ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿಂದಲೇ ಬದುಕೊಂದು ಶುರುವಾಯಿತು..

Last Updated 28 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮುಗದ ಗ್ರಾಮದ ಶೇಕಪ್ಪ ಕುಟುಂಬ ಹಾಗೂ ಸುರತ್ಕಲ್‌ನ ವೇಣುಗೋಪಾಲ್‌ ಐದು ತಲೆಮಾರುಗಳಿಂದ ಕುಂಬಾರಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಎರಡೂ ಕುಟುಂಬಗಳ ಊರುಗಳು ಉತ್ತರ– ದಕ್ಷಿಣವಾಗಿದ್ದರೂ ಅಂದಿನಿಂದ ಇಂದಿನವರೆಗೂ ಮಣ್ಣನ್ನೆ ನಂಬಿಕೊಂಡು ಕುಂಬಾರಿಕೆ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ, ಮಣ್ಣಿನ ಕಾಯಕ ಜೀವಿಗಳ ಕುರಿತ ಪರಿಚಯಾತ್ಮಕ ಲೇಖನ ಇಲ್ಲಿದೆ.

‘ನಾಲ್ಕು ದಶಕಗಳ ಹಿಂದೆ ಎಲ್ಲ ಹಬ್ಬ, ಜಾತ್ರೆಗಳಲ್ಲಿ ಮಾರಾಟದ ಮುಂಚೂಣಿಯಲ್ಲಿರುತ್ತಿದ್ದ ಮಣ್ಣಿನ ಪರಿಕರಗಳ ತಯಾರಕರು ಈಗ ಹೇಗಿದ್ದಾರೆ’ ಎಂದು ನೋಡಲು ನಾನು ಹೋಗಿದ್ದು ಧಾರವಾಡ ಜಿಲ್ಲೆಯ ಮುಗದಕ್ಕೆ.

ಮುಗದ,ಒಂದು ದಶಕದ ಹಿಂದೆ ವರ್ಷಕ್ಕೆ ಲಕ್ಷಾಂತರ ಕುಂಡಗಳನ್ನು, ಪಣತಿಗಳನ್ನು ತಯಾರಿಸುತ್ತಿದ್ದ ಪುಟ್ಟ ಗ್ರಾಮ. ಆದರೆ, ಈಗ ಆ ಗ್ರಾಮದ ಬಹುತೇಕ ಕುಂಬಾರರ ಮನೆಯ ‘ತಿಗರಿ’ ಸದ್ದೇ ಮಾಡದೇ ಹಿತ್ತಲಿನ ಮೂಲೆಯಲ್ಲಿ ಬಿದ್ದಿದೆ.

ಆದರೆ ಇಲ್ಲಿನ ಬಸಪ್ಪ, ಶೇಕಪ್ಪ ಸಹೋದರರು ಮಾತ್ರ ಭರವಸೆ ಕಳೆದುಕೊಂಡಿಲ್ಲ. ಅವರ ಮನೆಯಲ್ಲಿ ತಿಗರಿ ತಿರುಗುತ್ತಿದೆ. ಹಣತೆಗಳು ಸೃಷ್ಟಿಯಾಗುತ್ತಿವೆ. ಇವರ ಮನೆಯಲ್ಲಿ ತಯಾರಾಗುವ ದೀಪಾವಳಿಯ ಹಣತೆ ಐದು ತಲೆಮಾರನ್ನು ಬೆಳಗಿದೆ.‘ಯಾರು ಕುಂಬಾರಿಕೆಯನ್ನು ಬಿಟ್ಟರೂ ಐದು ತಲೆಮಾರಿನಿಂದ ನಡೆಸಿಕೊಂಡು ಬಂದ ಮನೆತನದ ವಿದ್ಯೆಯನ್ನು ನಾವು ಬಿಡಲಾರೆವು’ ಎಂದು ತಿಗರಿ ತಿರುಗಿಸುತ್ತಾ ಬಸಪ್ಪ ಮಣ್ಣಿನೊಂದಿಗೆ ಬೆರೆತ ತಮ್ಮ ಬದುಕಿನ ಗಾಥೆಯನ್ನು ಬಿಚ್ಚಿಟ್ಟರು.

ಐವತ್ತು ವರ್ಷಗಳ ಹಿಂದೆ ಇವರ ಅಪ್ಪ ಕರಿಯಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಮನೆತನದ ವಿದ್ಯೆಯನ್ನು ಮುಂದುವರಿಸುವ ಹೊಣೆಗಾರಿಕೆ ಸಹಜವಾಗಿ ಹಿರಿಯ ಮಗ ಬಸಪ್ಪನವರ ಹೆಗಲಿಗೇರಿತ್ತು. ಮನೆಯಿಂದ ಅನತಿ ದೂರದಲ್ಲಿದ್ದ ಕೆರೆಯ ಮಣ್ಣನ್ನೇ ನೆಚ್ಚಿ ಇವರ ಕಾಯಕ ಆರಂಭವಾಯಿತು. ವರ್ಷದಲ್ಲಿ ಆರು ತಿಂಗಳು ನಾಡ ಹೆಂಚು, ಇನ್ನಾರು ತಿಂಗಳು ಮಡಕೆ–ಕುಡಿಕೆಗಳನ್ನು ತಯಾರಿಸುತ್ತಿದ್ದ ಕರಿಯಪ್ಪನವರ ಕೌಶಲಕ್ಕೆ ಆಗಲೇ ಬೇಡಿಕೆ ಕುಸಿದಿದ್ದರಿಂದ (ಮಂಗಳೂರ ಹೆಂಚು, ಆರ್‌.ಸಿ.ಸಿ ಮನೆಗಳು ಜನಪ್ರಿಯವಾಗಿದ್ದವು)ಇವರು ಕುಂಡಗಳನ್ನು ತಯಾರಿಸಲಾರಂಭಿಸಿದರು.

ಮನೆಯೆಂಬುದು ಪ್ರಯೋಗಶಾಲೆಯಂತಾಗಿ ತಿಗರಿಯ ಮೇಲೆ ತಿರುಗುವ ಮಣ್ಣಿನಲ್ಲಿ ಹಲವು ಗಾತ್ರದ, ಆಕರ್ಷಕ ಆಕಾರದ ಮಣ್ಣಿನ ಕುಂಡಗಳು ತಯಾರಾಗ ಲಾರಂಭಿಸಿದವು. ಪತ್ನಿ ನಿಂಗಮ್ಮ ಪತಿಯ ಕೆಲಸ ನೋಡಿ ಹುಮ್ಮಸ್ಸಿನಿಂದ ಕುಂಬಾರಿಕೆಯ ಕೆಲಸದಲ್ಲಿ ನೆರವಾದರು. ಆಗ ಊರಿನ ಮೂವತ್ತು ಮನೆಗಳಲ್ಲಿ ತಿಗರಿ ಸಪ್ಪಳ ಮಾಡುತ್ತಿದ್ದವು.

ಸಿಕ್ಕಿತು ದೇಶವ್ಯಾಪಿ ಬೇಡಿಕೆ
‘ಎಲ್ಲರೂ ಮಾರುಕಟ್ಟೆಗಾಗಿ ಅಲೆದಾಡುವುದಕ್ಕಿಂತ ಒಂದು ಸಹಕಾರ ಸಂಘವನ್ನು ಕಟ್ಟಿದರೆ ಅಗತ್ಯವಿರುವವರು ತಮ್ಮ ಊರಿಗೇ ಬರುತ್ತಾರೆ’ ಎನಿಸಿ ಒಂದು ಸಹಕಾರ ಸಂಘವನ್ನು ಆರಂಭಿಸಿದರು. ಬಸಪ್ಪನವರು ಅದರ ಅಧ್ಯಕ್ಷರಾಗಿದ್ದರು. ಧಾರವಾಡದ ಕೃಷಿವಿಶ್ವವಿದ್ಯಾಲಯ, ತೋಟಗಾರಿಕಾ ಇಲಾಖೆಯವರು, ಹಲವು ನರ್ಸರಿ ನಡೆಸುವವರು ಸಗಟು ವ್ಯಾಪಾರ ಮಾಡುತ್ತಿದ್ದರು. ಗೋವಾ, ಪುಣೆ, ಮುಂಬೈ, ಸಾಂಗ್ಲಿ ಹೀಗೆ ಹಲವು ನಗರಗಳಿಂದ ಮುಗದದ ಕುಂಡಗಳಿಗೆ ಬೇಡಿಕೆ ಬರುತ್ತಿತ್ತು. ಲಕ್ಷಾಂತರ ಕುಂಡಗಳು, ಮಡಕೆಗಳು, ಪಣತಿ ತಯಾರಾಗುವ ಪುಟ್ಟ ಗ್ರಾಮ ತನ್ನ ಕುಂಬಾರಿಕೆಯ ಕೌಶಲದಿಂದಲೇ ದೇಶದಾದ್ಯಂತ ಮನ್ನಣೆ ಗಳಿಸಿತು.

