ರೋಣ(ಗದಗ ಜಿಲ್ಲೆ): ಬಸವ ತತ್ವಕ್ಕೆ ಮಾರುಹೋಗಿ, ಲಿಂಗದೀಕ್ಷೆ ಪಡೆದುಕೊಂಡಿದ್ದ ತಾಲ್ಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕ ದಿವಾನ್ ಶರೀಫ್ ಮುಲ್ಲಾ ಬುಧವಾರ ಇಲ್ಲಿ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿಪಟ್ಟಕ್ಕೇರಿದರು.
ಈ ಸಂದರ್ಭದಲ್ಲಿಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ಹಸಮಣೆ ಏರಿದರು.
ಅಸೂಟಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ, ಮಠಕ್ಕೆ ಸೇರಿದ ಶಾಂತಿಧಾಮದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರಶ್ರೀಗಳು ಪಟ್ಟಾಧಿಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು.
ಇಲ್ಲಿ ಎರಡು ಎಕರೆ ಜಾಗದಲ್ಲಿ ಕೋರಣೇಶ್ವರ ಶಾಖಾ ಮಠ ‘ಶಾಂತಿಧಾಮ’ ನಿರ್ಮಾಣಗೊಳ್ಳುತ್ತಿದ್ದು, ದಿವಾನ್ ಶರೀಫ್ ಸ್ವಾಮೀಜಿ ಅವರು ಈ ಪೀಠದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.