ಮಿಕೋಲಾಯಿವ್, ಉಕ್ರೇನ್: ‘ರಷ್ಯಾ ಸೇನಾಪಡೆಗಳನ್ನು ದೇಶದಿಂದ ಸಂಪೂರ್ಣವಾಗಿ ಹಿಮ್ಮೆಟ್ಟಿಸುತ್ತೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ರಷ್ಯಾವು ಕೆರ್ಸಾನ್ನಿಂದ ತನ್ನ ಸೇನಾಪಡೆ ಹಿಂದಕ್ಕೆ ಕರೆಸಿಕೊಂಡ ಬಳಿಕ ಈ ಪ್ರದೇಶಕ್ಕೆ ಮರಳಿರುವ ಸ್ಥಳೀಯರು ಪರಸ್ಪರ ಅಪ್ಪಿಕೊಂಡು, ಮುತ್ತಿಟ್ಟು, ಉಕ್ರೇನ್ನ ಧ್ವಜ ಹಿಡಿದು ಸಂಭ್ರಮಿಸಿದ್ದರು.
ಈ ಸಂಭ್ರಮದ ಬೆನ್ನಲ್ಲೇ ಶನಿವಾರ ವಿಡಿಯೊ ಭಾಷಣ ಮಾಡಿರುವ ಝೆಲೆನ್ಸ್ಕಿ, ‘ಸ್ಥಳೀಯರು ಪರಸ್ಪರ ಅಪ್ಪಿಕೊಂಡು ಸಂಭ್ರಮಿಸುತ್ತಿರುವ ಇಂತಹ ದೃಶ್ಯಗಳನ್ನು ನಾವು ಮುಂದೆಯೂ ಕಾಣುತ್ತೇವೆ’ ಎಂದಿದ್ದಾರೆ.
‘ನಮ್ಮ ಸೈನಿಕರು ರಷ್ಯಾದ ಹಿಡಿತದಿಂದ ನಮ್ಮ ಪ್ರದೇಶಗಳನ್ನು ಮುಕ್ತಗೊಳಿಸಲಿದ್ದಾರೆ’ ಎಂದೂ ಹೇಳಿದ್ದಾರೆ.
‘ನಾವು ಯಾರನ್ನೂ ಮರೆಯುವುದಿಲ್ಲ. ಯಾರನ್ನೂ ಕೈ ಬಿಡುವುದಿಲ್ಲ. ಎಲ್ಲಾ ನಗರ ಹಾಗೂ ಹಳ್ಳಿಗಳನ್ನು ಎದುರಾಳಿಗಳ ಹಿಡಿತದಿಂದ ಬಿಡುಗಡೆಗೊಳಿಸುತ್ತೇವೆ’ ಎಂದು ದೇಶದ ನಾಗರಿಕರಿಗೆ ಭರವಸೆ ನೀಡಿದ್ದಾರೆ.
ಕೆರ್ಸಾನ್ ಸೇರಿದಂತೆ ಇತರೆ ಮೂರು ಪ್ರಾಂತ್ಯಗಳನ್ನು ನಮ್ಮ ಸೈನಿಕರು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ಪುಟಿನ್ ಘೋಷಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಉಕ್ರೇನ್ ಸೈನಿಕರು, ಕೆರ್ಸಾನ್ ಪ್ರಾಂತ್ಯವನ್ನು ಮರು ವಶಪಡಿಸಿಕೊಂಡಿರುವುದು ರಷ್ಯಾ ಸೇನೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅಲ್ಲಿನ ಸರ್ಕಾರಕ್ಕೆ ಇದರಿಂದ ಮುಖಭಂಗ ಉಂಟಾಗಿದೆ.
ಉಕ್ರೇನ್ ಸೈನಿಕರು ಭಾನುವಾರ ಕೆರ್ಸಾನ್ ಪ್ರಾಂತ್ಯದಲ್ಲಿ ಬೀಡು ಬಿಟ್ಟ ಬಳಿಕ ಸ್ಥಳೀಯ ಆಡಳಿತವು ಅಲ್ಲಿದ್ದ ಸ್ಫೋಟಕ ವಸ್ತುಗಳು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು. ಜೊತೆಗೆ ನಾಗರಿಕರ ವಾಸಕ್ಕೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದಕ್ಕೂ ಒತ್ತು ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.