ಕಾರ್ಯಕ್ರಮವೊಂದಕ್ಕೆ ಯಾರಾದರೂ ಬೆದರಿಕೆ ಒಡ್ಡುತ್ತಾರಾದರೆ ಹಾಗೆ ಬೆದರಿಕೆ ಒಡ್ಡುವವರ ಮೇಲೆ ಕ್ರಮ ಜರುಗಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಮಾಡಬೇಕಾದುದು ಸರ್ಕಾರದ ಕೆಲಸ. ಅದು ಬಿಟ್ಟು ವಿರೋಧ ಇದೆ, ಬೆದರಿಕೆ ಇದೆ, ಆ ಕಾರಣಕ್ಕೆ ಕಾರ್ಯಕ್ರಮ ನಡೆಸಕೂಡದು, ನಡೆಸಿದರೆ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರೇ ಧಮಕಿ ಹಾಕುವುದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ, ಸೈದ್ಧಾಂತಿಕ ಕಾರಣಕ್ಕೆ ಈ ಸರ್ಕಾರವು ಕನ್ನಡದ ವಿರುದ್ಧವೂ ನಿಲ್ಲಲು ಹೇಸುವುದಿಲ್ಲ. ಎರಡನೆಯದಾಗಿ, ಯಃಕಶ್ಚಿತ್ ಒಂದು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೂ ಭದ್ರತೆ ನೀಡುವ ಕ್ಷಮತೆ ನಮ್ಮ ಕರ್ನಾಟಕದ ಪೊಲೀಸರಿಗಿಲ್ಲ.