ಬೀಜ ಕೃಷಿಯ ಜೀವಾಳ. ಒಕ್ಕಲು ಮಕ್ಕಳ ಜೀವನಾಡಿ. ಸಾವಿರಾರು ವರ್ಷಗಳಿಂದ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜೊತೆಯಾಗಿ ಬೀಜ ಬೆಸೆದುಕೊಂಡು ಬಂದಿದೆ. ರೈತ ಸಮುದಾಯ ಬೀಜ ವೈವಿಧ್ಯವನ್ನು ಜೋಪಾನ ಮಾಡಿ, ಅಭಿವೃದ್ಧಿಗೊಳಿಸಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ.
ಇಂಥ ಅಮೂಲ್ಯ ಬೀಜ ಸಂಪತ್ತಿಗೆ ಅಪಾಯ ಎದುರಾಗಿದೆ. ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳು ರೈತರ ಬೀಜ ಸ್ವಾತಂತ್ರ್ಯಕ್ಕೆ ಸವಾಲಾಗಿವೆ. ಇಳುವರಿಯೇ ಮೂಲ ಮಂತ್ರವಾಗಿ, ದೇಸಿ ತಳಿಗಳ ರುಚಿ, ಸ್ವಾದ, ಸೊಗಡು, ಬರ ನಿರೋಧಕ ಗುಣ ವಿಶೇಷತೆಗಳೆಲ್ಲಾ ಮೂಲೆ ಗುಂಪಾಗಿದೆ. ಬೀಜ ಸಂಸ್ಕೃಂತಿ ಕೊನೆಯುಸಿರೆಳೆಯುತ್ತಿದೆ.