ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶದ ನಿರೀಕ್ಷೆಯಲ್ಲಿ ದೇವದತ್ತ‌..

Last Updated 7 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ, ಕನ್ನಡಿಗ ದೇವದತ್ತ ಪಡಿಕ್ಕಲ್‌ ಕಳೆದ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಟೂರ್ನಿಯಾದ್ಯಂತ ಬೆಂಚ್‌ ಕಾಯಿಸಲಷ್ಟೇ ಸೀಮಿತಗೊಂಡಿದ್ದರು.

ವಯೋವರ್ಗದ ಟೂರ್ನಿಗಳಲ್ಲಿಜೂನಿಯರ್‌ ವಿಭಾಗದ ಸಹ ಆಟಗಾರರು, ಕೋಚ್‌ಗಳು ಹಾಗೂ ಆಯ್ಕೆಗಾರರು, ದೇವದತ್ತ ಅವರ ಪ್ರಗತಿಯನ್ನು ಕಣ್ಣಾರೆ ಕಂಡಿದ್ದಾರೆ. ಆದರೆ ಸೀನಿಯರ್ ವಿಭಾಗದಲ್ಲಿ ಅವರ ಆಟ ಹೆಚ್ಚು ಗಮನ ಸೆಳೆಯಲಿಲ್ಲ. 2019–20ರ ದೇಶಿ ಋತುವಿನಲ್ಲಿ 33 ಪಂದ್ಯಗಳಿಂದ 1838 ರನ್‌ ಗಳಿಸಿದ ಈ ಎಡಗೈ ಬ್ಯಾಟ್ಸ್‌ಮನ್‌ 13ನೇ ಆವೃತ್ತಿಯ ಐಪಿಎಲ್‌ ಮುಂದಿರುವಂತೆ ಮುನ್ನೆಲೆಗೆ ಬಂದರು.

‘ಈ ವರ್ಷ ತೋರಿದ ಸಾಮರ್ಥ್ಯ ಖುಷಿ ತಂದಿದೆ’ ಎಂದು ‘ಪ್ರಜಾಪ್ಲಸ್‌’ನೊಂದಿಗೆ ತಮ್ಮ ಮನದಾಳವನ್ನು ದೇವದತ್ತ ಹಂಚಿಕೊಂಡರು.

‘ಟೂರ್ನಿಯಲ್ಲಿ ಆಡಲು ಬಹಳ ದಿನಗಳಿಂದ ಕಾಯುತ್ತಿದ್ದೇನೆ. ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶ ಸಿಕ್ಕರೆ ಉತ್ತಮ ಸಾಮರ್ಥ್ಯ ತೋರಿಸುವ ವಿಶ್ವಾಸವಿದೆ’ ಎನ್ನುತ್ತಾರೆ ಅವರು.

ಹೋದ ಆವೃತ್ತಿಯಲ್ಲಿ ತಂಡದಲ್ಲಿದ್ದರೂ ಆರ್‌ಸಿಬಿ ಫ್ರಾಂಚೈಸ್‌ ಅವರತ್ತ ಹೆಚ್ಚು ಗಮನಹರಿಸಿರಲಿಲ್ಲ. ತಂಡವು ತೋರಿದ ಸಾಧಾರಣ ಸಾಮರ್ಥ್ಯವು ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು. ಸ್ಥಳೀಯ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ ಎಂಬ ಕೂಗು ಕೂಡ ಕೇಳಿ ಬಂದಿತ್ತು. ಈಗ, ದೇವದತ್ತ ಅವರು ಆರ್‌ಸಿಬಿ ಜೆರ್ಸಿ ತೊಟ್ಟು ಆಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಆರ್‌ಸಿಬಿಯ 21 ಆಟಗಾರರ ತಂಡದಲ್ಲಿರುವ ಕರ್ನಾಟಕದ ಇಬ್ಬರು ಆಟಗಾರರುದೇವದತ್ತ ಹಾಗೂ ಪವನ್‌ ದೇಶಪಾಂಡೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ದೇಶಪಾಂಡೆ ರಾಜ್ಯದ ಪ್ರಮುಖ ಆಟಗಾರ. ಹೋದ ದೇಶಿ ಋತುವಿನಲ್ಲಿ ಅವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಹರಿದುಬಂದಿವೆ. ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ್ದಾರೆ. ದೇವದತ್ತ ಕರ್ನಾಟಕದ ಹೊರಗೂ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

‘ಬೆಂಗಳೂರಿಗನಾಗಿ, ಆರ್‌ಸಿಬಿ ತಂಡದ ಆಟವನ್ನು ಕಣ್ತುಂಬಿಕೊಳ್ಳುತ್ತ ಬೆಳೆದಿದ್ದೇನೆ. ಆರ್‌ಸಿಬಿಯನ್ನು ಪ್ರತಿನಿಧಿಸುವುದು ನನ್ನ ಕನಸಾಗಿತ್ತು. ರಾಜ್ಯದ ಅಭಿಮಾನಿಗಳ ಪ್ರೀತಿ ಅಪಾರ. ಅವರು ಯಾವತ್ತೂ ನಮಗೆ ಬೆಂಬಲವಾಗಿದ್ದಾರೆ’ ಎಂದಿದ್ದಾರೆ ದೇವದತ್ತ.

ದೇವದತ್ತ ಅವರ ತ್ವರಿತಗತಿಯಲ್ಲಿ ರನ್‌ ಗಳಿಸುವ ಶೈಲಿ, ಸೀಮಿತ ಓವರ್‌ಗಳ ಮಾದರಿಯಲ್ಲಿ ಅಬ್ಬರದ ಆಟ ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಮೆಚ್ಚುಗೆಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT