ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಭಾರಿಯಾಗಿ ನಟ ಸುನೀಲ್ ಶೆಟ್ಟಿ ಅವರು ಮಂಗಳವಾರ ನೇಮಕಗೊಳ್ಳಲಿದ್ದಾರೆ. ಅವರಿಗಿರುವ ತಾರಾಮೌಲ್ಯವನ್ನು ಬಳಸಿ,ಮಾದಕ ಮದ್ದುಸೇವನೆ ಪಿಡುಗಿನಿಂದ ದೇಶದ ಕ್ರೀಡಾಕ್ಷೇತ್ರವನ್ನು ಮುಕ್ತಗೊಳಿಸಬಹುದೆಂಬ ವಿಶ್ವಾಸವನ್ನು ನಾಡಾ ಹೊಂದಿದೆ.
ಈ ವರ್ಷ 150ಕ್ಕೂ ಹೆಚ್ಚು ಕ್ರೀಡಾಪಟುಗಳು ಮದ್ದುಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಮೂರನೇ ಒಂದರಷ್ಟು ಮಂದಿ ದೇಹದಾರ್ಢ್ಯ ಪಟುಗಳು. ಟೋಕಿಯೊ ಒಲಿಂಪಿಕ್ಸ್ಗೆ ಎಂಟು ತಿಂಗಳು ಇರುವಾಗ ಈ ಬೆಳವಣಿಗೆ ಒಳ್ಳೆಯ ಸಂಕೇತವಲ್ಲ ಎಂದು ಭಾವಿಸಲಾಗಿದೆ.
ರಾಷ್ಟ್ರೀಯ ಮದ್ದುಸೇವನೆ ತಡೆ ಪ್ರಯೋಗಾಲಯವನ್ನು ‘ವಾಡಾ’ ಅಮಾನತ್ತಿನಲ್ಲಿ ಇಟ್ಟಿರುವುದರಿಂದ, ಭಾರತದಲ್ಲಿ ಸಂಗ್ರಹಿಸುವ ಮಾದರಿಗಳನ್ನು ದೇಶದ ಹೊರಗೆ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.