ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲವನ್ನು ಕಳೆಯಬೇಡಿ

Published 30 ಅಕ್ಟೋಬರ್ 2023, 23:30 IST
Last Updated 30 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಸಮಯವನ್ನು ನಾವು ಅರ್ಥಮಾಡಿಕೊಳ್ಳುವುದೇ ನಾವು ಮಾಡುವ ಕೆಲಸಗಳು, ಕೈಗೊಳ್ಳುವ ನಿರ್ಧಾರಗಳು ಮತ್ತು ಅದರಿಂದುಂಟಾಗುವ ಪರಿಣಾಮಗಳ ಮೂಲಕ. ನಮ್ಮೆಲ್ಲಾ ಕ್ರಿಯೆ-ಪ್ರತಿಕ್ರಿಯೆಗಳು ನಮ್ಮ ಸಮಯದ ಪರಿಕಲ್ಪನೆಯ ಜೊತೆಗೆ ನಿಕಟ ಸಂಬಂಧ ಹೊಂದಿದೆ. ಉದಾಹರಣೆಗೆ, ಕೆಲವರಿಗೆ ಕಾಯುವುದೆಂದರೆ ಎಲ್ಲಿಲ್ಲದ ಸಿಟ್ಟು, ಇನ್ನು ಕೆಲವರಿಗೆ ಈ ಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದರೆ ಎಲ್ಲಿಲ್ಲದ ಆತಂಕ.

ನಮ್ಮ ಬಳಿಯಿರುವ ಸಮಯ ಅನಂತವಾದದ್ದೇನಲ್ಲ; ಅದಕ್ಕೊಂದು ಅಂತ್ಯವಿದೆ, ಯಾವುದೇ ಸಮಯ ನಮ್ಮ ಕೈತಪ್ಪಿಹೋಗಬಹುದೆಂಬ ಪರಿಜ್ಞಾನವೇ ನಮ್ಮನ್ನು ಏನನ್ನಾದರೂ ಮಾಡಲು ಪ್ರೇರೇಪಿಸುತ್ತದೆ. ಹಾಗಿಲ್ಲದೇ ಯಾವುದೇ ಕೆಲಸವನ್ನು ಇಂದು ಮಾಡಿದರೂ, ನಾಳೆ ಮಾಡಿದರೂ, ಇನ್ನು ಹತ್ತು ವರ್ಷದ ನಂತರ ಮಾಡಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದಾದರೆ ಅಂತಹ ಕೆಲಸ ಮಾಡಲು ಮನಸ್ಸೇ ಬರುವುದಿಲ್ಲ. ಇಂದಿರುವ ಸಮಯ, ಉತ್ಸಾಹ, ಸಾಧಿಸುವ ಮನಸ್ಸು, ಸಾಧಿಸಲು ಬೇಕಾದ ಸೌಕರ್ಯಗಳು, ದೈಹಿಕ-ಬೌದ್ಧಿಕ ಬಲ ನಾಳೆ ಇರದೇ ಹೋಗಬಹುದೆಂಬ ಆಲೋಚನೆಯೇ ಇಂದು ನಮ್ಮನ್ನು ಕಾರ್ಯಪ್ರವೃತ್ತಗೊಳಿಸುತ್ತದೆ. ಸಮಯದ ಸದುಪಯೋಗ ಎನ್ನುವುದು ನಾವು ಕಾಲದ ಕ್ಷಣಿಕತೆಯನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿಂತಿದೆ.

ಸಮಯದ ಸದುಪಯೋಗವೆಂದರೆ ಉತ್ಪಾದಕತೆ - ಹಣವನ್ನು, ಹೆಸರನ್ನು ತರುವ, ಪ್ರಪಂಚಕ್ಕೆ ತೋರ್ಪಡಿಸಬಹುದಾದ ಏನನ್ನಾದರೂ ಮಾಡುವುದೆಂದು ಮಾತ್ರ ಅರ್ಥಮಾಡಿಕೊಳ್ಳಬೇಕಾಗಿಲ್ಲ. ನಿಜವಾಗಿಯೂ ಸಂತೋಷವಾಗಿರುವುದಕ್ಕೆ, ವಿರಮಿಸುವುದಕ್ಕೆ, ಬಾಂಧವ್ಯವನ್ನು ಕಟ್ಟಿಕೊಳ್ಳುವುದಕ್ಕೆ, ಆಟವಾಡುವುದಕ್ಕೆ, ಮೌನವಾಗಿ ನಮ್ಮಷ್ಟಕ್ಕೆ ನಾವು ಶಾಂತಿಯಿಂದಿರುವುದಕ್ಕೆ, ಆಳವಾದ ಚಿಂತನೆಗೆ, ಆತ್ಮಾವಲೋಕನಕ್ಕೆ, ಜೀವನಪ್ರೀತಿಯನ್ನು ಹೆಚ್ಚಿಸುವ ಎಲ್ಲ ಕೆಲಸಗಳಿಗೆ ಮೀಸಲಾದ ಸಮಯವೂ ಸದುಪಯೋಗಗೊಂಡ ಸಮಯವೇ ಹೌದು. ಉತ್ಪಾದಕತೆಯ ದೃಷ್ಟಿಕೋನದಿಂದ ನೋಡಿದಾಗ ‘ಸಮಯ ಹಾಳು’ ಎನಿಸುವ ಎಷ್ಟೋ ಕೆಲಸಗಳು ಆಂತರ್ಯದ ಬೆಳವಣಿಗೆಗೆ ಅವಶ್ಯವಾಗಿರುತ್ತದೆ.

ಸಮಯದ ಸದುಪಯೋಗಕ್ಕೆ ಉಂಟಾಗುವ ಅಡೆತಡೆಗಳ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ವಿಚಾರ ಮಾಡೋಣ.

* ನಾವು ಮಾಡುತ್ತಿರುವ ಕೆಲಸವನ್ನು ಮಾಡಿದ ನಂತರ ನಮಗೆ ರೇಜಿಗೆಯಾಗುತ್ತಿದೆಯೇ ಅಥವಾ ಸಮಾಧಾನ ಎನಿಸುತ್ತಿದೆಯೇ ಎನ್ನುವುದೇ ನಾವು ಸಮಯವನ್ನು ಹಾಳುಮಾಡುತ್ತಿದ್ದೇವೋ ಅಥವಾ ಸದುಪಯೋಗಪಡಿಸಿಕೊಳ್ಳುತ್ತಿದ್ದೇವೋ ಎನ್ನುವುದನ್ನು ತಿಳಿಯಲು ಇರುವ ಮಾನದಂಡ. ಉದಾಹರಣೆಗೆ, ಒಂದೆರಡು ಗಂಟೆ ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆದ ನಂತರ ಹೇಗೆ ಅನಿಸುತ್ತದೆ, ಅದೇ ಸಮಯವನ್ನು ಒಳ್ಳೆಯ ಸಿನಿಮಾ ನೋಡಿ ಕಳೆದರೆ ಹೇಗೆ ಅನಿಸುತ್ತದೆ - ಹೀಗೆ ನಮ್ಮ ಮನಃಸ್ಥಿತಿಯನ್ನು ಸೂಕ್ಷ್ಮವಾಗಿ ಗುರುತಿಸುವ ಅಭ್ಯಾಸ ಮಾಡಿಕೊಳ್ಳಬೇಕು.

* ನಾವು ಯಾವ ಕೆಲಸವನ್ನು ಎಷ್ಟು ಸಮಯದಲ್ಲಿ ಮಾಡಿ ಮುಗಿಸಬೇಕೆಂದು ಯೋಜಿಸಿಕೊಳ್ಳುತ್ತೇವೆ; ಅದರ ಜೊತೆಗೇ ಯಾವ ಕೆಲಸ ಮಾಡುತ್ತ ಸಾಧಾರಣವಾಗಿ ಸಮಯ ಹಾಳುಮಾಡಿಕೊಳ್ಳುತ್ತೇವೆ; ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎನ್ನುವುದರ ಕಡೆಗೂ ಗಮನವನ್ನು ಹರಿಸುವುದು ಒಳ್ಳೆಯದು.

* ನಾವು ಯಾವುದೋ ಕೆಲಸ ಮಾಡಬೇಕೆಂದಿರುತ್ತೇವೆ. ಆದರೆ ಅದಕ್ಕೆ ಮನಸ್ಸಿನ ಚಂಚಲತೆಯೇ ದೊಡ್ಡ ಆಡಚಣೆಯಾಗಿರುತ್ತದೆ. ಮನಸ್ಸು ಎತ್ತೆತ್ತಲೋ ಹರಿಯುವುದಕ್ಕೆ ಅನೇಕ ಕಾರಣಗಳಿರಬಹುದು. ಯಾವುದೋ ಹಿಂಜರಿಕೆ, ನಿರಾಶೆಯ ಭಾವ, ಬೇಸರದಿಂದ ಮನಸ್ಸು ಕುಗ್ಗಿರುವುದು, ಹೀಗೆ. ಆಗ ಮನಸ್ಸಿಗೆ ಉಲ್ಲಾಸ ನೀಡುವ ಬದಲಾವಣೆಗಳು ಬೇಕಾಗುತ್ತವೆ; ಇಲ್ಲದಿದ್ದರೆ ನಿಷ್ಕ್ರಿಯತೆಯ ಕಾರಣದಿಂದ ಸಮಯ ವ್ಯರ್ಥವಾಗುತ್ತದೆ.

