ಇಂದೋರ್: ಗಾಯದ ಸಮಸ್ಯೆಗೆ ಒಳಗಾಗಿರುವ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಮುಂಬರುವ ಟ್ವೆಂಟಿ-20 ವಿಶ್ವಕಪ್ಗೆ ಅಲಭ್ಯರಾಗಿದ್ದಾರೆ.
ಹಾಗಾಗಿ ಬೂಮ್ರಾ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲವೆನಿಸಿದೆ. ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನಷ್ಟೇ ಬದಲಿ ಆಟಗಾರನನ್ನು ಘೋಷಿಸಬೇಕಿದೆ.
ಈ ನಡುವೆ ಬೂಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಕುರಿತು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ. ಆದರೆ ಇವೆಲ್ಲವೂ ಫಿಟ್ನೆಸ್ ಅವಲಂಬಿಸಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಬದಲಿ ಆಟಗಾರನ ವಿಚಾರಕ್ಕೆ ಬಂದಾಗ ನಮ್ಮಲ್ಲಿರುವ ಆಯ್ಕೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಅಕ್ಟೋಬರ್ 15ರವರೆಗೆ (ಐಸಿಸಿ ಗಡುವು) ಕಾಲಾವಕಾಶವಿದೆ. ದುರದೃಷ್ಟವಶಾತ್ ಮೀಸಲು ಆಟಗಾರರ ಪಟ್ಟಿಯಲ್ಲಿರುವ ಶಮಿಗೆ ಕಳೆದೆರಡು ಸರಣಿಗಳಲ್ಲಿ ಆಡಲು ಸಾಧ್ಯವಾಗಲಿಲ್ಲ ಎಂದು ದ್ರಾವಿಡ್ತಿಳಿಸಿದ್ದಾರೆ.
ಆ ದೃಷ್ಟಿಕೋನದಿಂದ ಶಮಿ ಸೂಕ್ತ ಆಯ್ಕೆಯಾಬಹುದು. ಆದರೆ ಅವರೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ವರದಿ ಪಡೆಯಬೇಕಿದೆ. ತದಾ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಕೋವಿಡ್ನಿಂದಾಗಿ ಶಮಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು. ಬೂಮ್ರಾ ಸ್ಥಾನವನ್ನು ತುಂಬಲು ಶಮಿ ಜೊತೆಗೆ ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಾಹರ್ ಹೆಸರುಗಳು ಸಹ ಕೇಳಿ ಬಂದಿವೆ.
ವಿಶ್ವಕಪ್ಗಾಗಿ ಭಾರತ ತಂಡವು ನಾಳೆ (ಗುರುವಾರ) ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಬಳಿಕ ಪರ್ತ್ ಹಾಗೂ ಬ್ರಿಸ್ಬೇನ್ನಲ್ಲಿ ತಲಾ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲಿವೆ.
ಅಕ್ಟೋಬರ್ 23ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.