ನವದೆಹಲಿ:ಎಲ್ಲಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿರುವ ಮಹಿಳೆ ಶಿಸ್ತಿನ ಸೇನೆಯಲ್ಲಿ ತಾವೇನು ಕಡಿಮೆ ಇಲ್ಲ ಎಂದು 70ನೇ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ ಅನಾವರಣಗೊಳಿಸಿದರು. ಇಂತಹದ್ದೊಂದು ಇತಿಹಾಸಕ್ಕೆ ಇಡೀ ದೇಶವೇ ಸಾಕ್ಷಿಯಾಯಿತು. ಅಸ್ಸಾಂ ರೈಫಲ್ಸ್ನ ಮಹಿಳಾ ತುಕಡಿ ಮುನ್ನಡೆಸಿದ ಮೇಜರ್ ಮಾಜ್ ಖಷ್ಬೂ ಕನ್ವಾರ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಯುವ ಸಮೂಹದ ನಾಯಕಿ, ಕಣ್ಮಣಿಯೂ ಆಗಿಬಿಟ್ಟಿದ್ದಾರೆ.
ರಾಜಪಥದಲ್ಲಿಶನಿವಾರ ನಡೆದ ಪೆರೇಡ್ನಲ್ಲಿ ನೌಕಾಪಡೆ, ವಾಯುಪಡೆ ತುಕಡಿಗಳನ್ನು ಮಹಿಳೆಯರೇ ಮುನ್ನಡೆಸಿದರು. ಬರೀ ಮಹಿಳೆಯರಿಂದಲೇ ಕೂಡಿರುವ ಅಸ್ಸಾಂ ರೈಫಲ್ಸ್ ತುಕಡಿಯು ಮಾಜ್ ಖುಷ್ಬೂ ಕನ್ವಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ಹೆಜ್ಜೆಹಾಕಿ ಇತಿಹಾಸ ನಿರ್ಮಿಸಿತು.
ಈ ಮೂಲಕ ಮಾಜ್ ಖಷ್ಬೂ ಕನ್ವಾರ್ ಮಹಿಳೆಯರು ಯುದ್ಧ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
30 ವರ್ಷ ವಯಸ್ಸಿನ ಮಾಜ್ ಖುಷ್ಬೂ ಕನ್ವಾರ್ ದೇಶದ ಪ್ಯಾರಾ ಮಿಲಿಟರಿ ಪಡೆಯ ಅತ್ಯಂತ ಹಳೇಯದಾದ 183 ವರ್ಷಗಳ ಇತಿಹಾಸವಿರುವ ಅಸ್ಸಾಂ ರೈಫಲ್ಸ್ನ ನೇತೃತ್ವ ವಹಿಸಿ ಅಭಿಮಾನದಿಂದ ಬೀಗಿದ್ದಾರೆ.
‘ಅಸ್ಸಾಂ ರೈಫಲ್ಸ್ನ ಬರೀ ಮಹಿಳೆಯರಿಂದ ಕೂಡಿರುವ ತುಕಡಿಯ ನೇತೃತ್ವ ವಹಿಸಿ, ಮುನ್ನಡೆಸುತ್ತಿರುವುದು ನನಗೆ ಬಹಳ ಗೌರವ ಮತ್ತು ಹೆಮ್ಮೆಯ ವಿಷಯ. ನಾವು ಸಾಕಷ್ಟು ಕಠಿಣ ಅಭ್ಯಾಸ ನಡೆಸುತ್ತಿದ್ದೆವು... ’ಎಂದು ಮಾಜ್ ಖಷ್ಬೂ ಕನ್ವಾರ್ ಹೇಳಿಕೊಂಡಿದ್ದಾರೆ.
‘ನಾನು ರಾಜಸ್ಥಾನದ ಜೈಪುರದ ಬಸ್ ಕಂಡಕ್ಟ್ರ್ ಪುತ್ರಿ. ಶಾಲಾ ಶಿಕ್ಷಣವನ್ನು ವಿದ್ಯಾರ್ಥಿ ವೇತನ ಪಡೆದು ಓದಿದ್ದೇನೆ. ಎಂಬಿಎ ಪದವಿಯನ್ನು ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ. ಕಠಿಣ ಸಾಧನೆ ಮಾಡಿದರೆ ಹುಡುಗಿಯೊಬ್ಬಳು ತನ್ನ ಕನಸನ್ನು ಪೂರೈಸಬಲ್ಲಳು. ಹೋರಾಟದ ಬದುಕು ನಡೆಸಿದ ತಂದೆಗೆ ಸಣ್ಣ ಉಡುಗೊರೆ ನೀಡಿದ್ದೇನೆ. ಪೋಷಕರ ಬಗ್ಗೆ ಹೆಮ್ಮೆಯಿದೆ’ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.
‘ಯಶಸ್ಸುಗಳಿಸಲು ಯಾವುದೇ ಅಡ್ಡದಾರಿಗಳಿಲ್ಲ ಎಂದು ನಾನು ಇತರ ಮಹಿಳೆಯರಿಗೆ ಹೇಳಬಯಸುತ್ತೇನೆ’ ಎಂದು ತಮ್ಮ ಸಾಧನೆಯ ಗುಟ್ಟನ್ನು ಹೇಳಿಕೊಂಡಿದ್ದಾರೆ.
‘ಮಹಿಳೆಯರು ಯಾವುದೇ ಮುಜುಗರ, ಹಿಂಜರಿಕೆ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಸೇರಬೇಕು. ಮಹಿಳೆ 1972ರಿಂದಲೂ ಭಾರತೀಯ ಸೇನೆಯ ಭಾಗವಾಗಿದ್ದಾರೆ. ಯಾರೂ ಹಿಂಜರಿಯಬೇಕಿಲ್ಲ. ಸೇನೆ ಸೇರ ಬಯಸುವವರು ಹಿಂಜರಿಕೆಯನ್ನು ತೊಡೆಯಬೇಕು’ ಎಂದೂ ಕರೆ ನೀಡಿದ್ದಾರೆ.
‘ಮೂರು ವರ್ಷಗಳ ಹಿಂದೆ ಅಸ್ಸಾಂ ರೈಫಲ್ಸ್ನ ಮಹಿಳಾ ತಂಡ ಮುನ್ನುಡಿ ಬರೆದಿದ್ದು, ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಮಹಿಳೆ ಯುದ್ಧ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದೂ ಹೇಳಿದ್ದಾರೆ.
‘ಮಹಿಳೆಯರು ಇನ್ನೂ ಯುದ್ಧ ಪಾತ್ರದಲ್ಲಿ ಸೇರ್ಪಡೆಗೊಳ್ಳಬೇಕಿದೆ ಎಂದು ಹೇಳುವುದು ತಪ್ಪು. ಅಸ್ಸಾಂ ರೈಫಲ್ಸ್ನ ಮಹಿಳಾ ಒಡೆ ಯುದ್ಧ ಭೂಮಿಯಲ್ಲಿ ಈಗಾಗಲೇ ತೊಡಗಿಸಿಕೊಂಡಿದೆ’ ಎಂದೂ ಅವರು ಹೇಳಿದ್ದಾರೆ.
‘ಮಹಿಳೆಯರು ಈಗಾಗಲೇ ಬಂಡುಕೋರರು ಇರುವ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಮಣಿಪುರ ಅಥವಾ ನಾಗಾಲೆಂಡ್ ಮತ್ತು ಇಂಡೋ –ಮಾಯುನ್ಮಾರ್ ಗಡಿಯಲ್ಲಿನ ಎಲ್ಲಾ ಕ್ರಾಸಿಂಗ್ ಪಾಯಿಂಟ್ಗಳಲ್ಲಿ ನಿಯೋಜಿಸಲಾಗಿದೆ. ಜಂಟಿ ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಇದರ ಜತೆಗೆ, ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ ತಂಡದ ಕ್ಯಾಪ್ಟನ್ ಶಿಖಾ ಸುರಭಿ ಅವರು ಮೈನವಿರೇಳಿಸುವ ಬೈಕ್ ಸ್ಟಂಟ್ ನಡೆಸಿಕೊಟ್ಟರು.
ಬೈಕ್ ಸ್ಟಂಟ್ ನಡೆಸುತ್ತಾ ಶಿಖಾ ಸುರಭಿ ರಾಷ್ಟ್ರಪತಿಗೆ ಗೌರವ ವಂದನೆ ಸಲ್ಲಿಸುತ್ತಿದ್ದಂತೆ ಇತ್ತ ಅವರ ಪುತ್ರಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಅಲ್ಲದೆ, ನೌಕಾಪಡೆ, ಸೇನಾ ಮತ್ತು ಕಾರ್ಪ್ಸ್ ಆಫ್ ಸಿಗ್ನಲ್ಸ್ (ಸಾಗಿಸಬಹುದಾದ ಉಪಗ್ರಹ ಟರ್ಮಿನಲ್) ಘಟಕಗಳನ್ನು ಮಹಿಳಾ ಅಧಿಕಾರಿಗಳು ನೇತೃತ್ವ ವಹಿಸಿ ಮುನ್ನಡೆಸಿದರು.
ಪರೇಡ್ ನೋಡಲು ತನ್ನ ಮಗಳು ಮತ್ತು ಮೊಮ್ಮಕ್ಕಳ ಜತೆ ಬಂದಿದ್ದ 70 ವರ್ಷ ವಯಸ್ಸಿನ ದರ್ಶನಾ ಚಾವ್ಲಾ, ಮಹಿಳಾ ಶಕ್ತಿಯನ್ನು ಕಂಡು ಅತೀವ ಸಂತಸ ವ್ಯಕ್ತಪಡಿಸಿ ಪ್ರತಿಕ್ರಿಯಿಸಿ, ‘ನಾವು ರೋಹಿಣಿಯಿಂದ ಬಂದಿದ್ದೇವೆ. ನನ್ನ ಮಗಳು ಮತ್ತು ಮೊಮ್ಮಕ್ಕಳ ಜತೆ ಮೊದಲ ಬಾರಿಗೆ ಪಥಸಂಚಲನ ವೀಕ್ಷಿಸಲು ಬಂದಿದ್ದೇವೆ. ಈ ಮಹಿಳಾ ಸಾಧಕರನ್ನು ನೋಡಿ ನನ್ನ ಮಗಳು, ಮೊಮ್ಮಕ್ಕಳು ಸಂತೋಷಪಟ್ಟರು’ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.