* ಮಾಡಬೇಕೆಂದಿರುವ ಕೆಲಸವನ್ನು ಮಾಡದೇ ಬರೀ ಯೋಚನೆ, ಯೋಜನೆಗಳಲ್ಲೇ ಕಾಲ ಕಳೆಯುವುದು, ಆಗಿ ಹೋಗಿದ್ದನ್ನೇ ಮೆಲುಕುಹಾಕುತ್ತಿರುವುದು, ಒಟ್ಟಿನಲ್ಲಿ ಚಿಂತೆ ನಮ್ಮ ಸಾಕಷ್ಟು ಸಮಯವನ್ನು ಹಾಳುಗೆಡವುತ್ತದೆ.

* ನಮ್ಮ ಜೀವನದಲ್ಲಿ ಯಾವುದು ಮುಖ್ಯ, ಯಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು ಎನ್ನುವುದು ಸ್ಪಷ್ಟವಾಗಿದ್ದಾಗ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಸುಲಭ.

* ವಾಸ್ತವಕ್ಕೆ ಹತ್ತಿರವಾಗಿರುವ, ನಾವು ಸಾಧಿಸಬಹುದಾದ ಸಣ್ಣ ಸಣ್ಣ ಗುರಿಗಳ ಮೂಲಕ ದೊಡ್ಡ ಉದ್ದೇಶದೆಡೆಗೆ ಸಾಗುವುದು ಸಮಯದ ನಿರ್ವಹಣೆಯಲ್ಲಿ ಪರಿಣಾಮಕಾರಿ.

* ಸಮಯ ಹಾಳು ಮಾಡಿಕೊಂಡಿದ್ದರ ಬಗ್ಗೆ ಪಶ್ಚಾತ್ತಾಪ ಒಳ್ಳೆಯದು. ಆದರೆ ಅದೇ ಯೋಚನೆಯಲ್ಲಿ, ಬೇಸರದಲ್ಲಿ ಮತ್ತೆ ಸಮಯ ಹಾಳಾಗದಂತೆ ಎಚ್ಚರಿಕೆ ಅಗತ್ಯ.

* ನಾವು ಮಾಡಬೇಕೆಂದಿರುವ ಕೆಲಸಗಳ ಪಟ್ಟಿ ತಯಾರಿಸಿ, ಒಂದೊಂದೇ ಕೆಲಸ ಮುಗಿದ ನಂತರ ಆ ಪಟ್ಟಿಯಲ್ಲಿ ಅದನ್ನು ಗುರುತುಹಾಕಿಕೊಳ್ಳಬಹುದು. ಯಶಸ್ವಿಯಾಗಿ ಮಾಡಿ ಮುಗಿಸಿದ ಕೆಲಸಗಳು ನೆಮ್ಮದಿಯನ್ನು, ಸಂತೋಷವನ್ನು ತರುವುದರ ಜೊತೆಗೆ ನಮ್ಮ ಸಮಯವನ್ನು ಅಂಥದ್ದೇ ಉತ್ತಮ ಕೆಲಸಗಳಲ್ಲಿ ತೊಡಗಿಸಲು ಪ್ರೇರಕವಾಗುತ್ತದೆ.

* ಪ್ರತಿದಿನವೂ ನಮ್ಮ ಸಂತೋಷವನ್ನು ಹೆಚ್ಚಿಸುವ, ನಾವು ಪ್ರೀತಿಸುವ ಒಂದಾದರೂ ಕೆಲಸವನ್ನು ಮಾಡಲೇಬೇಕೆಂದು ಸಂಕಲ್ಪಿಸುವುದು ಮತ್ತು ಇಂತಹ ಆತ್ಮತೃಪ್ತಿ ತರುವಂತಹ ಕೆಲಸಗಳ ಬಗೆಗೆ ಒಂದು ‘ಜರ್ನಲ್‌’ನಲ್ಲಿ ಬರೆದಿಡುವುದು ಸಮಯವನ್ನು ಎಚ್ಚರಿಕೆಯಿಂದ ಕಳೆಯಲು ಸಹಾಯಕ.

* ನಮ್ಮ ಕೆಲಸಗಳ, ಯೋಜನೆಗಳ, ಹವ್ಯಾಸಗಳ ಬಗೆಗೆ ಆತ್ಮೀಯರೊಂದಿಗೆ ಮಾತನಾಡುವುದು ಉತ್ತೇಜನ–ಉತ್ಸಾಹಗಳನ್ನು ನೀಡುತ್ತದೆ.

ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದಕ್ಕೆ ಸಂಕಲ್ಪದ ಜೊತೆಗೆ ಎಚ್ಚರಿಕೆ, ಅಭ್ಯಾಸ, ದೃಢನಿಶ್ಚಯವೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT