ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ನಗರ ಸ್ಥಳೀಯ ಸಂಸ್ಥೆ ಅಧಿಕಾರಕ್ಕಾಗಿ ಚಾತಕ ಪಕ್ಷಿಗಳಾದ ಸದಸ್ಯರು!

21 ತಿಂಗಳಾದರೂ ದೊರೆಯದ ಅವಕಾಶ
Last Updated 30 ಜೂನ್ 2020, 19:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಗಿದು ಬರೋಬ್ಬರಿ 21 ತಿಂಗಳಾಗುತ್ತಿದೆ. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದೆ ಜನಪ್ರತಿನಿಧಿಗಳಿಗೆ ಅಧಿಕಾರದ ‘ಭಾಗ್ಯ’ ಸಿಕ್ಕಿಲ್ಲ.

ರಾಜ್ಯದ 102 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆ.31ರಂದು ಚುನಾವಣೆ ನಡೆದಿತ್ತು. ಸೆ. 3ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಇದರಲ್ಲಿ ಜಿಲ್ಲೆಯ ಸಂಸ್ಥೆಗಳೂ ಸೇರಿವೆ. ಅವುಗಳಿಗೆ ಆಡಳಿತಾಧಿಕಾರಿಗನ್ನು ನೇಮಿಸಲಾಗಿದ್ದು, ಜನಪ್ರತಿನಿಧಿಗಳಿದ್ದರೂ ಇಲ್ಲದಂತಹ ಸ್ಥಿತಿ ಇದೆ.

‘ಅಧ್ಯಕ್ಷ–ಉ‍ಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ 2018ರ ಸೆ.3ರಂದು ಪಟ್ಟಿ ಪ್ರಕಟಿಸಲಾಗಿತ್ತು. ಈ ಪಟ್ಟಿಯಲ್ಲಿ ರೊಟೇಷನ್ ಪಾಲಿಸಿಲ್ಲ. ಹೀಗಾಗಿ, ಬಹುತೇಕ ಕಡೆ ಮೀಸಲು ಪುನರಾವರ್ತನೆಯಾಗಿದೆ. ಆದ್ದರಿಂದ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಆಧರಿಸಿ, ಹೈಕೋರ್ಟ್‌ 2019ರ ಜನವರಿಯಲ್ಲಿ ಮಧ್ಯಂತರ ತಡೆ ನೀಡಿದೆ. ಅದು ತೆರವಾಗಿಲ್ಲ. ಈ ಪರಿಣಾಮ ಸ್ಥಳೀಯ ಆಡಳಿತಕ್ಕೆ ‘ಗ್ರಹಣ’ ಹಿಡಿದಿದೆ.

ಅತಿ ಹೆಚ್ಚು ಕಡೆಗಳಲ್ಲಿ ಬಿಜೆಪಿಯವರು ಆಯ್ಕೆಯಾಗಿದ್ದು, ಆಕ್ಷಾಂಕ್ಷಿಗಳು ಸರ್ಕಾರದ ಮೇಲೆ ಒತ್ತಡ ತಂದರೂ ಪ್ರಯೋಜನವಾಗಿಲ್ಲ. ಗದ್ದುಗೆ ಏರುವ ಅವರ ಕನಸು ಕನಸಾಗಿಯೇ ಉಳಿದಿದೆ.

ಹಕ್ಕು ಸಿಕ್ಕಿಲ್ಲ:‘ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯದೆ ಅಧಿಕಾರ ದೊರೆಯದೆ ನಮ್ಮ ಹಕ್ಕನ್ನು ಕಸಿದುಕೊಂಡಂತಾಗಿದೆ’ ಎನ್ನುವುದು ಜನಪ್ರತಿನಿಧಿಗಳ ಕೊರಗಾಗಿದೆ.

‘ಅಭಿವೃದ್ಧಿ ಮಾಡಬೇಕು, ಜನರಿಗೆ ನೆರವಾಗಬೇಕು ಎಂದು ಸ್ಪರ್ಧಿಸಿದ್ದೆವು. ಜನರಿಂದ ಬೆಂಬಲ ಸಿಕ್ಕಿ ಆಯ್ಕೆಯೂ ಆಗಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ವಾರ್ಡ್‌ಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ವಿಚಾರದಲ್ಲಿ ಹೆಚ್ಚಿನ ಬಲ ಇಲ್ಲದಂತಾಗಿದೆ. ಅಧ್ಯಕ್ಷರು–ಉಪಾಧ್ಯಕ್ಷರು ಇಲ್ಲದಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ತೊಡಕಾಗಿದೆ. ಜನಪ್ರತಿನಿಧಿಗಳಾದರೂ ಗೌರವ ಇಲ್ಲದಂತಾಗಿದೆ. ಹೆಸರಿಗಷ್ಟೇ ಸದಸ್ಯರಾಗಿದ್ದೇವೆ’ ಎಂದು ಚಿಕ್ಕೋಡಿ ಪುರಸಭೆ ಸದಸ್ಯ ಜಗದೀಶ ಕವಟಗಿಮಠ ಹೇಳಿದರು.

ಬಿಜೆಪಿ ಸರ್ಕಾರ ಬರುತ್ತಿದ್ದಂತೆಯೇ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆಗೆ ಅವಕಾಶ ಕಲ್ಪಿಸುವಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಿಜೆಪಿ ಸದಸ್ಯರು ಮನವಿ ಸಲ್ಲಿಸಿದ್ದರು. ತೊಡಕು ನಿವಾರಿಸುವಂತೆ ಮನವಿ ಮಾಡಿದ್ದರು.

ಬಿಜೆಪಿಯವರು ಹೆಚ್ಚು:ಜಿಲ್ಲೆಯ 2 ನಗರಸಭೆ, 2 ಪಟ್ಟಣ ಪಂಚಾಯಿತಿ ಹಾಗೂ 10 ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 343 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 3ನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ 104, ಪಕ್ಷೇತರರು 144, ಕಾಂಗ್ರೆಸ್‌ 85 ಹಾಗೂ ಜೆಡಿಎಸ್ 10 ವಾರ್ಡ್‌ಗಳಲ್ಲಿ ಗೆದ್ದಿದೆ.

ಈ 14 ಸ್ಥಳೀಯ ಸಂಸ್ಥೆಗಳಲ್ಲಿ ಹಿಂದೆ, ಕಾಂಗ್ರೆಸ್‌–6, ಕಾಂಗ್ರೆಸ್‌–ಎಂಇಎಸ್‌ ಬೆಂಬಲಿತರು–1, ಬಿಜೆಪಿ–5, ಪಕ್ಷೇತರರು–2 ಸಂಸ್ಥೆಗಳಲ್ಲಿ ಅಧಿಕಾರ ನಡೆಸಿದ್ದರು. ಗೋಕಾಕ ಮತ್ತು ನಿಪ್ಪಾಣಿ ನಗರಸಭೆಯಲ್ಲಿ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆದಿರಲಿಲ್ಲ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಅಧಿಕಾರ ಪಡೆದಿದ್ದರು. ನಿಪ್ಪಾಣಿಯಲ್ಲಿ ಪಕ್ಷೇತರರು, ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಪಕ್ಷವು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಂಬಲಿತ ಸದಸ್ಯರ ನೆರವಿನೊಂದಿಗೆ ಅಧಿಕಾರ ನಡೆಸಿತ್ತು.

‘ನಾವು ಆಯ್ಕೆಯಾಗಿಯೂ ಪ್ರಯೋಜನ ಇಲ್ಲದಂತಾಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇಲ್ಲದಿರುವುದರಿಂದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಅನುದಾನ ಸಿಕ್ಕಿಲ್ಲ. ಇದರಿಂದ ಜನರಿಗೂ ಬೇಸರವಾಗಿದೆ’ ಎಂದು ಬೈಲಹೊಂಗಲ ಪುರಸಭೆ ಬಿಜೆಪಿ ಸದಸ್ಯ ಸುಧೀರ ವಾಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT