ಮಂಗಳೂರು:ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಶುಕ್ರವಾರ ಮಧ್ಯ ರಾತ್ರಿ 12 ಗಂಟೆಗೆ 11.6 ಮೀಟರ್ ತಲುಪಿದ್ದು, ದಾಖಲೆ ನಿರ್ಮಾಣವಾಗಿದೆ. ಇದರೊಂದಿಗೆ ನದಿ ತೀರದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಿದೆ.
ಮಧ್ಯರಾತ್ರಿ ನದಿಯ ನೀರಿನಮಟ್ಟ 11.6 ಮೀಟರ್ ತಲುಪಿತ್ತು. ಶನಿವಾರ ಬೆಳಿಗ್ಗೆ ಹೊತ್ತಿಗೆ 11.4 ಮೀಟರ್ ಗೆ ಇಳಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
1974ರ ಜುಲೈ 25ರಂದು ನೇತ್ರಾವತಿ ನದಿಯ ನೀರಿನ ಮಟ್ಟ 11.6 ಮೀಟರ್ ತಲುಪಿತ್ತು. ಆಗ ಇಡೀ ದಿನ ನೀರಿನ ಮಟ್ಟ ಹಾಗೆಯೇ ಇತ್ತು. ಅದು ಈವರೆಗಿನ ದಾಖಲೆಯಾಗಿತ್ತು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 31.8 ಮೀಟರ್ ಇದೆ. ತುಂಬೆ ಅಣೆಕಟ್ಟೆ ಸ್ಥಳದಲ್ಲಿ 9.5 ಮೀಟರ್ ತಲುಪಿದ್ದು, ಮಂಗಳೂರು ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಬಂಟ್ವಾಳ ತಾಲ್ಲೂಕಿನಲ್ಲಿ 200 ಮತ್ತು ಬೆಳ್ತಂಗಡಿ ತಾಲ್ಲೂಕಿನಲ್ಲಿ 300 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.