ಜಕಾರ್ತಾ:ಕೋವಿಡ್ ಸಂತ್ರಸ್ತರ ಆಹಾರ ಯೋಜನೆಗೆ ಸಂಬಂಧಿಸಿದಂತೆ ₹8.85 ಕೋಟಿ (1.2 ಮಿಲಿಯನ್ ಡಾಲರ್) ಲಂಚ ಸ್ವೀಕರಿಸಿದ ಆರೋಪದಡಿ ಇಂಡೊನೇಷ್ಯಾದ ಸಾಮಾಜಿಕ ವ್ಯವಹಾರಗಳ ಸಚಿವರನ್ನುಭಾನುವಾರ ಬಂಧಿಸಲಾಗಿದೆ.
ಇಂಡೊನೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳವು ಶನಿವಾರ ಸಚಿವ ಜೂಲಿಯಾರಿ ಬಟುಬರಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ₹8.85 ಕೋಟಿ ಮೊತ್ತವನ್ನು ಒಳಗೊಂಡ ಸೂಟ್ಕೇಸ್, ಬ್ಯಾಗ್ ಅನ್ನು ವಶಕ್ಕೆ ಪಡೆದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡೊನೇಷ್ಯಾ ಅಧ್ಯಕ್ಷಜೋಕೊ ವಿಡೋಡೋ ಅವರು, ‘ಇದು ಜನರ ಹಣ. ಕೋವಿಡ್–19 ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಇದರ ಅಗತ್ಯವಿದೆ. ನಾನು ಯಾವುದೇ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ’ ಎಂದರು.
ಕೋವಿಡ್ನಿಂದಾಗಿ ಇಂಡೊನೇಷ್ಯಾದ ಆರ್ಥಿಕತೆಯು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ನಿಂದ ಸಮಸ್ಯೆಗೊಳಗಾಗಿರುವ ಜನರಿಗಾಗಿ ಸರ್ಕಾರವು ಆಹಾರ ಪ್ಯಾಕೆಜ್ಗಳಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
‘ಜೂಲಿಯಾರಿ ಬಟುಬರಾ ಅವರು ಸರ್ಕಾರದ ಆಹಾರ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದಾರೆ. ಸಂತ್ರಸ್ಥರಿಗೆ ಆಹಾರ ವಿತರಣೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳಿಬ್ಬರಿಂದ ಜೂಲಿಯಾರಿ ₹8.85 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.