ಬೆಂಗಳೂರು: ಪರಿಶಿಷ್ಟ ಜಾತಿಯ ವಿಧವೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ, ಅವರ ಜೀವನ ಮಟ್ಟ ಸುಧಾರಣೆಯ ಸಲುವಾಗಿ ‘ವಿಧವಾ ವಿವಾಹ ನೆರವು’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಈವರೆಗೆ ಅತ್ಯಲ್ಪ ಮಂದಿಯಷ್ಟೇ ಸೌಲಭ್ಯ ಪಡೆದುಕೊಂಡಿದ್ದಾರೆ.
ಈ ಸಮುದಾಯದ ವಿಧವೆಯರು ಮರು ಮದುವೆಯಾದರೆ ₹ 3 ಲಕ್ಷ ಪ್ರೋತ್ಸಾಹ ಧನ ನೀಡುವ ಯೋಜನೆ ಕಳೆದ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದು, ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಮಂದಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಿನ್ನೆಲೆ: ಅನಿವಾರ್ಯ ಸಂದರ್ಭಗಳಲ್ಲಿ ಗಂಡ ಸಾವನ್ನಪ್ಪಿದರೆ ಪರಿಶಿಷ್ಟ ಜಾತಿಯ ಮಹಿಳೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತದೆ. ಕೆಲ ಸಮಯ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಗಂಡನ ಮನೆಯವರೂ ನೆರವಿಗೆ ಬರುವುದಿಲ್ಲ. ತವರು ಮನೆಯ ಪರಿಸ್ಥಿತಿ ಇದೇ ರೀತಿ ಇದ್ದರೆ, ಅತ್ತ ಕಡೆಯಿಂದಲೂ ಸಹಕಾರ ಸಿಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಜೀವನವಿಡಿ ಒಬ್ಬಂಟಿ ಯಾಗಿ ಬದುಕಬೇಕು. ಇಂತಹ ಸಮಯದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ. ಒಂದು ರೀತಿಯಲ್ಲಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿಯಲ್ಲಿದ್ದಾಗ ಸರ್ಕಾರ ನೆರವಿಗೆ ಬರುವ ಸಲುವಾಗಿ ಈ ಯೋಜನೆ ರೂಪಿಸಿದೆ.
ವಿಧವೆಯರನ್ನು ಮದುವೆಯಾದರೆ ಸರ್ಕಾರದ ಕಡೆಯಿಂದ ₹3 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಬಂದ ಹಣ ಇಟ್ಟುಕೊಂಡು ಸಣ್ಣಪುಟ್ಟ ಕೆಲಸಮಾಡಿ ಬದುಕಬಹುದು. ಕೊನೆಗೆ ಒಂದು ಚಿಲ್ಲರೆ ಅಂಗಡಿ ಇಟ್ಟುಕೊಂಡಾದರೂ ಜೀವನ ಸಾಗಿಸಬಹುದು ಎಂಬ ಕಾರಣಕ್ಕೆ ಕೆಲ ಯುವಕರು ವಿವಾಹವಾಗಲು ಮುಂದೆ ಬರುತ್ತಾರೆ. ಇಂತಹ ಸದುದ್ದೇಶದಿಂದ ವಿಧವಾ ನೆರವು ಯೋಜನೆಯನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಕಬಳಿಕೆಗಾಗಿ ನಾಟಕ...
ಯೋಜನೆಯ ನಿಯಮಗಳು
lಈ ಸೌಲಭ್ಯ ಪಡೆಯುವ ವಿಧವೆಯ ವಯೋಮಿತಿ ಕನಿಷ್ಠ 18ರಿಂದ ಗರಿಷ್ಠ 42 ವರ್ಷ. ವರನಿಗೆ 21ರಿಂದ 45 ವರ್ಷಗಳಾಗಿರಬೇಕು.
lವಿವಾಹದ ನಂತರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕು.
lಮದುವೆಯಾದ ಒಂದು ವರ್ಷದ ಒಳಗೆ ಆನ್ಲೈನ್ ಮೂಲಕ ಮಹಿಳೆ ಅರ್ಜಿ ಸಲ್ಲಿಸಬೇಕು.
lಅಂತರ್ಜಾತಿ ವಿವಾಹವಾಗಿ, ಈ ಯೋಜನೆಯಿಂದ ಪ್ರೋತ್ಸಾಹ ಧನ ಪಡೆದಿದ್ದರೆ ಈ ಯೋಜನೆಯಲ್ಲಿ ನೆರವು ಪಡೆಯಲು ಅರ್ಹರಾಗಿರುವುದಿಲ್ಲ.
lಸರಳ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರೆ, ಅಂತಹವರು ₹2.50 ಲಕ್ಷ ಮಾತ್ರ ಪ್ರೋತ್ಸಾಹ ಧನ ಪಡೆಯಬಹುದು.
lಮಂಜೂರಾದ ಪ್ರೋತ್ಸಾಹ ಧನವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಜಮಾ ಮಾಡಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.