ಚಂಡೀಗಡ: ಪಂಜಾಬಿನ ಸಂಗ್ರೂರ್ ಜಿಲ್ಲೆಯಲ್ಲಿ ಶಾಲಾ ವಾಹನಕ್ಕೆ ಬೆಂಕಿ ತಗುಲಿ, ನಾಲ್ಕು ಮಕ್ಕಳು ಶನಿವಾರ ಸಜೀವ ದಹನವಾಗಿದ್ದಾರೆ.
ಮೃತ ಮಕ್ಕಳಲ್ಲಿ ಮೂರು ವರ್ಷದ ಹೆಣ್ಣು ಮಗು ಮತ್ತು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದ್ದಾರೆ.
ಮಕ್ಕಳು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ವಾಹನದಲ್ಲಿ ಒಟ್ಟು ಹನ್ನೆರಡು ಮಕ್ಕಳಿದ್ದರು. ಉಳಿದ ಎಂಟು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಶಾಲಾ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ಚಾಲಕ ಮತ್ತು ಮಾಲೀಕನ ವಿರುದ್ಧ ಸೆಕ್ಷನ್ 304(ಉದ್ದೇಶಪೂರ್ವಕ ಅಲ್ಲದ ಕೊಲೆ) ಅನುಸಾರ ಪ್ರಕರಣ ದಾಖಲಿಸಲಾಗಿದೆ.ಸಿಮ್ರನ್ ಪಬ್ಲಿಕ್ ಶಾಲೆ ಒಂದು ದಿನದ ಹಿಂದಷ್ಟೇ ಈ ವಾಹನ ಖರೀದಿಸಿತ್ತು.
ಈ ಶಾಲಾ ವಾಹನ1990ರಲ್ಲಿ ತಯಾರಾಗಿದ್ದು, ಎಲ್ಪಿಜಿ ಸಿಲಿಂಡರ್ಬಳಸಿ ಚಲಾಯಿಸಲಾಗುತ್ತಿತ್ತು. ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ವಾಹನ ಸುಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ, ಸೂಕ್ತ ದಾಖಲೆಯೂ ಹೊಂದಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸಾರಿಗೆ ಇಲಾಖೆಯ ಯಾವುದೇ ಅಧಿಕಾರಿ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಘನಶ್ಯಾಂ ಥೋರಿ ಹೇಳಿದ್ದಾರೆ.
ಘಟನೆ ಕುರಿತುಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ತನಿಖೆಗೆ ಆದೇಶಿಸಿದ್ದಾರೆ.ಮೃತ ಮಕ್ಕಳ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ.