ರಾಮನಗರ: ಶಾಸಕ ಆನಂದ ಸಿಂಗ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ, ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಇಲ್ಲಿನ ಸಿಜೆಎಂ ನ್ಯಾಯಾಲಯ ಗುರುವಾರ ಆರೋಪಿಯನ್ನು ಮಾ.6ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿತು. ಮಧ್ಯಾಹ್ನ 4ಗಂಟೆ ಸುಮಾರಿಗೆ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ತನಗೆ ಹರ್ನಿಯ ಸಮಸ್ಯೆ ಇರುವುದಾಗಿ ಗಣೇಶ ನ್ಯಾಯಾಧೀಶರಿಗೆ ತಿಳಿಸಿದರು.
‘ಆರೋಪಿಗೆ 2016ರಿಂದಲೇ ಉಸಿರಾಟದ ಸಮಸ್ಯೆ ಇದೆ. ಹೀಗಾಗಿ ತುರ್ತು ಚಿಕಿತ್ಸೆ ಸೌಲಭ್ಯ ಇರುವ ಜೈಲಿಗೆ ಅವರನ್ನು ಒಪ್ಪಿಸಬೇಕು’ ಎಂದು ಗಣೇಶ ಪರ ವಕೀಲ ಡೆರಿಕ್ ಅನಿಲ್ ಮನವಿ ಮಾಡಿದರು.
‘ಗಣೇಶ ಅವರಕಂಪ್ಲಿ ಕ್ಷೇತ್ರದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಅವರನ್ನು ಕಾಣಲು ಕ್ಷೇತ್ರದ ಮತದಾರರು, ಸರ್ಕಾರಿ ಅಧಿಕಾರಿಗಳೂ ಬರುತ್ತಿರುತ್ತಾರೆ. ಎಲ್ಲರ ಓಡಾಟಕ್ಕೆ ಅನುಕೂಲ ಆಗುವಂತೆ ಪರಪ್ಪನ ಅಗ್ರಹಾರ ಇಲ್ಲವೇ ಸೂಕ್ತ ಬಂಧಿಖಾನೆಯಲ್ಲಿ ವ್ಯವಸ್ಥೆ ಮಾಡಿಕೊಡಬೇಕು’ ಎಂದು ವಕೀಲ ಅನಿಲ್ ಕೋರಿದರು.