ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕೂಡಿಟ್ಟ ಹೊನ್ನು ಕಷ್ಟಕ್ಕಾಗಲಿ

Last Updated 2 ಜುಲೈ 2021, 19:03 IST
ಅಕ್ಷರ ಗಾತ್ರ

ಕೋವಿಡ್– 19 ಸಾಂಕ್ರಾಮಿಕದಿಂದ ಜನಸಾಮಾನ್ಯರ ಜೀವನೋಪಾಯಕ್ಕೆ ಕಂಟಕ ಬಂದೊದಗಿದೆ. ಸರ್ಕಾರಗಳ ಖಜಾನೆ ತೀವ್ರಗತಿಯಲ್ಲಿ ಖಾಲಿಯಾಗುತ್ತಿದೆ. ದೇಶವು ಇಂತಹ ಆರ್ಥಿಕ ದುಃಸ್ಥಿತಿಯಿಂದ ಚೇತರಿಸಿ ಕೊಳ್ಳಲು ದಶಕಗಳೇ ಬೇಕಾಗಿರುವುದರಿಂದ, ಭಾರತ ಸಂವಿಧಾನದ 360ನೇ ವಿಧಿ (ಹಣಕಾಸು ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳು) ಉಪಯೋಗಿಸಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಲು ಇದು ಸಕಾಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ 2017ರಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ, ‘ಸುಮಾರು 3,000ದಿಂದ 4,000 ಟನ್‌ಗಳಷ್ಟು ಬಂಗಾರ ನಮ್ಮ ದೇಶದ ಮಂದಿರ, ಚರ್ಚ್ ಮತ್ತು ಮಸೀದಿಗಳಲ್ಲಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಿದೆ’.

ಆಪತ್ಕಾಲಕ್ಕೆ ನೆರವಾಗಲು ಆಗದೇ ಇರುವ ಅಪಾರ ಮೊತ್ತದ ಸಂಪತ್ತು ಚಿನ್ನದ ರೂಪದಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಇದ್ದರೆ ಅದರಿಂದೇನು ಪ್ರಯೋಜನ? ಇಂಥ ಸಂದರ್ಭದಲ್ಲಿ ಸಂವಿಧಾನದ 360ನೇ ವಿಧಿಯನ್ನು ಮೊದಲು ಮಾಡಿ ಸರ್ಕಾರವು ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಿ, ಈ ಸಂಪತ್ತನ್ನು ಸ್ವಾಧೀನ ಪಡಿಸಿಕೊಳ್ಳಬಹುದು.

ತುರ್ತು ಪರಿಸ್ಥಿತಿ ಘೋಷಣೆಯ ಅವಧಿಯಲ್ಲಿ ರಾಷ್ಟ್ರವನ್ನು ಆರ್ಥಿಕವಾಗಿ ಸಬಲಗೊಳಿಸಲು 25ನೇ ವಿಧಿ (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು) ಹಾಗೂ 26ನೇ ವಿಧಿಯನ್ನು (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಅಮಾನತಿನಲ್ಲಿ ಇಡಬಹುದು. ‘ಎಸ್.ಆರ್.ಬೊಮ್ಮಾಯಿ ಮತ್ತು ಇತರರ ವಿರುದ್ಧ ಭಾರತದ ಒಕ್ಕೂಟ ಮತ್ತು ಇತರರು’ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಯಾವ ಸಂದರ್ಭದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಲು ಸಾಧ್ಯವಿದೆ ಎಂಬುದನ್ನು ವಿವರವಾಗಿ ನಿರೂಪಿಸಿದೆ.

ನಮ್ಮ ಧಾರ್ಮಿಕ ನಂಬಿಕೆಗಳು, ಕೊರೊನಾ ಬಿಕ್ಕಟ್ಟಿನ ದುರಿತ ಕಾಲದಲ್ಲಿ ಅನಿವಾರ್ಯವಾದ ಅಗತ್ಯವನ್ನು ಬೆಂಬಲಿಸುವಂತೆ ಆಗಬೇಕಾಗಿದೆ. ಕೇಂದ್ರ ಸರ್ಕಾರವು ಈ ಬಂಗಾರದ ಸಂಪತ್ತನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು, ಹೆಚ್ಚು ನಗದನ್ನು ಮಾರುಕಟ್ಟೆಗೆ ಚಲಾವಣೆಗೆ ಬಿಡಬೇಕು. ಆ ಮೂಲಕ ಈ ಸಂಪತ್ತಿನ ಸದುಪಯೋಗ ಮಾಡಿಕೊಳ್ಳಲು ಅತ್ಯುತ್ತಮ ಸಂದರ್ಭ ಇದು.
-ಸಿ.ಎಚ್.ಹನುಮಂತರಾಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT