‘ರಾವಣ ಎಂಬ ಮಹಾನ್ ರೂಪಕ’ ಎಂಬ ಸಬಿತಾ ಬನ್ನಾಡಿಯವರ ಲೇಖನ (ಪ್ರ.ವಾ., ಮಾರ್ಚ್ 5) ಪ್ರಸ್ತುತ ಪ್ರಪಂಚವು ನಾಗಾಲೋಟದಲ್ಲಿ ಧಾವಿಸುತ್ತಿರುವ, ಇದೇ ಜೀವನವೆಂಬ ಹುಸಿ ಭ್ರಮೆಗಳಿಗೆ ಒಳಗಾಗಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಸುಸ್ಥಿರ ಅಭಿವೃದ್ಧಿ, ಸರ್ವಜೀವಜಾಲದ ಸುಖ ಸಮೃದ್ಧಿ ಬಯಸಿದ ಬುದ್ಧ, ಬಸವ, ಗಾಂಧಿ, ವಿವೇಕಾನಂದ, ಈಗಿನ ಮೇಧಾ ಪಾಟ್ಕರ್, ಸುಂದರಲಾಲ್ ಬಹುಗುಣ, ಗ್ರೇಟಾ ಥನ್ಬರ್ಗ್, ವಂದನಾ ಶಿವ ಅವರಂತಹವರ ಬುದ್ಧಿಮಾತಿನ ಕೊಳಲಗಾನ, ಹಿತಧ್ವನಿ ಹೃದಯಗಳಿಗೆ ನಾಟುತ್ತಿಲ್ಲ. ಹೋಲಿಕೆ ಮತ್ತು ಸ್ಪರ್ಧೆಗಳ ಮೇಲಾಟದಲ್ಲಿ ಪರಿಸರನಾಶ, ಮೌಲ್ಯಗಳ ವಿನಾಶ, ಭೂಮಿ, ಹೆಣ್ಣಿನ ಮೇಲಿನ ಶೋಷಣೆ, ಅತ್ಯಾಚಾರ, ಅಧಿಕಾರದಾಹದಿಂದ ಜೀವಜಾಲವೇ ನಲುಗುತ್ತಿದೆ.