ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌ ಮೊರೆಹೋದ ಮಂಡ್ಯ ಜಿಲ್ಲೆಯ ರೈತ ಮಹಿಳೆಯರು

ಕುಣಿಯುತ್ತಿದೆ ಕುರುಡು ಕಾಂಚಾಣ, ಕಹಿಯಾದ ಸಕ್ಕರೆ ನಾಡಿನ ರೈತರ ಬದುಕು
Last Updated 2 ಮೇ 2019, 11:10 IST
ಅಕ್ಷರ ಗಾತ್ರ

ಮಂಡ್ಯ: ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಚುನಾವಣಾ ಕಣದಲ್ಲಿ ಕೋಟಿ ಕೋಟಿ ಹಣ ಹರಿದಾಡುತ್ತಿದೆ. ಆದರೆ, ಕುಟುಂಬ ಪೋಷಣೆಗೆ ಪರಿತಪಿಸುತ್ತಿರುವ ಇಲ್ಲಿನ ರೈತ ಮಹಿಳೆಯರು ಏಳೆಂಟು ಸಾವಿರ ರೂಪಾಯಿ ಸಂಬಳಕ್ಕೆ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 7.15ಕ್ಕೆ ನಗರ ರೈಲು ನಿಲ್ದಾಣಕ್ಕೆ ಹೋದರೆ ಕೆಲಸಕ್ಕೆ ತೆರಳುವ ಧಾವಂತದಲ್ಲಿರುವ ಮಹಿಳೆಯರು ಕಾಣ ಸಿಗುತ್ತಾರೆ. ಅಲ್ಲೇ ಕುಳಿತು ಬಾಕ್ಸ್‌ನಲ್ಲಿ ತಂದಿರುವ ತಿಂಡಿ ತಿನ್ನುತ್ತಾರೆ. ಮನೆ, ಮಕ್ಕಳ ಜವಾಬ್ದಾರಿ ನಿರ್ವಹಿಸಿ ಬರುವ ಅವರಿಗೆ ತಿಂಡಿ ತಿನ್ನಲೂ ಸಮಯವಿಲ್ಲ. 7.30ಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು ಹತ್ತಿ ಬೆಂಗಳೂರು ತಲುಪುತ್ತಾರೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೂ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ಸಂಜೆ 6.15 ಅದೇ ಚಾಮುಂಡಿ ಎಕ್ಸ್‌ಪ್ರೆಸ್‌ ಹತ್ತಿ ಮಂಡ್ಯಕ್ಕೆ ಮರಳುತ್ತಾರೆ. ಅಕ್ಕಪಕ್ಕದ ಹಳ್ಳಿ ತಲುಪಿ ಮನೆ ಸೇರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿರುತ್ತದೆ.

ಪ್ರತಿದಿನ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಮಹಿಳೆಯರು ಬೆಂಗಳೂರಿನ ಗಾರ್ಮೆಂಟ್ಸ್‌ಗೆ ಹೋಗಿ ಬರುತ್ತಾರೆ. ಜಿಲ್ಲೆಯಲ್ಲಿರುವ ಆರು ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಹಿಳೆಯರು ನೌಕರಿ ಮಾಡುತ್ತಿದ್ದಾರೆ. ಮದ್ದೂರು ತಾಲ್ಲೂಕು ಗೆಜ್ಜಲಗೆರೆಯ ಶಾಹಿ ಎಕ್ಸ್‌ಪೋರ್ಟ್ಸ್‌ ಒಂದರಲ್ಲೇ 5 ಸಾವಿರ ರೈತ ಮಹಿಳೆಯರು ಕೆಲಸಕ್ಕೆ ಸೇರಿದ್ದಾರೆ. ಶ್ರೀರಂಗಪಟ್ಟಣ, ಮಳವಳ್ಳಿಯಲ್ಲಿ ತಲಾ ಒಂದೊಂದು ಕಾರ್ಖಾನೆಗಳಿವೆ. ಕೆಆರ್‌ಎಸ್‌ ಜಲಾಶಯ ತುಂಬಿದ್ದರೂ ರೈತರು ಕೃಷಿ ತ್ಯಜಿಸಿ ಅನ್ಯ ಉದ್ಯೋಗಕ್ಕೆ ತೆರಳುತ್ತಿರುವುದು ಆತಂಕ ಸೃಷ್ಟಿಸಿದೆ.

‘ಒಂದು ಕಾಲದಲ್ಲಿ ಮಂಡ್ಯ ರೈತರ ಮನೆಯಲ್ಲಿ ಹಣ ನೀರಿನಂತೆ ಹರಿಯುತ್ತಿತ್ತು. ವೈಭವದ ಮದುವೆ, ಬೀಗರೂಟಗಳು ಸಾಮಾನ್ಯ ಎಂಬತ್ತಿದ್ದವು. ಈಗ ಸಕ್ಕರೆ ಕಾರ್ಖಾನೆಗಳು ನಿಂತುಹೋಗಿದ್ದು, ಕೃಷಿ ನೆಲಕಚ್ಚಿದೆ. ಜೀವನೋಪಾಯಕ್ಕೆ ಕೆಲವರು ಹೈನುಗಾರಿಕೆ ನಂಬಿಕೊಂಡಿದ್ದರೆ, ಹಲವರು ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಕಾರ್ಖಾನೆ ಆರಂಭವಾಗಿಲ್ಲ. ವಿದ್ಯಾವಂತ ಯುವಕರಿಗೆ ಕೆಲಸ ಕೊಡುವ ದೊಡ್ಡ ಕೈಗಾರಿಕೆಗಳೂ ಇಲ್ಲ. ರೈತ ಮಹಿಳೆಯರಿಂದ ದುಡಿಸಿಕೊಳ್ಳುವ ಸಿದ್ಧ ಉಡುಪು ಕಾರ್ಖಾನೆ ಮಾತ್ರ ಸ್ಥಾಪನೆಯಾಗುತ್ತಿವೆ. ಚುನಾವಣೆ ಸಂದರ್ಭದಲ್ಲಿ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದು ರೈತ ಬಿ.ಕೆ.ಆನಂದ್‌ ಹೇಳಿದರು.

ತಗ್ಗಿದ ಕೃಷಿ ಇಡುವಳಿ: ಜಿಲ್ಲೆಯ ಫಲವತ್ತಾದ, ನೀರಾವರಿ ಸೌಲಭ್ಯದ ಕೃಷಿ ಭೂಮಿ ನೈಸ್‌ ರಸ್ತೆ, ದಶಪಥ ಕಾಮಗಾರಿಗಳಿಗೆ ಬಿಕರಿಯಾಗಿದೆ. ಜೊತೆಗೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಕೃಷಿ ಭೂಮಿ ರಿಯಲ್‌ ಎಸ್ಟೇಟ್‌ ದಂಧೆಗೆ ಬಳಕೆಯಾಗಿದೆ. ಹೀಗಾಗಿ, ದಿನೇ ದಿನೇ ರೈತರ ಕೃಷಿ ಹಿಡುವಳಿ ಕುಗ್ಗುತ್ತಿದೆ. ಕೃಷಿ ಇಲಾಖೆ ಮಾಹಿತಿಯಂತೆ ಪ್ರತಿ ರೈತನ ಭೂ ಹಿಡುವಳಿ 20–60 ಗುಂಟೆ ಮಾತ್ರ ಇದೆ. ಹತ್ತಾರು ಎಕರೆ ಭೂಮಿ ಹೊಂದಿದ ಜಮೀನ್ದಾರ ಮಂಡ್ಯ ಜಿಲ್ಲೆಯಲ್ಲಿ ಕಾಣಸಿಗುವುದಿಲ್ಲ.

‘ನೈಸ್‌ ರಸ್ತೆ ಹಾಗೂ ದಶಪಥ ಕಾಮಗಾರಿಗೆ ಜಿಲ್ಲಾ ವ್ಯಾಪ್ತಿಯ 8 ಸಾವಿರ ಎಕರೆ ಕೃಷಿ ಭೂಮಿ ಮಾರಾಟವಾಗಿದೆ. ಅನ್ನ ಬೆಳೆಯುವ ಭೂಮಿಯಲ್ಲಿ ಹೋಟೆಲ್‌, ಡಾಭಾಗಳು ತಲೆ ಎತ್ತಿವೆ. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದಾಗಿ ರೈತರ ಬೆಳೆಗೆ ಬೆಲೆ, ಮಾರುಕಟ್ಟೆ ಸಿಗುತ್ತಿಲ್ಲ. ರೈತರಿಗೆ ಅಭದ್ರತೆ ಕಾಡುತ್ತಿದೆ. ರೈತರ ಸಮಸ್ಯೆಗೆ ಪರಿಹಾರ ನೀಡುವ ಸ್ವಾಮಿನಾಥನ್‌ ವರದಿ ಜಾರಿಗೆ ಯಾರೂ ಚಿಂತನೆ ಮಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲೂ ಈ ವಿಚಾರ ಚರ್ಚೆಗೆ ಬಾರದಿರುವುದು ದುರದೃಷ್ಟಕರ’ ಎಂದು ರೈತ ಮುಖಂಡ ಕೆ.ಬೋರಯ್ಯ ಹೇಳಿದರು.

ಇನ್ನಷ್ಟು...

