ರೈತ ಹೊಲಗಳಲ್ಲಿ ಬಿತ್ತನೆ ಮಾಡುವಾಗಲೇ ಮಣ್ಣು ಮತ್ತು ಬೀಜಕ್ಕೆ ವಿಷವಿಕ್ಕಿ, ಯಾವ ಕೀಟಗಳೂ ಬರಬಾರದೆಂದು ಹುನ್ನಾರ ಮಾಡಿರುತ್ತಾನೆ ಎಂಬುದು, ಪಾಪ ಈ ಮೂಕ ಪಕ್ಷಿಗಳಿಗೇನು ಗೊತ್ತು? ಇದರಿಂದ ಪಾರಿವಾಳ ಮಾತ್ರವಲ್ಲ, ಅಲ್ಲಿನ ಸಕಲ ಜೀವಿಗಳ ಉಳಿವಿಗೂ ಅಪಾಯ ಉಂಟಾಗಿದೆ. ಇದು, ಮುಂದಿನ ದಿನಗಳಲ್ಲಿ ಮನುಷ್ಯನಿಗೂ ಅಪಾಯವನ್ನು ತಂದೊಡ್ಡುವುದು ಖಚಿತ. ಮಲೆನಾಡಿನಲ್ಲಿ ಕೆಲ ದಿನಗಳ ಹಿಂದೆ ಅಡಿಕೆ ಸಿಂಗಾರ ಅಥವಾ ಹೂವಿಗೆ ರಾಸಾಯನಿಕ ಕೀಟನಾಶಕವನ್ನು ಸಿಂಪಡಿಸಿ ಲಕ್ಷಗಟ್ಟಲೆ ಜೇನುನೊಣಗಳ ಮಾರಣಹೋಮ ನಡೆದರೂ ಸರ್ಕಾರ, ರೈತ ಸಂಘಟನೆಗಳು ಮೌನ ತಾಳಿದ್ದು, ನಮ್ಮ ಆಧುನಿಕ ಕೃಷಿ ಪದ್ಧತಿಯ ವಿನಾಶಕಾರಿ ರೂಪವನ್ನು ತೋರಿಸುತ್ತದೆ.