಲಿಯೇ ಮಣ್ಣಾಗಬೇಕು ಎಂಬ ಆಸೆ ಮತ್ತು ಮಣ್ಣೇ ಮಾಡಬೇಕು ಎಂಬ ಸಂಪ್ರದಾಯ ಇದಕ್ಕೆ ಕಾರಣ’ ಎನ್ನುತ್ತಾರೆ ಕಾರ್ಮಿಕರು.

***

ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರನ್ನು ಮಾತನಾಡಿಸಿದರೆ ಇಂತಹ ನೂರಾರು ಕತೆಗಳು ತೆರೆದುಕೊಳ್ಳುತ್ತವೆ.ಯಲಹಂಕ, ಯಶವಂತಪುರ, ನಾಯಂಡಹಳ್ಳಿ, ನೆಲಮಂಗಲ, ಮಹದೇವಪುರ ಸೇರಿದಂತೆ ನಗರದ ಹೊರವಲಯದಲ್ಲಿ ಹಲವು ಕಡೆ ಈ ಕುಟುಂಬಗಳು ಜೋಪಡಿ ಹಾಕಿಕೊಂಡು ಜೀವನ ಸಾಗಿಸುತ್ತಿವೆ. ಕೆಲವು ಗುಡಿಸಲುಗಳು ಸಿಮೆಂಟ್‌ ಶೀಟ್‌ ಕಂಡಿರುವುದನ್ನು ಬಿಟ್ಟರೆ ಅವರ ಜೀವನಮಟ್ಟ ದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಾಣಿಸುವುದಿಲ್ಲ.

‘ಸಮಸ್ಯೆ ಏನಿದೆ’ ಎಂದರೆ, ‘ಏನು ಅನುಕೂಲ ಮಾಡಿಕೊಡ್ತೀರಿ ಹೇಳಿ? ಎಲ್ಲರೂ ಬಂದು ಹೀಗೆ ಮಾತನಾಡಿಸಿ ಹೋಗ್ತಾರೆ.ಆಮೇಲೆ ತಿರುಗಿಯೂ ನೋಡಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ.

ಅನಾರೋಗ್ಯ ಸಾಮಾನ್ಯ: ‘ಸೊಳ್ಳಿ ಕಚ್ತಾವು ನೋಡ್ರಿ, ಅದ್ಕ ಜಡ್ಡು–ಬ್ಯಾನಿ ಯಾವಾಗಂದ್ರ ಅವಾಗ ಬರ್ತಾವು’ ಎಂದು ಬೇಸರದಿಂದಲೇ ಮುಗುಳ್ನಗುತ್ತಾರೆ ರಾಯಚೂರಿನ ಇಂದ್ರಮ್ಮ.

ಉಳಿದು ಕೊಳ್ಳಲು ಇವರಿಗೆ ಸರ್ಕಾರ ತಾತ್ಕಾಲಿಕವಾಗಿ ಜಾಗ ನೀಡಿದ್ದರೂ ಇಂಥವರಿಗೆ ಇಂತಿಷ್ಟೇ ಜಾಗ ಎಂದು ಗುರುತಿಸಿಲ್ಲ. ಹಕ್ಕು ಪತ್ರವನ್ನೂ ವಿತರಿಸಿಲ್ಲ. ಡೋರ್‌ ನಂಬರ್‌ ನೀಡಲಾಗಿದೆಯಾದರೂ ಮನೆಯ ಮಾಲೀಕತ್ವ ಯಾರಿಗೂ ಇಲ್ಲ. ವಿದ್ಯುತ್‌ ಸಂಪರ್ಕ ಇದೆಯಾದರೂ, ಅವುಗಳಿಗೆ ಆರ್.ಆರ್. ನಂಬರ್ ಇಲ್ಲ. ಮತಗಳ ಆಸೆಗಾಗಿ ಹುಡುಕಿಕೊಂಡು ಹೋಗಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಗಿದೆ.

ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಬಹುತೇಕರು ಯಶಸ್ವಿಯಾಗಿದ್ದಾರೆ. ಆದರೆ, ಅಕ್ಕಿ ಕೊಟ್ಟರೆ ಸಕ್ಕರೆ ಇಲ್ಲ, ಸಕ್ಕರೆ ಕೊಟ್ಟರೆ ತೊಗರಿ ಬೇಳೆ ಇಲ್ಲ. ಈಗಿಗಂತೂ ಸೀಮೆ ಎಣ್ಣೆಯನ್ನೂ ಕೊಡುತ್ತಿಲ್ಲ ಎಂದು ಮಹಿಳೆಯರು ಹೇಳುತ್ತಾರೆ.

ಇಲ್ಲ ಸುರಕ್ಷತೆ:ಗುಡಿಸಲು ಪಕ್ಕ ಹರಿಯುವ ಕೊಳಚೆ ನೀರು, ಸುತ್ತ ಹರಡುವ ದೂಳು ಆರೋಗ್ಯಕ್ಕೆ ರಕ್ಷಣೆ ಇಲ್ಲದಂತೆ ಮಾಡಿದ್ದರೆ, ಕೆಲಸದ ಸ್ಥಳದಲ್ಲಿಯೂ ಈ ಕಾರ್ಮಿಕರಿಗೆ ರಕ್ಷಣೆ ಇಲ್ಲ. ಸೌಲಭ್ಯಗಳನ್ನು ಕೇಳಿದರೆ ಅಥವಾ ಪ್ರಶ್ನಿಸಿದರೆ ಪೊಲೀಸರ ಮೂಲಕ ಹೆದರಿಸಲಾಗುತ್ತದೆ. ಕಾರ್ಮಿಕ ಕಲ್ಯಾಣ ಮಂಡಳಿ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಅರ್ಹ ಕಾರ್ಮಿಕರಿಗಿಂತ ನಕಲಿ ಕಾರ್ಮಿಕರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ!

‘50–60 ಲಕ್ಷ ಖರ್ಚುಮಾಡಿ ಮನೆ ಕಟ್ಟಿಸುತ್ತಾರೆ. ನಿರ್ಜೀವ ಕಬ್ಬಿಣ, ಸಿಮೆಂಟ್‌ಗೆ ಮಹತ್ವ ನೀಡುತ್ತಾರೆ. ಅದೇ ಮನೆ ಕಟ್ಟುವ ಕಾರ್ಮಿಕರ ಆರೋಗ್ಯದ ಬಗ್ಗೆ, ಅವರ ನೆಮ್ಮದಿಯ ಬಗ್ಗೆ ಯೋಚಿಸುವುದಿಲ್ಲ’ ಎಂದು ಹೇಳಿದ ಯಾದಗಿರಿಯ ಮಹೇಂದ್ರ, ನಾವು ಪಡೆದುಕೊಂಡು ಬಂದಿದ್ದೇ ಇಷ್ಟು ಎಂಬರ್ಥದಲ್ಲಿ ಆಕಾಶ ನೋಡುತ್ತಾರೆ!

ಕಲ್ಯಾಣ ನಿಧಿಯಿಂದ ಸದ್ಯ ಲಭ್ಯವಿರುವ 19 ಸೌಲಭ್ಯಗಳು

* ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ತಿಂಗಳಿಗೆ ₹2 ಸಾವಿರ ಪಿಂಚಣಿ

* ಮೃತ ಪಿಂಚಣಿದಾರರ ಪತಿ/ಪತ್ನಿಗೆ ತಿಂಗಳಿಗೆ ₹1 ಸಾವಿರ ಪಿಂಚಣಿ

* ನೋಂದಾಯಿತ ಫಲಾನುಭವಿಯು ಕಾಯಿಲೆ ಅಥವಾ ಕಟ್ಟಡ ಕಾಮಗಾರಿಗಳ ಅಘಾತದಿಂದ ಶಾಶ್ವತ/ಭಾಗಶಃ ಅಂಗವೈಕಲ್ಯ ಹೊಂದಿದರೆ ತಿಂಗಳಿಗೆ ₹2 ಸಾವಿರ ಪಿಂಚಣಿ ಹಾಗೂ ಶೇಕಡವಾರು ದೌರ್ಬಲ್ಯ ಆಧರಿಸಿ ₹ 2 ಲಕ್ಷದವರೆಗೆ ಸಹಾಯಧನ

* ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಕುರ್ಚಿ ಸೌಲಭ್ಯ

* ತರಬೇತಿ ಮತ್ತು ಟೂಲ್ ಕಿಟ್ ಸೌಲಭ್ಯಕ್ಕೆ ₹30 ಸಾವಿರದವರೆಗೆ ನೆರವು

* ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ ಶ್ರಮ ಸಂಸಾರ ಸಾಮರ್ಥ್ಯ ತರಬೇತಿ

* ವಸತಿ ಸೌಲಭ್ಯದ ಅಡಿಯಲ್ಲಿ ₹2 ಲಕ್ಷದವರೆಗೆ ಮುಂಗಡ ಹಣ ನೀಡುವ ಸೌಲಭ್ಯ

* ಹೆರಿಗೆ ಸೌಲಭ್ಯ: ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಣು ಮಕ್ಕಳಿಗೆ ₹30 ಸಾವಿರ ಮತ್ತು ಗಂಡು ಮಗುವಿಗೆ ₹20 ಸಾವಿರ

* ಶಿಶುಪಾಲನಾ ಸೌಲಭ್ಯ

* ಅಂತ್ಯಕ್ರಿಯೆ ವೆಚ್ಚ: ₹4 ಸಾವಿರ ಹಾಗೂ ₹50 ಸಾವಿರ ಸಹಾಯಧನ

* ಶೈಕ್ಷಣಿಕ ಸಹಾಯಧನ: ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹2 ಸಾವಿರದಿಂದ ₹30 ಸಾವಿರದವರೆಗೆ ಸಹಾಯಧನ

* ವೈದ್ಯಕೀಯ ಸಹಾಯಧನ: ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ₹300ರಿಂದ ₹10 ಸಾವಿರದವರೆಗೆ

* ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ₹5 ಲಕ್ಷ, ಸಂಪೂರ್ಣ ಶಾಶ್ವತ ದೌರ್ಬಲ್ಯ ಉಂಟಾದಲ್ಲಿ ₹2 ಲಕ್ಷ, ಭಾಗಶಃ ಶಾಶ್ವತ ದೌರ್ಬಲ್ಯ ಉಂಂಟಾದಲ್ಲಿ ₹1 ಲಕ್ಷ

* ಪ‍್ರಮುಖ ವೈದ್ಯಕೀಯ ವೆಚ್ಚ ಸಹಾಯಧನ: ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಆಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ತ್ರಾವ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆಗಳಿಗೆ ₹2 ಲಕ್ಷ ನೆರವು

* ಮದುವೆ ಸಹಾಯಧನ: ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50 ಸಾವಿರ

* ಸ್ಟವ್ ಜತೆಗೆ ಎಲ್‌ಪಿಜಿ ಸಂಪರ್ಕ

* ಬಿಎಂಟಿಸಿ ಬಸ್ ಪಾಸ್ ಸೌಲಭ್ಯ

* ಕೆಎಸ್‌ಆರ್‌ಟಿಸಿ ಬಸ್ ಪಾಸ್‌ ಸೌಲಭ್ಯ: ವಿದ್ಯಾಭ್ಯಾಸದಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ

* ತಾಯಿ ಮಗು ಸಹಾಯ ಹಸ್ತ: ಕಾರ್ಮಿಕ ಮಹಿಳೆಯು ಮಗುವಿನ ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವ ತನಕ ₹6 ಸಾವಿರದವರೆಗೆ ಸಹಾಯಧನ

*
ಮೂರ್ನಾಲ್ಕು ವರ್ಷದ ಹಿಂದೆ ನನ್ನ ಗಂಡನ ತಲೆ ಮೇಲೆ ಇಟ್ಟಿಗೆ ಬಿತ್ತು. ಪ್ರಜ್ಞೆ ತಪ್ಪಿತ್ತು. ಆಸ್ಪತ್ರೆ ಸೇರಿಸಿದವರು ಹೊಳ್ಳಿ ನೋಡಲೇ ಇಲ್ಲ. ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ
ಹನುಮಂತಿ, ದೇವದುರ್ಗ

*
ಶೌಚಕ್ಕೆ ಬಯಲಿಗೇ ಹೋಗಬೇಕು. ವಯಸ್ಸಿನ ಹುಡುಗಿಯರು ಹೋದಾಗ ಪೋಲಿಗಳು ಹಿಂಬಾಲಿಸುತ್ತಿದ್ದರು. ನಮ್ಮ ಮೇಲೆ ಕಲ್ಲು ಎಸೆಯುತ್ತಿದ್ದರು. ಪೊಲೀಸರ ಮಧ್ಯಪ್ರವೇಶದ ನಂತರ ಹಾವಳಿ ತಪ್ಪಿದೆ
ಮುತ್ತಮ್ಮ, ರಾಯಚೂರು

*
18–20 ವರ್ಷಗಳಿಂದ ಇಲ್ಲಿ ಇದ್ದೇವೆ. ಹಿರಿಯರು ಟೆಂಟ್‌ ಹಾಕಿಕೊಂಡಿದ್ದರು. ಈಗ ಗುಡಿಸಲು ಮಾಡಿಕೊಂಡಿದ್ದೇವೆ. ವಾರಕ್ಕೆ ಒಮ್ಮೆ ಆಸ್ಪತ್ರೆ ವ್ಯಾನ್‌ ಬರುತ್ತದೆ. ಮಾತ್ರೆ ಕೊಡುತ್ತಾರೆ.
ಚನ್ನಬಸವ, ಯಾದಗಿರಿ

*
ಎಲ್ಲವೂ ತುಟ್ಟಿ ಆಗಿದೆ. ತರಕಾರಿಗೆ ₹50 ಬೇಕು. ಕೈ–ಕಾಲಲ್ಲಿ ಶಕ್ತಿ ಹೋದ ಮೇಲೆ ಕೆಲಸ ಸಿಗಲ್ಲ. ಮನೆಯಲ್ಲಿಯೇ ಮಾಡುವಂತಹ ಕೆಲಸ ನೀಡಿದರೆ ಅನುಕೂಲ ಆಗುತ್ತದೆ.
–ಸೌಭಾಗ್ಯಮ್ಮ,ರಾಯಚೂರು

*

‘ನೋಂದಾಯಿತ ಕಾರ್ಮಿಕರು ಸವಲತ್ತುಗಳನ್ನು ಪಡೆಯಲು ಇರುವ ಷರತ್ತುಗಳನ್ನು ದಾಟುವುದೇ ಕಷ್ಟ. ಹೀಗಾಗಿ ಕಾರ್ಮಿಕ ನಿಧಿ ಖರ್ಚಾಗದೇ ಉಳಿದಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಲು ಮುಂದಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಅವರಿಗೇ ಬಳಕೆಯಾಗಲು ಇದು ಅಡ್ಡಿಯಾಗುವ ಸಾಧ್ಯತೆ ಇದೆ.
–ಎಚ್.ಎನ್. ನಾಗಮೋಹನದಾಸ್,ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT