ರಾಮನಗರ: ಲಾಕ್ಡೌನ್ನಿಂದ ಆಹಾರವಿಲ್ಲದೇ ಪರಿತಪಿಸುತ್ತಿರುವಕೋತಿಗಳ ನೆರವಿಗೆ ಧಾವಿಸಿದ್ದಾರೆ ರಾಮನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್.
ಲೋಡುಗಟ್ಟಲೆ ಬಾಳೆಹಣ್ಣು, ಬನ್, ಕಡಲೆಕಾಯಿ ಸೇರಿದಂತೆ ಕೋತಿಗಳು ತಿನ್ನಬಲ್ಲ ತಿನಿಸುಗಳನ್ನು ಸಂಗ್ರಹಿಸಿ, ಅವುಗಳನ್ನು ಜಿಲ್ಲೆಯ ಕೆಲ ಪ್ರಸಿದ್ಧ ದೇಗುಲ, ಪ್ರವಾಸಿ ತಾಣಗಳ ಬಳಿಗೆ ಕಾರ್ಯಕರ್ತರ ತಂಡದೊಂದಿಗೆ ಒಯ್ಯುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ಕೋತಿಗಳ ಹಸಿವು ನೀಗಿಸುತ್ತಿದ್ದಾರೆ.
ರುದ್ರೇಶ್ ಅವರು ಕೋತಿಗಳಿಗೆ ಆಹಾರ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ತಾಣದಲ್ಲೂ ವೈರಲ್ ಆಗಿವೆ. ಸ್ನೇಹದಿಂದ ವರ್ತಿಸುವ ರುದ್ರೇಶ್ ಅವರ ತಂಡದ ಬಳಿ ಕೋತಿಗಳೂ ಸಲುಗೆಯಿಂದಲೇ ವರ್ತಿಸುತ್ತವೆ. ನಿರ್ಭೀತಿಯಿಂದ ಆಹಾರ ಕೊಂಡು ಹೋಗುತ್ತವೆ.
ಆಹಾರ ನೀಡುವ ಆಲೋಚನೆ ಹೊಳೆದದ್ದು ಹೇಗೆ?
‘ಲಾಕ್ ಡೌನ್ ಜಾರಿಯಾದ ನಾಲ್ಕು ದಿನಗಳ ನಂತರ ರಾಮನಗರದ ಪ್ರಖ್ಯಾತ ದೇಗುಲವೊಂದಕ್ಕೆ ನಾನು ಹೋಗಿದ್ದೆ. ಅಲ್ಲಿ ಕೋತಿಗಳು ಆಹಾರವಿಲ್ಲದೇ ನಿತ್ರಾಣವಾಗಿ ರಸ್ತೆ ಮಧ್ಯೆ ಕುಳಿತಿದ್ದವು. ನಾನು ಕಾರು ನಿಲ್ಲಿಸಿ ಹೊರಬಂದೆ. ಕೋತಿಗಳು ಒಂದೇ ಬಾರಿಗೆ ನನ್ನ ಕಾರಿಗೆ ಲಗ್ಗೆ ಹಾಕಿ ತಿಂಡಿ, ನೀರು ತೆಗೆದುಕೊಂಡು ಹೋದವು. ಭಕ್ತರು ಬಾರದೇ ಇರುವುದರಿಂದ ಕೋತಿಗಳಿಗೆ ಆಹಾರವೂ ಸಿಗುತ್ತಿಲ್ಲ ಎಂಬದು ನನಗೆ ಆಗ ಅರಿವಾಯಿತು,’ ಎಂದು ರುದ್ರೇಶ್ ಹೇಳಿದ್ದಾರೆ.
ಜಿಲ್ಲೆಯ ಸಾವನದುರ್ಗ, ಕೆಂಗಲ್ಲು ದೇಗುಲ, ರೇವಣಸಿದ್ದೇಶ್ವರ ಬೆಟ್ಟ, ಮುತ್ತತ್ತಿ, ಸಂಗಮ, ಶಿವಗಂಗೆಗೆ ದಿನ ಬಿಟ್ಟು ದಿನ ಹೋಗಿ ಕೋತಿಗಳಿಗೆ ಆಹಾರ ನೀಡಲಾಗುತ್ತಿದೆ ಎಂದು ರುದ್ರೇಶ್ ತಿಳಿಸಿದ್ದಾರೆ. ಈ ಕೆಲಸಕ್ಕಾಗಿ ರುದ್ರೇಶ್ ₹25 ಸಾವಿರವನ್ನು ಮೀಸಲಿಟ್ಟಿದ್ದಾರೆ. ಅವರ ಈ ಕಾರ್ಯಕ್ಕೆ ಕಾರ್ಯಕರ್ತರೂ ಕೈಜೋಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.