ನವದೆಹಲಿ, ಮೇ 3– ಬಲಾತ್ಕಾರದ ಮೇಲೆ ರಾಜ್ಯ ವಿಧಾನಸಭೆಯ ಅಥವಾ ಸಂಸತ್ತಿನ ಸದಸ್ಯರು ರಾಜೀನಾಮೆ ಕೊಡುವುದನ್ನು
ತಪ್ಪಿಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಸಂವಿಧಾನ ತಿದ್ದುಪಡಿ
ವಿಧೇಯಕವೊಂದನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಮಂತ್ರಿ ಎಚ್.ಆರ್. ಗೋಖಲೆ ಅವರು ಮಂಡಿಸಿದರು.
ಈ ತಿದ್ದುಪಡಿ ವಿಧೇಯಕದ ಮಂಡನೆಯನ್ನು ತಪ್ಪಿಸಲು ವಿರೋಧ ಪಕ್ಷದವರು ವ್ಯರ್ಥ ಪ್ರಯತ್ನ ನಡೆಸಿದರು.
ಈ ವಿಧೇಯಕದ ಪ್ರಕಾರ, ಸದಸ್ಯರು ವೈಯಕ್ತಿಕವಾಗಿ ರಾಜೀನಾಮೆ ಕೊಟ್ಟಿಲ್ಲ ಎಂಬುದು ತನಿಖೆಯಿಂದ ವ್ಯಕ್ತಪಟ್ಟಲ್ಲಿ ಆ ರಾಜೀನಾಮೆಯನ್ನು ವಿಧಾನಸಭೆಯ ಅಥವಾ ಸಂಸತ್ತಿನ ಅಧ್ಯಕ್ಷರು ಅಂಗೀಕರಿಸುವುದಿಲ್ಲ.
ಬಂದ್: ನಾನಾ ಕಡೆ ಭಾಗಶಃ ಯಶಸ್ವಿ
ನವದೆಹಲಿ, ಮೇ 3– ಬೆಲೆ ಏರಿಕೆ ವಿರುದ್ಧ ಐದು ವಾಮಪಂಥೀಯ ಪಕ್ಷಗಳು ಕರೆ ಕೊಟ್ಟಿದ್ದ ಇಂದಿನ ಬಂದ್ ರಾಷ್ಟ್ರದ ನಾನಾ ಕಡೆ ಭಾಗಶಃ ಯಶಸ್ವಿಯಾಯಿತು ಹಾಗೂ ಶಾಂತಯುತವಾಗಿ ನಡೆಯಿತು.
ಬಂದ್ನಿಂದ ಮುಂಬಯಿ ಸಂಪೂರ್ಣ ಸ್ತಬ್ಧಗೊಂಡಿತು. ಅಸ್ಸಾಂ, ಕೇರಳದಲ್ಲಿ ಮಾಮೂಲಿ ಜೀವನ ಅಸ್ತವ್ಯಸ್ತಗೊಂಡಿತು.
ರಾಜಧಾನಿ ನವದೆಹಲಿ ಈ ಆರು ತಿಂಗಳಲ್ಲಿ ಎರಡನೇ ಸಲ ಕಂಡ ಬಂದ್ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತು.