ಬೆಂಗಳೂರು: ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಒತ್ತಾಯಿಸಿದರು.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು.
ಸಿಎಂ ಕಾರ್ಗೆ ಏನು ಮಾಡಿಲ್ಲ ಅಥವಾ ಸಿಎಂಗೆ ಅವಮಾನ ಮಾಡಿಲ್ಲ. ಕುಮಾರಸ್ವಾಮಿ ನೀಡಿದ್ದ ಅನುಧಾನ ವಿತ್ ಡ್ರಾ ಮಾಡಿ ಸಿಎಂ ರಾಜಕೀಯ ದ್ವೇಷ ಸಾಧಿಸಿದ್ರು ಈ ವಿಚಾರದ ಬಗ್ಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಆ ದಿನವೇ ನಮ್ಮ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿದರು.
ಅಷ್ಟೇ ಅಲ್ಲದೆ ಇಬ್ಬರು ಕಾನ್ಸ್ ಟೇಬಲ್ ಹಾಗೂ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕಾರ್ಯಕರ್ತನನ್ನು ಹೊರಗೆ ತಂದು ಇಚ್ಚೆ ಬಂದಂತೆ ಹೊಡೆದಿದ್ದಾರೆ. ಇದು ಯಾದಗಿರಿಯಲ್ಲಿ ನಡೆದಿರೋದು ಹೇಯಕೃತ್ಯ. ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಪತ್ರ ಬರೆದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತನ ಬಾಯಿಗೆ ರಿವಾಲ್ವರ್ ಇಟ್ಟಿದ್ದಾರೆ. ಸ್ಟೇಶನ್ಗೆ ಕರೆದುಕೊಂಡು ಹೋಗಿ ಅಮಾನುಷವಾಗಿ ಹೊಡೆದಿದ್ದಾರೆ. ಬೆಲ್ಟ್ ನಿಂದ ಹೊಡೆದು ಹಿಂಸೆ ಕೊಟ್ಟಿದ್ದಾರೆ. ನನ್ನ ಮನಸ್ಸಿನ ಭಾವನೆ, ನೋವು ಅರ್ಥ ಮಾಡಿಕೊಂಡು ಅಮಾನತಿನಲ್ಲಿಡಬೇಕು. ಪೊಲೀಸ್ ಸಬ್ಇನ್ಸ್ಪೆಕ್ಟರ್ನನ್ನು ಅಮಾನತಿನಲ್ಲಿಡಲೇಬೇಕು ಅಂತ ಒತ್ತಾಯಿಸುತ್ತೇನೆ ಎಂದರು.
ಕುಮಾರಸ್ವಾಮಿ ವಾಸ್ತವಾಂಶ ಹೇಳಿದ್ದಾರೆ. ಸರ್ಕಾರ ಬೀಳುವುದಕ್ಕೆ ಏನಾಯ್ತು ಎಂದು ಗೊತ್ತು. ಬಿಜೆಪಿ ಜೊತೆ ಹೋದವರ ಬಗ್ಗೆಯೂ ಗೊತ್ತು. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು ಅವರು ಹಾಗೆಯೇ ಪ್ರಚಾರ ಮಾಡಿದ್ದರು.
ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಗೆಲ್ಲಬೇಕಾಯ್ತು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದರು. ಆ ಕಾರಣದಿಂದ ಸರ್ಕಾರ ರಚನೆಗೆ ಒಪ್ಪಿದ್ದರು. ಅವರೇ ಮನೆಗೆ ಬಂದು ಮನವಿ ಮಾಡಿದರು. ಕೊನೆಗೆ ನಮಗೆ ಶಿಕ್ಷೆ ನೀಡಿದರು.
ಧರ್ಮಸ್ಥಳದಲ್ಲಿ ಹೋಗಿ ಯಾರ್ಯಾರ ಜೊತೆ ಮಾತನಾಡಿದ್ರು ಎಂಬುದೂ ಗೊತ್ತು.ಅಲ್ಲಿಂದ ಬಂದ ನಂತರ ಏನ್ ಮಾಡಿದ್ರು ಅದು ಗೊತ್ತು. ಮುಂದೇನಾಯಿತು ರಾಜ್ಯದ ಜನತೆಗೂ ಗೊತ್ತು ಎಂದರು.
ನಾನು ರೈತನ ಮಗ. ಹಾಲು ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಈ ಬಗ್ಗೆ ನಾನು ಹೋರಾಟ ಮಾಡ್ತೀನಿ. ರೇವಣ್ಣ ಕೆಎಂಎಫ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಡಿದ್ದಾರೆ. ನಷ್ಟದಲ್ಲಿದ್ದ ಸಂಸ್ಥೆಯನ್ನ 4 ಸಾವಿರ ಕೋಟಿ ಲಾಭಕ್ಕೆ ರೇವಣ್ಣ ತಂದರು. ಸೂಪರ್ ಮಾರ್ಕೆಟ್ ಮಾಡಿದರು. ರೇವಣ್ಣರನ್ನ ಮಿಲ್ಕ್ ಮ್ಯಾನ್ ಎಂದು ಕರೆದರು.
ಹಾಲನ್ನು ಈಗ ಆಮದು ಮಾಡಿಕೊಳ್ತೀನಿ ಅಂದ್ರೆ ರೈತರಿಗೆ ತೊಂದರೆ ಆಗುತ್ತದೆ. ಇದರ ವಿರುದ್ದ ನಾನು ತೀವ್ರ ಹೋರಾಟ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಿಂದ ಕಾಂಗ್ರೆಸ್, ಪ್ರತಿಪಕ್ಷ ಗಳನ್ನು ದಮನ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದಾಗಲೆಲ್ಲಾ ಜನ ತಮ್ಮ ಶಕ್ತಿ ತೋರಿಸುತ್ತಾರೆ ಎಂಬುದಕ್ಕೆ ನಿನ್ನೆ ಪ್ರಕಟವಾದ ಫಲಿತಾಂಶವೇ ಸಾಕ್ಷಿ. ಮಾಧ್ಯಮಗಳನ್ನು ಬಳಸಿಕೊಂಡು ಅಚ್ಛೆದಿನ್ ಹೆಸರಲ್ಲಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಇನ್ನಾದರೂ ಬಿಜೆಪಿ ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಎಚ್. ಡಿ. ದೇವೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.