ಒಮ್ಮೆ ಮೈಸೂರಿನಿಂದ ಬೆಂಗ­ಳೂರಿಗೆ ಬರಲು ಮುಂಜಾನೆ ಆರು ಗಂಟೆಯ ರೈಲಿನಲ್ಲಿ ಹೊರಟೆ. ಲೇಡೀಸ್ ಕಂಪಾ­ರ್ಟ್‌­ಮೆಂಟ್. ಅದರಲ್ಲಿದ್ದ ಬಹುತೇಕ ಹೆಣ್ಣು­ಮಕ್ಕಳು ಗಾರ್ಮೆಂಟ್ಸ್ನಲ್ಲಿ ದುಡಿಮೆಗೆ ಹೋಗು­ವವರು. ಬೆಂಗಳೂರು ತಲು­ಪುವ ಹೊತ್ತಿಗೆ ಆ ಬೋಗಿ ಕಿಕ್ಕಿರಿದು ಹೋಗಿತ್ತು. ಯಾರೋ ಯಾರಿಗೋ ಜಡೆ ಹಾಕುತ್ತಿದ್ದರು. ಮತ್ತೊಬ್ಬರು ಸೀರೆಯ ಸೆರಗನ್ನುಓರಣ ಮಾಡಿ ಪಿನ್ ಹಾಕು­ತ್ತಿದ್ದರು. ರೈಲಿನ ಸದ್ದಿನ ಹಿಮ್ಮೇಳ­ದಲ್ಲಿ ಅವರ ನೋವು–ನಲಿವುಗಳು ಪಿಸು­ಗುಟ್ಟಿದ್ದವು.

ಬೆಂಗಳೂರಿನಲ್ಲೂ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳಿವೆ ಎಂಬುದನ್ನು ಸರ್ಕಾರವಷ್ಟೇ ಏಕೆ ಮಾಧ್ಯಮಗಳೂ ಮರೆತುಬಿಟ್ಟಿವೆ.ಆ ಹೊತ್ತಿನಲ್ಲಿ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿ ಬೀಳುವಂತೆ ಗಾರ್ಮೆಂಟ್ ಉದ್ದಿಮೆಯಲ್ಲಿ ದುಡಿಯುತ್ತಿದ್ದ 10,000ಕ್ಕೂ ಹೆಚ್ಚು ಮಹಿಳೆಯರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬೀದಿಗಿಳಿದಿದ್ದರು.ಉದಾರೀಕರಣೋತ್ತರ ಕಾಲಘಟ್ಟದಲ್ಲಿ ಬೆಂಗಳೂರು ಕಂಡ ಮೊದಲ ಬಹುದೊಡ್ಡ ಕಾರ್ಮಿಕರ ಪ್ರತಿಭಟನೆ ಇದುವೇ ಇರಬಹುದೇನೋ. ಆಗಲೂ ಇದಕ್ಕೆ ನಾಯಕರಿರಲಿಲ್ಲ. ಆಗಲೂ ಪ್ರತಿಭಟನೆಗೆ ಕಾರಣವಾಗಿದ್ದು ಭವಿಷ್ಯ ನಿಧಿ ಹಣ ಹಿಂದೆಗೆದುಕೊಳ್ಳುವ ವಿಚಾರವೇ. ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಲಾಠಿ ಪ್ರಯೋಗಿಸಿ ಪ್ರತಿಭಟನೆ ಹಿಂಸಾತ್ಮಕವಾಗುವಂತೆ ಮಾಡಿದರು.

‘2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ವೃದ್ಧಾಪ್ಯದಲ್ಲಿ ಸಾಮಾಜಿಕ ಹಾಗೂ ವರಮಾನ ಭದ್ರತೆ ಯೋಜನೆಯನ್ನು (ಒಎಎಸ್‌ಐಎಸ್‌) ಜಾರಿಗೆ ತಂದಿತ್ತು. ಆ ಮೂಲಕ ಭವಿಷ್ಯದ ಹೆಸರಿನಲ್ಲಿ ವರ್ತಮಾನದ ಬದುಕನ್ನು ಕಸಿದುಕೊಳ್ಳುವ ಯತ್ನ ನಡೆಸಿತ್ತು. ಅದರ ವಿರುದ್ಧ ಪೀಣ್ಯದ ಗಾರ್ಮೆಂಟ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರೇ ಬೀದಿಗಿಳಿದಿದ್ದರು’ ಎಂದು ಚಿಂತಕ ಶಿವಸುಂದರ್‌ ನೆನಪಿಸಿಕೊಳ್ಳುತ್ತಾರೆ.

ಕೇವಲ ನೂರರ ಸಂಖ್ಯೆಯಲ್ಲಿ ದರ್ಜಿಗಳನ್ನು ಇಟ್ಟುಕೊಂಡು ಶರ್ಟ್‌–ಪ್ಯಾಂಟ್‌ ತಯಾರಿಸುತ್ತಿದ್ದ ಮೇಸರ್ಸ್‌ ಬೆಂಗಳೂರು ಡ್ರೆಸ್‌ ಮೇಕಿಂಗ್‌ ಕಂಪೆನಿಯಿಂದ ಹಿಡಿದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಸಾವಿರಾರು ಕಾರ್ಖಾನೆಗಳವರೆಗೆ ದೊಡ್ಡ ಗಾತ್ರದಲ್ಲಿ ಬೆಳೆದು ನಿಂತಿದೆಗಾರ್ಮೆಂಟ್‌ ಉದ್ಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT