ನವದೆಹಲಿ, ಜೂನ್ 2 (ಪಿಟಿಐ)– ಭಾರತೀಯ ಕಮ್ಯುನಿಸ್ಟ್ ಪಕ್ಷವು ಎಚ್.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರವನ್ನು ಸೇರಲಿದೆ. ಇದರಿಂದ ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಎಡಪಕ್ಷವೊಂದು ಕೇಂದ್ರದ ಅಧಿಕಾರದಲ್ಲಿ ಭಾಗಿಯಾದಂತಾಗಿದೆ.
ಇಂದು ಮುಕ್ತಾಯಗೊಂಡ ಪಕ್ಷದ ರಾಷ್ಟ್ರೀಯ ಮಂಡಳಿಯ ಎರಡು ದಿನಗಳ ಸಭೆಯಲ್ಲಿ ಬಹುಮತದಿಂದ ಈ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬುಧವಾರ ರಾಜ್ಯ ಸಂಪುಟ ರಚನೆ
ಬೆಂಗಳೂರು, ಜೂನ್ 2– ರಾಜ್ಯದ ನೂತನ ಸಚಿವ ಸಂಪುಟ ರಚನೆ ಬುಧವಾರ ಆಗಲಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
‘ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರ ನಿಧನದಿಂದ ರಾಷ್ಟ್ರದಲ್ಲಿ ಏಳು ದಿನಗಳ ಶೋಕಾಚರಣೆ ಇರುವುದರಿಂದ ನೂತನ ಸಚಿವ ಸಂಪುಟ ರಚನೆಗೆ ಅಡ್ಡಿಗಳೇನಾದರೂ ಇವೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಆಡಂಬರ ಇಲ್ಲದೆ ಸರಳವಾಗಿ ಈ ಕಾರ್ಯವನ್ನು ನಡೆಸಬಹುದಾಗಿದೆ’ ಎಂದು ಸ್ಪಷ್ಟಪಡಿಸಿದರು.