ಬೆಂಗಳೂರು: ಕಣ್ಣು ಹಾಯಿಸಿದಷ್ಟೂ ದೂರ ಹರಡಿರುವ ಕಲ್ಲುಗಳು. ಗುಂಡಿ ಬಿದ್ದ ಜಾಗಗಳಲ್ಲೆಲ್ಲಾ ತುಂಬಿರುವ ಮಳೆ ನೀರು. ಕಾಲಿಟ್ಟಲ್ಲೆಲ್ಲಾ ಕೆಸರು..ಇದ್ಯಾವುದೋ ಕುಗ್ರಾಮದ ಚಿತ್ರಣವಲ್ಲ. ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ದುಸ್ಥಿತಿ.ಈ ರಸ್ತೆಗಳು ಡಾಂಬರು ಕಾಣದೆ ವರ್ಷಗಳೇ ಉರುಳಿವೆ. ಅಲ್ಲೊ ಇಲ್ಲೊ ಹಾಕಿದ್ದ ಒಂದಷ್ಟು ಡಾಂಬರು ಮಳೆಯ ರಭಸಕ್ಕೆ ಕೊಚ್ಚಿಹೋಗಿವೆ. ಕೆಸರಿನ ರಾಡಿಯ ನಡುವೆ ಸಾಗಲು ಪಾದಚಾರಿಗಳು ಹರಸಾಹಸ ಪಡಬೇಕಿದೆ. ದ್ವಿಚಕ್ರ ವಾಹನ ಸವಾರರೂ ಉಸಿರು ಬಿಗಿ ಹಿಡಿದೇ ಸಾಗಬೇಕಿದೆ. ಆಯಾ ತಪ್ಪಿದರೆ ರಸ್ತೆ ಬದಿಯಲ್ಲೇ ಸೃಷ್ಟಿಯಾಗಿರುವ ಹೊಂಡಗಳಲ್ಲಿ ಬೀಳುವುದು ನಿಶ್ಚಿತ.