ನವದೆಹಲಿ: ಕಳೆದ 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳ 8 ಮಂದಿ ಉನ್ನತ ಕಮಾಂಡರ್ಗಳು ಸೇರಿದಂತೆ 22 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈದ್ ಹಬ್ಬ ಮುಗಿಯುತ್ತಿದ್ದಂತೆಯೇ ಉಗ್ರ ಸಂಘಟನೆಗಳ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ನಮ್ಮ ಕಡೆಯವರಿಗೆ ಹೆಚ್ಚಿನ ಹಾನಿಯಾಗದಂತೆ ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಇಸ್ಲಾಮಿಕ್ ಸ್ಟೇಟ್ನ ಜಮ್ಮು ಮತ್ತು ಕಾಶ್ಮೀರದ ಕಮಾಂಡರ್ ಆದಿಲ್ ಆಹ್ಮದ್ ವಾನಿ, ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರ ಶಹೀನ್ ಅಹಮ್ಮದ್ ಥೋಕರ್ರನ್ನು ಮೇ 25ರಂದು ಕುಲ್ಗಾಂನಲ್ಲಿ ಹತ್ಯೆ ಮಾಡಲಾಗಿದೆ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಪರ್ವೇಜ್ ಅಹಮದ್ ಪಂಡಿತ್ ಹಾಗೂ ಜೈಷ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಶಕೀಲ್ ಅಹಮದ್ ಇವರನ್ನು ಮೇ 30 ರಂದು ಕುಲ್ಗಾಂನ ವಾನ್ಪೊರಾದಲ್ಲಿ ಹತ್ಯೆ ಮಾಡಲಾಗಿದೆ.
ಜೈಷ್-ಎ-ಮೊಹಮ್ಮದ್ ಗ್ರೂಪ್ ಕಮಾಂಡರ್ ಅಖೀಬ್ ರಂಜಾನ್ ವಾನಿ ಮತ್ತು ಅವಂತಿಪೊರಾದಲ್ಲಿ ಜೆಇಎಂ ಕಮಾಂಡರ್ ಮೊಹಮ್ಮದ್ ಮಕ್ಬೂಲ್ ಛೋಪನ್ನನ್ನು ಜೂನ್ 2ರಂದು ಅವಂತಿಪೊರಾದ ಸೈಮೂ ತ್ರಾಲ್ನಲ್ಲಿ ಹತ್ಯೆ ಮಾಡಲಾಗಿದೆ.
ಜೂನ್ 3ರಂದು ಜೆಇಎಂನ ಉನ್ನತ ಕಮಾಂಡರ್, ಪಾಕಿಸ್ತಾನದ ನಿವಾಸಿ ಫೌಜಿ ಭಾಯಿ, ಹಿಜ್ಬುಲ್ ಮುಜಾಹಿದೀನ್ ಉನ್ನತ ಕಮಾಂಡರ್ ಮಂಝೂರ್ ಅಹ್ಮದ್ ಕರ್, ಜೆಇಎಂ ಉನ್ನತ ಕಮಾಂಡರ್ ಜಾವೇದ್ ಅಹ್ಮದ್ ಝಾರ್ಗರ್ನನ್ನು ಪುಲ್ವಾಮಾದ ಕಾಂಗನ್ನಲ್ಲಿ ಮಟ್ಟಹಾಕಲಾಗಿದೆ.
ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಇಶ್ಪಾಖ್ ಅಹ್ಮದ್ ಇಟೂ ಹಾಗೂ ಜೆಇಎಂ ಕಮಾಂಡರ್ ಒವೈಸ್ ಅಹ್ಮದ್ ಮಲಿಕ್ನನ್ನು ಜೂನ್ 7ರಂದು ರೆಬಾನ್ನ ಶೋಪಿಯಾನ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ. ಇದೇ ಎನ್ಕೌಂಟರ್ನಲ್ಲಿ ಹಿಜ್ಬುಲ್ ಕಮಾಂಡರ್ಗಳಾದ ಅದಿಲ್ ಅಹ್ಮದ್ ಮಿರ್, ಬಿಲಾಲ್ ಅಹ್ಮದ್ ಭಟ್ ಮತ್ತು ಸಜದ್ ಅಹ್ಮದ್ ವೇಗೇ ಇವರನ್ನು ಹತ್ಯೆ ಮಾಡಲಾಗಿದೆ.
ಜೂನ್ 7ರಂದು ಹಿಜ್ಬುಲ್ ಮುಜಾಹಿದೀನ್ನ ಕಾರ್ಯಾಚರಣೆ ಕಮಾಂಡರ್ ಉಮರ್ ಮೊಹಿಯುದ್ದೀನ್ ಧೋಬಿ, ಎಲ್ಇಟಿ ಕಮಾಂಡರ್ ರಯೀಸ್ ಅಹ್ಮದ್ ಖಾನ್, ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ಗಳಾದ ಸಕ್ಲೇನ್ ಅಹ್ಮದ್ ವೇಗೆ ಹಾಗೂ ವಕೀಲ್ ಅಹ್ಮದ್ ನೈಕೂನನ್ನು ಶೋಪಿಯಾನ್ನ ರೆಬಾನ್ನಲ್ಲಿ ಕೊಲ್ಲಲಾಗಿದೆ.
ಫೌಜು ಭಾಯಿಯನ್ನು ಹೊರತುಪಡಿಸಿ ಹೆಚ್ಚಿನ ಎಲ್ಲ ಭಯೋತ್ಪಾದಕರೂ ಜಮ್ಮು–ಕಾಶ್ಮೀರದ ಶೋಪಿಯಾನ್, ಕುಲ್ಗಾಂ ಮತ್ತು ಪುಲ್ವಾಮಾದವರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.