ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಬಾಲಂಗೋಚಿಗಳು ಆಲ್‌ರೌಂಡರ್‌ಗಳಾಗುವ ಪರಿ

Last Updated 16 ಫೆಬ್ರುವರಿ 2021, 14:50 IST
ಅಕ್ಷರ ಗಾತ್ರ

ಸೋಮವಾರ ಮಧ್ಯಾಹ್ನ ರವಿಚಂದ್ರನ್ ಅಶ್ವಿನ್ ಚೆಪಾಕ್ ಅಂಗಳದಲ್ಲಿ ಶತಕದ ಗಡಿ ಮುಟ್ಟಿದಾಗಿನ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದರಲ್ಲಿ ಶತಕ ಗಳಿಸಿದ ಅಶ್ವಿನ್ ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳಿಗಿಂತಲೂ ಹೆಚ್ಚಾಗಿ ಸಂಭ್ರಮಾಚರಣೆ ಮಾಡಿದ್ದು ಯಾರು ಗೊತ್ತೆ?

ನಾನ್‌ ಸ್ಟ್ರೈಕರ್‌ ತುದಿಯಲ್ಲಿದ್ದ ಹೈದರಾಬಾದಿ ಹುಡುಗ ಮೊಹಮ್ಮದ್ ಸಿರಾಜ್.

ಹೌದು; ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಸಿರಾಜ್ ಕ್ರೀಸ್‌ಗೆ ಕಾಲಿಟ್ಟಾಗ ಅಶ್ವಿನ್‌ಗೆ ಶತಕ ಪೂರೈಸಲು ಇನ್ನೂ 23 ರನ್‌ಗಳು ಬೇಕಿದ್ದವು. ಪರಿಣತ ಬ್ಯಾಟ್ಸ್‌ಮನ್‌ಗಳೇ ಪರದಾಡಿದ್ದ ಪಿಚ್‌ನಲ್ಲಿ ಸಿರಾಜ್ ಹೆಚ್ಚು ಎಸೆತಗಳನ್ನು ಎದುರಿಸುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಸಿರಾಜ್, ಅಶ್ವಿನ್ ಶತಕ ಪೂರೈಸಿದಾಗ ತಮ್ಮದೇ ಸಾಧನೆಯೆನ್ನುವಷ್ಟರ ಮಟ್ಟಿಗೆ ಸಂಭ್ರಮಿಸಿದರು. ಆಮೇಲೆ ತಮ್ಮ ಬ್ಯಾಟಿಂಗ್ ಕೌಶಲವನ್ನೂ ತೋರಿಸಿ, ಎರಡು ಸಿಕ್ಸರ್ ಹೊಡೆದರು.

ಸಿರಾಜ್ ದೃಷ್ಟಾಂತವು ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಆಲ್‌ರೌಂಡರ್‌ ಆಗಿ ಪರಿವರ್ತನೆಗೊಳ್ಳುವ ರೂಪಕವೂ ಹೌದು. ಚೆನ್ನೈನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿ, ಎರಡನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ ಆರ್. ಅಶ್ವಿನ್, ಎಡಗೈ ಆಟಗಾರ ರವೀಂದ್ರ ಜಡೇಜ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗಾಗಲೇ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ಅಕ್ಷರ್ ಪಟೇಲ್ ಸದ್ಯ ನಮ್ಮ ಮುಂದಿರುವ ಭರವಸೆಯ ತಾರೆಗಳು.

ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಬೌಲರ್‌ಗಳಾಗಿ ತಂಡಕ್ಕೆ ಕಾಲಿಟ್ಟವರು, ತಮ್ಮ ಬ್ಯಾಟಿಂಗ್ ಮೂಲಕ ವಿಜಯದ ರೂವಾರಿಯಾದ ಹತ್ತಾರು ಉದಾಹರಣೆಗಳು ನಮಗೆ ಸಿಗುತ್ತವೆ. ದಶಕಗಳ ಹಿಂದೆ ಐದು ಅಥವಾ ಆರನೇ ಕ್ರಮಾಂಕದ ಆಟಗಾರ ಔಟಾದರೆ ಮುಗಿಯಿತು. ಭಾರತದ ಬ್ಯಾಟಿಂಗ್ ಕಥೆ ಅಂತ್ಯವಾಗುತ್ತಿತ್ತು.

1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಸಂಪ್ರದಾಯವನ್ನು ಬದಲಿಸಿದ್ದು ಕಪಿಲ್ ದೇವ್. ಮಧ್ಯಮವೇಗದ ಬೌಲರ್, ಪಂದ್ಯವೊಂದರಲ್ಲಿ 175 ರನ್‌ಗಳನ್ನೂ ಹೊಡೆಯಬಲ್ಲ, ಹತ್ತಾರು ಅಡಿಗಳಷ್ಟು ದೂರ ಓಡಿ ಕ್ಯಾಚ್ ಪಡೆಯಬಲ್ಲ ಮತ್ತು ಸಮರ್ಥ ನಾಯಕನಾಗಬಲ್ಲ ಎಂಬುದನ್ನು ತೋರಿಸಿಕೊಟ್ಟರು.

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಕಪಿಲ್‌ ಎಂಟು ಶತಕ ಹೊಡೆದಿರುವ ದಿಗ್ಗಜ. 31.05 ಸರಾಸರಿಯಲ್ಲಿ 5248 ರನ್‌ಗಳನ್ನು ಹೊಡೆದಿದ್ದಾರೆ. ಆದ್ದರಿಂದಲೇ ಅವರು ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್. ’ತಂಡದಲ್ಲಿರುವ 11 ವಿಕೆಟ್‌ಗಳಿಗೂ ಮೌಲ್ಯ ಇದೆ. ಆ ಮೌಲ್ಯಕ್ಕೆ ತಕ್ಕಂತೆ ತಂಡಕ್ಕೆ ಲಾಭ ಸಿಗಬೇಕು. ಆದ್ದರಿಂದ ಎಲ್ಲರೂ ಆಲ್‌ರೌಂಡರ್‌ಗಳಾದರೆ ತಪ್ಪಿಲ್ಲ‘ ಎಂದು ಕಪಿಲ್ ಹೇಳುತ್ತಾರೆ.

ಅವರನ್ನೇ ಅನುಕರಿಸುತ್ತ ಬೆಳೆದ ಮತ್ತೊಬ್ಬ ಕ್ರಿಕೆಟಿಗ ಮನೋಜ್ ಪ್ರಭಾಕರ್. ಅವರು ತಮ್ಮ ಪದಾರ್ಪಣೆ ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ಬಾಲಂಗೋಚಿ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಂಡವರು. ಆದರೆ ಅವರ ವೃತ್ತಿಜೀವನದ ಕೊನೆಯ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದವರು. ಇರ್ಫಾನ್ ಪಠಾಣ್, ಯೂಸುಫ್ ಪಠಾಣ್,

ಭಾರತದಲ್ಲಿ ಅಷ್ಟೇ ಅಲ್ಲ. ಬೇರೆ ದೇಶದ ತಂಡಗಳಲ್ಲಿಯೂ ಇಂತಹ ಪರಿವರ್ತನೆಗಳು ಗಮನ ಸೆಳೆದಿವೆ. ಪಾಕಿಸ್ತಾನದ ಇಮ್ರಾನ್ ಖಾನ್, ವಾಸೀಂ ಅಕ್ರಂ, ಇಂಗ್ಲೆಂಡ್‌ನ ಇಯಾನ್ ಬಾಥಮ್, ಆ್ಯಂಡ್ರ್ಯೂ ಫ್ಲಿಂಟಾಫ್, ಜೇಮ್ಸ್ ಆ್ಯಂಡರ್ಸನ್, ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾ, ರಿಚಿ ಬೆನೊ. ಪ್ಯಾಟ್‌ ಕಮಿನ್ಸ್ ಪ್ರಮುಖರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ಕೆಲವು ಬ್ಯಾಟಿಂಗ್‌ ಝಲಕಗಳನ್ನೂ ಮರೆಯುವಂತಿಲ್ಲ. ನ್ಯೂಜಿಲೆಂಡ್ ಈ ವಿಷಯದಲ್ಲಿ ಬೇರೆಲ್ಲ ತಂಡಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಕಿವೀಸ್ ಬಳಗದಲ್ಲಿ ಬ್ಯಾಟಿಂಗ್‌ ಆಲ್‌ರೌಂಡರ್ ಮತ್ತು ಬೌಲಿಂಗ್‌ ಆಲ್‌ರೌಂಡರ್‌ಗಳು ಸಮಸಂಖ್ಯೆಯಲ್ಲಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಅವರು ಬ್ಯಾಟ್ಸ್‌ಮನ್‌ಗಳಾದರೂ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಮರ್ಥರು.

ಆದರೆ, ಭಾರತ ತಂಡದಲ್ಲಿ ಬ್ಯಾಟಿಂಗ್ ಆಲ್‌ರೌಂಡರ್‌ಗಳ ಸಂಖ್ಯೆ ಮೊದಲಿನಿಂದಲೂ ಕಡಿಮೆ ಮೊಹಿಂದರ್ ಅಮರನಾಥ್, ಸಚಿನ್ ತೆಂಡೂಲ್ಕರ್, ಸೌರವ್‌ ಗಂಗೂಲಿ, ರಾಬಿನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ ಅದರಲ್ಲಿ ಪ್ರಮುಖರು. ಸದ್ಯದ ತಂಡದಲ್ಲಿ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಕೊರತೆ ಇಲ್ಲ. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೆಶ್ವರ್ ಪೂಜಾರ, ಹನುಮವಿಹಾರಿ, ಅಜಿಂಕ್ಯ ರಹಾನೆ, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ ಅವರು ಸಾಂದರ್ಭಿಕ ಬೌಲರ್‌ ಕೂಡ ಆಗಿಲ್ಲ.

ಟಿ20 ಕ್ರಿಕೆಟ್ ಯುಗದಲ್ಲಿ ಬ್ಯಾಟಿಂಗ್ ಅಬ್ಬರ ಮೇರೆ ಮೀರಿದೆ. ಅತ್ಯಾಧುನಿಕ ಬ್ಯಾಟ್‌ಗಳು, ಬ್ಯಾಟ್ಸ್‌ಮನ್‌ಗಳ ಕೌಶಲಗಳು ಮತ್ತು ಸುಧಾರಿತವಾದ ತಂತ್ರಜ್ಞಾನ ಆಧಾರಿತ ತರಬೇತಿಯಿಂದಾಗಿ ಬ್ಯಾಟ್ಸ್‌ಮನ್‌ಗಳದ್ದೇ ಹೆಚ್ಚಿನ ಸಂದರ್ಭದಲ್ಲಿ ಮೇಲುಗೈ ಆಗುತ್ತದೆ. ಆದ್ದರಿಂದ ಬೌಲರ್‌ಗಳು ಹೆಚ್ಚು ದಂಡನೆಗೆ ಒಳಗಾಗುತ್ತಿರುವುದು ಸುಳ್ಳಲ್ಲ. ಕಾಲಕ್ರಮೇಣ ಬೌಲಿಂಗ್‌ನಲ್ಲಿಯೂ ಹೊಸ ಕೌಶಲಗಳು ಬರುತ್ತಿವೆ. ಆದರೆ, ಟಿ20 ಪಂದ್ಯವೊಂದರಲ್ಲಿ ನಾಲ್ಕು ಓವರ್, ಏಕದಿನ ಪಂದ್ಯದಲ್ಲಿ 10 ಓವರ್ ಮತ್ತು ಟಸ್ಟ್‌ನಲ್ಲಿ 25–30 ಓವರ್‌ಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಬೌಲರ್‌ಗಳ ಮುಂದಿದೆ.

ಆದ್ದರಿಂದಲೇ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ ಅಭ್ಯಾಸಕ್ಕೂ ಬೌಲರ್‌ಗಳು ಪ್ರಾಧಾನ್ಯತೆ ಕೊಡುತ್ತಿದ್ದಾರೆ. ಥ್ರೋಡೌನ್ ಪರಿಣತರ ಸಹಾಯದಿಂದ ನೆಟ್ಸ್‌ನಲ್ಲಿ ಹೆಚ್ಚು ಎಸೆತಗಳನ್ನು ಎದುರಿಸುವತ್ತ ಚಿತ್ತ ನೆಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಚಚ್ಚಿಸಿಕೊಂಡ ರನ್‌ಗಳನ್ನು ಬ್ಯಾಟಿಂಗ್‌ನಲ್ಲಿ ಮರಳಿಸಿ ಸಮತೋಲನ ಸಾಧಿಸುವ ಛಲ ತೋರಿಸುತ್ತಿದ್ದಾರೆ.

ಇದು ತಂಡಕ್ಕೆ ಲಾಭವಾಗುತ್ತಿದೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್ ಸೇರಿದಾಗ ಬಾಲಂಗೋಚಿಗಳ ಬ್ಯಾಟಿಂಗ್ ಕಳೆಗಟ್ಟುತ್ತಿದೆ. ದಶಕದ ಹಿಂದೆ ಭಾರತದ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ನಡುವೆ ಇಂತಹ ಪೈಪೋಟಿ ಇರಲಿಲ್ಲ. ಪರಿಣತ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ನಡುವೆ ಒಬ್ಬರು ಆಲ್‌ರೌಂಡರ್ ಇದ್ದರೆ ಹೆಚ್ಚು ಎನ್ನುವಂತಿತ್ತು. ಸಚಿನ್, ಸೆಹ್ವಾಗ್, ದ್ರಾವಿಡ್, ಲಕ್ಷ್ಮಣ್ ಅವರು ತಂಡದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾಗ ಬ್ಯಾಟಿಂಗ್ ಬಲಿಷ್ಠವಾಗಿತ್ತು. ಅವರೆಲ್ಲರೂ ನಿವೃತ್ತಿ ಹೊಂದಿದಂತೆ ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಆಲ್‌ರೌಂಡರ್‌ಗಳಿಗೆ ಮಹತ್ವ ನೀಡಿದರು. ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುರೇಶ್ ರೈನಾ, ಹರಭಜನ್ ಸಿಂಗ್, ಅಶ್ವಿನ್ ಮತ್ತು ಜಡೇಜ ಅವರಿಗೆ ಮಹತ್ವ ಲಭಿಸಿತು.

ಈಗ ಜೂನಿಯರ್ ಕ್ರಿಕೆಟ್‌ ಹಂತದಲ್ಲಿಯೇ ಬೌಲರ್‌ಗಳಾಗಿ ಪ್ರವೇಶಿಸುವ ಹುಡುಗರು ತಮ್ಮ ಬ್ಯಾಟಿಂಗ್‌ಗೆ ಸಾಣೆ ಹಿಡಿಯುವುದಕ್ಕೂ ಆದ್ಯತೆ ನೀಡುತ್ತಿದ್ದಾರೆ. ಭಾರತ ತಂಡಕ್ಕಲ್ಲದಿದ್ದರೂ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡುವ ಅವಕಾಶದ ನಿರೀಕ್ಷೆಯಲ್ಲಿಯೂ ಈ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಒಟ್ಟಿನಲ್ಲಿ ’ಬಾಲಂಗೋಚಿ‘ಯಾಗಿ ಆಟ ಆರಂಭಿಸಿ, ಆಲ್‌ರೌಂಡರ್ ಆಗಿ ತಂಡಕ್ಕೆ ವಿಜಯದ ಕಿರೀಟ ತೊಡಿಸುವ ಮಟ್ಟಕ್ಕೆ ಬೆಳೆಯುವ ಪರಿ ಅನನ್ಯವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT