ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ‘ಕೋವಿಡ್‌ 19’ ಕೈಮೀರುವ ಹಂತ ತಲುಪಿದೆ: ಶಾಸಕ ಎಚ್‌.ಕೆ. ಪಾಟೀಲ

‘ಮುಖ್ಯಮಂತ್ರಿ ತಕ್ಷಣ ಸರ್ವಪಕ್ಷ ಸಭೆ ಕರೆಯಬೇಕು’
Last Updated 4 ಜುಲೈ 2020, 9:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ 19 ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು’ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ವಿರೋಧ ಪಕ್ಷಗಳ ಸಲಹೆ ಪಡೆಯಬೇಕು’. ‘ಇಟಲಿಯ ಪರಿಸ್ಥಿತಿ ರಾಜ್ಯದಲ್ಲಿ ಬರುವ ಮುನ್ನ ಸಭೆ ಕರೆಯಬೇಕು. ಈಗಾಗಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದೆ. ಆ ಸಲಹೆಗಳನ್ನು ಪಾಲಿಸಿ, ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ಸೋಂಕು ದೃಢಪಟ್ಟವರಿಗೆ ಸರ್ಕಾರ ₹5 ಲಕ್ಷದ ವಿಮೆ ಮಾಡಿಸಬೇಕು. ಅದರಿಂದ ಪಾಸಿಟಿವ್ ಬಂದ ವ್ಯಕ್ತಿಗೆ ಉಪಯೋಗ ಆಗಲಿದೆ’. ‘ರಾಜ್ಯ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ, ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಮುಂದೆ ಜನರೇ ಬಾರುಕೋಲು ಹಿಡಿದುಕೊಂಡು ಬರುತ್ತಾರೆ. ಹುಷಾರ್’ ಎಂದೂ ಎಚ್ಚರಿಕೆ ನೀಡಿದರು.

‘ಆರೋಗ್ಯ ಇಲಾಖೆಯ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ. ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಸ್ಯಾನಿಟೈಸರ್ ಪೂರೈಕೆ ಮಾಡಲಾಗಿದೆ. ಹಲವು ಆಸ್ಪತ್ರೆಗಳು ಕಳಪೆ ಎಂದು ಈಗಾಗಲೇ ವಾಪಸ್‌ ನೀಡಿವೆ. ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ಬೇಡ’ ಎಂದರು.

‘ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಎಂದೂ ಹೇಳುತ್ತಿದ್ದಾರೆ. ನಾವು ಮೊದಲೇ ಸಾಕಷ್ಟು ಸಲಹೆಗಳನ್ನು ನೀಡಿದ್ದೆವು. ಹಾಸ್ಟೆಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದೆವು. ಆದರೆ, ಇಂದಿಗೂ ಏನೂ ಆಗಿಲ್ಲ’ ಎಂದರು.

‘ಇದೇ ಸ್ಥಿತಿ ಮುಂದುವರಿದರೆ ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ ಕೊರತೆಯಾಗಿದೆ. ಸರ್ಕಾರ ವಿಶೇಷ ನೇಮಕಾತಿ ಮೂಲಕ ವೈದ್ಯರು, ದಾದಿಯರು, ಪೌರ ಕಾರ್ಮಿಕರು ಹೀಗೆ ಅಗತ್ಯ ಸಿಬ್ಬಂದಿಯನ್ನು ತುರ್ತು ಆಗಿ ನೇಮಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ 19 ನಿಂದ ಜನರ ಜೀವ ಉಳಿಸಲು ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಜನರ ಸಮಸ್ಯೆಗಳ ಕಡೆಗೆ ಗಮನಹರಿಸುತ್ತಿಲ್ಲ. ತಪಾಸಣೆ ಮಾಡಿಸುವ ಬಗ್ಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ. ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದೇನೆ. 40 ಸಾವಿರಕ್ಕೂ ಹೆಚ್ಚು ಜನರ ತಪಾಸಣಾ ವರದಿ ಬರಬೇಕಿದೆ. ಇದಕ್ಕೆ ನಾವು ಏನು ಹೇಳಬೇಕು. ಯಾವ ಚಾಟಿಯಿಂದ ಸರ್ಕಾರಕ್ಕೆ ಬೀಸಬೇಕು. ನಾವು ಟೀಕೆ, ವಿಮರ್ಶೆ ಮಾಡುವುದು ಬೇರೆ. ಸರ್ಕಾರದ ಬೌದ್ಧಿಕ ದಿವಾಳಿತನದಿಂದ ಜನರಿಗೆ ಆಘಾತ ಉಂಟಾಗಿದೆ’ ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಅಗತ್ಯ ಸಂಖ್ಯೆಯ ಆಂಬುಲೆನ್ಸ್ ಖರೀದಿಗೆ ಸರ್ಕಾರಕ್ಕೆ ಏನು ಸಮಸ್ಯೆಯಿದೆ. ವಾರ್ಡ್‌ಗೆ ಎರಡು ಕೊಡುತ್ತೇವೆ ಎಂದು ಹೇಳುತ್ತಾರೆ. ಯಾವಾಗ ಎಂದು ಗೊತ್ತಿಲ್ಲ. ಇಟಲಿ ಪರಿಸ್ಥಿತಿ ಬರದಂತೆ ಗಮನಹರಿಸಿ. ಅಲ್ಲಿನ ಪರಿಸ್ಥಿತಿ ಬಂದರೆ ಅಂತ್ಯಕ್ರಿಯೆ ನಡೆಸಲು ಕೂಡಾ ಕಷ್ಟ ಆಗಲಿದೆ. ಮುತುವರ್ಜಿ ವಹಿಸಿ ಏನಾದರೂ ಮಾಡಿದ್ದೀರಾ. ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಪರಿಹಾರದ ಮಾತು ನಂತರ, ನಾಲ್ಕು ಕಿಟ್ ಹಂಚಿದರೆ ಸಾಲದು. ಪರಿಹಾರ ಸಾಮಗ್ರಿ ಪಕ್ಷದ ಕಾರ್ಯಕರ್ತರಿಗೆ ಕೊಟ್ಟು ಸಮಸ್ಯೆ ಸೃಷ್ಟಿ ಮಾಡಿದಿರಿ. ಕಾರ್ಮಿಕರ ಬದುಕು ಬೀದಿಗೆ ತಂದಿದ್ದೀರಿ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಚಿವರ ನಡುವೆ ಹೊಂದಾಣಿಕೆ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಂತ್ರಿಗಳ ನಡುವೆ ವೈಮನಸ್ಸು ಇದ್ದರೆ ಸರಿ ಮಾಡಿಕೊಳ್ಳಿ. ಈ ಬಗ್ಗೆ ನಾವು (ಕಾಂಗ್ರೆಸ್‌) ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ, ಸರ್ಕಾರ ಇನ್ನೂ ಗಮನಹರಿಸಿಲ್ಲ. ಸೋಂಕು ತಡೆಗೆ ಸರ್ಕಾರದ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಗಮನಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT