ಹುಬ್ಬಳ್ಳಿ: ಸಾಂಘಿಕ ಪ್ರದರ್ಶನ ನೀಡಿದ ಕರ್ನಾಟಕ ತಂಡ ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ 9 ವಿಕೆಟ್ಗಳ ಸುಲಭ ಜಯ ದಾಖಲಿಸಿತು. ಈ ಗೆಲುವಿನೊಡನೆ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿತು.
ಭಾನುವಾರ ಮೂರನೇ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್ನಲ್ಲಿ 7 ವಿಕೆಟ್ಗೆ 113 ರನ್ ಗಳಿಸಿದ್ದ ಮಧ್ಯಪ್ರದೇಶ ಅಂತಿಮ ದಿನವಾದ ಸೋಮವಾರ 187 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ನಲ್ಲಿ 147 ರನ್ಗಳ ಮುನ್ನಡೆ ಗಳಿಸಿದ್ದ ಕರ್ನಾಟಕ ಆ ಮೂಲಕ ಗೆಲುವಿಗೆ 40 ರನ್ಗಳ ಅಲ್ಪ ಗುರಿ ಎದುರಿಸಿತು. ಕರ್ನಾಟಕ 7.1 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 41 ರನ್ ಗಳಿಸಿ ಗುರಿತಲುಪಿತು. ಪ್ರಖರ್ ಚತುರ್ವೇದಿ 29 ರನ್ ಗಳಿಸಿ ಗೆಲುವನ್ನು ತ್ವರಿತಗೊಳಿಸಿದರು.
ಇದಕ್ಕೆ ಮೊದಲು, ಮಧ್ಯಪ್ರದೇಶ ತಂಡದ ಧನಂಜಯ ದೀಕ್ಷಿತ್ ತಾಳ್ಮೆಯಿಂದ ಆಡಿ ಅರ್ಧಶತಕ (54; 92ಎ, 4X8) ಪೂರೈಸಿದರು. ಅವರು ಅನಂತ್ ದುಬೆ ಜತೆ ಎಂಟನೇ ವಿಕೆಟ್ಗೆ 37 ರನ್ ಸೇರಿಸಿದ್ದರಿಂದ ಇನಿಂಗ್ಸ್ ಸೋಲು ತಪ್ಪಿಸಲು ಸಾಧ್ಯವಾಯಿತು.
ಮಧ್ಯಪ್ರದೇಶದ ಕೊನೆಯ ಮೂರು ವಿಕೆಟ್ಗಳು ಹಾರ್ದಿಕ್ ರಾಜ್ ಪಾಲಾದವು. ಅವರು 45 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಕರ್ನಾಟಕ ತಂಡ, ಜ.5 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್: 101.1 ಓವರ್ಗಳಲ್ಲಿ 269. ಕರ್ನಾಟಕ ಮೊದಲ ಇನಿಂಗ್ಸ್ 129.3 ಓವರ್ಗಳಲ್ಲಿ 416. ಮಧ್ಯಪ್ರದೇಶ ಎರಡನೇ ಇನಿಂಗ್ಸ್ 63.4 ಓವರ್ಗಳಲ್ಲಿ 187 (ಧನಂಜಯ ದೀಕ್ಷಿತ್ 54, ಸಾರಾಂಶ್ ಸುರಾನ 45, ವಿಷ್ಣು ಭಾರದ್ವಾಜ 25, ಹಾರ್ದಿಕ್ ರಾಜ್ 45ಕ್ಕೆ 5, ಸಮಿತ್ ದ್ರಾವಿಡ್ 24ಕ್ಕೆ3); ಕರ್ನಾಟಕ ಎರಡನೇ ಇನಿಂಗ್ಸ್ 7.1 ಓವರ್ಗಳಲ್ಲಿ 1 ವಿಕೆಟ್ಗೆ 41 (ಪ್ರಖರ್ ಚತುರ್ವೇದಿ 29, ವಿಷ್ಣು ಭಾರದ್ವಾಜ್ 14ಕ್ಕೆ 1).
ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್ ಜಯ
ಹುಬ್ಬಳ್ಳಿ: ಸಾಂಘಿಕ ಪ್ರದರ್ಶನ ತೋರಿದ ಕರ್ನಾಟಕ ತಂಡ ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.