ಕುಂಬಾರಿಕೆಗೆ ವಿದಾಯ
ಕುಂಬಾರರಿಗೆ ಗಡಿಗೆಗಳನ್ನು ತಯಾರಿಸಲು ಮಣ್ಣಿನಷ್ಟೇ ಅತ್ಯಗತ್ಯವಾದದ್ದು ಕಟ್ಟಿಗೆ. ತಯಾರಿಸಿದ ಮಣ್ಣಿನ ಮಡಿಕೆ ಹಾಗೂ ಕುಂಡಗಳು ಹದವಾದ ಬೆಂಕಿಯಲ್ಲಿ ಬೇಯಿಸಿದಾಗಲೇ ಗಟ್ಟಿಯಾಗಿ ಹೆಚ್ಚು ಬಾಳಿಕೆ ಬರುವಂತಾಗುತ್ತವೆ. ಹಿಂದೆ ಕಾಡುಗಳಲ್ಲಿ ಸಲೀಸಾಗಿ ಕಟ್ಟಿಗೆ ತರಬಹುದಾಗಿತ್ತು. ಆಗ ಕುಂಬಾರಿಕೆ ಸುಲಭದ ಕಾಯಕವಾಗಿತ್ತು. ಕ್ರಮೇಣ ಕುಂಬಾರರ ಹೆಸರಿನಲ್ಲಿ ಇತರರೂ ಕಾಡಿನಿಂದ ಕಟ್ಟಿಗೆಗಳನ್ನು ಕಡಿಯಲಾರಂಭಿಸಿದಾಗ ಸುತ್ತಮುತ್ತಲಿರುವ ಅರಣ್ಯ ನಾಶವಾಗಲಾರಂಭಿಸಿತು. ಎರಡು ದಶಕದ ಹಿಂದೆ ಅರಣ್ಯ ಇಲಾಖೆ ಈ ಬಗೆಯ ಕಟ್ಟಿಗೆ ಕಡಿಯುವಿಕೆಗೆ ನಿರ್ಬಂಧ ಹೇರಿತು. ಸಂಕಷ್ಟಕ್ಕೆ ಸಿಲುಕಿದ ಅನೇಕರು ಕುಂಬಾರಿಕೆಗೆ ವಿದಾಯ ಹೇಳಿ ಬೇರೆ ವೃತ್ತಿಯನ್ನಾಶ್ರಯಿಸಿದರು.

ಭರವಸೆ ಕಳೆದುಕೊಳ್ಳದ ಬಸಪ್ಪ ಬ್ರದರ್ಸ್‌
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಸಪ್ಪನವರು ಕುಂಬಾರಿಕೆಯನ್ನು ತ್ಯಜಿಸಲಿಲ್ಲ. ಅವರ ತಮ್ಮ ಶೇಕಪ್ಪನವರೂ ಅಣ್ಣನೊಂದಿಗೆ ಕೈಗೂಡಿಸಿದ್ದರು. ರೈತರ ಹೊಲದ ಬದುಗಳಲ್ಲಿ ಬೆಳೆದ ಮರಗಳನ್ನು ಕೃಷಿ ತ್ಯಾಜ್ಯಗಳನ್ನೂ, ಖರೀದಿಸಿ ತಂದು ಬಟ್ಟಿ ಬೆಂಕಿಗೆ ವ್ಯವಸ್ಥೆ ಮಾಡಿಕೊಂಡು ಕುಂಬಾರಿಕೆ ಮುಂದುವರಿಸಿದರು. ತಯಾರಿಸಿದ ಉತ್ಪನ್ನಗಳನ್ನು ಇವರು ಈಗ ನೇರವಾಗಿ ಗ್ರಾಹಕರಿಗೆ ಮಾರುತ್ತಿದ್ದಾರೆ. ಮಣ್ಣಿನ ಪಣತಿ, ಕಪ್, ಹೂಜಿ, ವಿವಿಧ ಗಾತ್ರದ ಕುಂಡಗಳು, ತಾಟು, ನೀರು ಕಾಯಿಸುವ ಗಡಿಗೆಗಳು, ಒಲೆಗಳು ಅಡುಗೆ ಮಡಕೆಗಳು.. ಹೀಗೆ ಹಲವಾರು ಬಗೆಯ ಪರಿಕರಗಳ ತಯಾರಿಕೆ ಇವರ ನಿತ್ಯ ಕಾಯಕ.

‘ಹಿಂದ ದೀಪಾವಳಿ ಬಂತು ಅಂದ್ರ ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಒಂದು ಲಕ್ಷ ಪಣತಿ (ಹಣತೆ) ಮಾಡಿಕೊಡುತಿದ್ವಿ. ಈಗ ಪಿಂಗಾಣಿ ದೀಪ ಬಂದ ಮ್ಯಾಲ ನಮ್ಮನ್ನು ಕೇಳಾವ್ರಿಲ್ಲ. ಊರಾಗ ಒಂದಿಷ್ಟು ಮಂದಿ ತಗೋತಾರು, ಅದ್ರಾಗ ನಮಗೆ ಲಾಭ ಸಿಗೂದು ಕಡ್ಮಿನೇ ಆಗೇತ್ರೀ’ ಎಂದು ಹೇಳುವಾಗ ನಿಂಗಮ್ಮನವರ ಕಣ್ಣಲ್ಲಿ ನೀರಾಡುತ್ತಿತ್ತು. ಆದರೆ ಕೈಗಳು ಮಡಿಕೆಗೆ ಮುಚ್ಚಳ, ಗುಂಡಾನಣಿ ಗಲ್ಲೆ, ಪಣತಿಗಳನ್ನು ಅನಾಯಾಸವಾಗಿ ತಯಾರಿಸುತ್ತಿದ್ದವು.

ಚಿತ್ರ: ಇರ್ಷಾದ್‌ ಮಹಮದ್‌
ಚಿತ್ರ: ಇರ್ಷಾದ್‌ ಮಹಮದ್‌

ವಿಭಕ್ತ ಕುಟುಂಬಗಳಾದ ನಂತರವೂ ತಮ್ಮ ಶೇಕಪ್ಪ ಹಾಗೂ ಅವರ ಹೆಂಡತಿ ಗಂಗಮ್ಮನವರು ಕುಂಬಾರಿಕೆಯನ್ನೇ ನೆಚ್ಚಿದ್ದಾರೆ. ಇವರು ಮನೆಯ ಹಿಂಭಾಗದ ಇಳಿ ಮಾಡನ್ನೇ ಮಡಕೆ ತಯಾರಿಸುವ ಕಾರ್ಯಾಗಾರವನ್ನಾಗಿಸಿಕೊಂಡಿದ್ದಾರೆ. ದಿನನಿತ್ಯವೂ ತಿಗರಿ ತಿರುಗಿಸುತ್ತ, ಚಹಾ ಕಪ್ಪಿನಿಂದ ಹಿಡಿದು ದೊಡ್ಡ ಗಾತ್ರದ ಮಡಕೆಯವರೆಗೆ ಹಲವಾರು ಬಗೆಯ ಮಣ್ಣಿನ ಸಲಕರಣೆಗಳನ್ನು ತಯಾರಿಸುತ್ತಾರೆ. ಪ್ರತಿವಾರವೂ ಬಟ್ಟಿ ಹೂಡಿ ಮಡಕೆ ಸುಡುತ್ತಾರೆ. ಪತಿ ಪತ್ನಿ ಇಬ್ಬರೂ ತಲೆ ಮೇಲೆ ಮಡಕೆಗಳನ್ನು ಹೊತ್ತು ಹತ್ತಾರು ಹಳ್ಳಿ ತಿರುಗಿ ಮಾರುತ್ತಾರೆ. ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಅಗಡಿ ಫಾರ್ಮ್‌ನವರು ಶೇಕಪ್ಪನವರಿಂದ ಮಣ್ಣಿನ ಬಟ್ಟಲುಗಳನ್ನೊಯ್ದು ಅದರಲ್ಲಿ ಊಟ ತಿಂಡಿಗಳನ್ನು ಹಾಕಿಕೊಡುತ್ತಾರೆ. ತನ್ಮೂಲಕ ಮಣ್ಣಿನ ಪಾತ್ರೆಗಳ ಮಹತ್ವ ತಿಳಿಸುತ್ತಾರೆ.

ಕುಂಬಾರಿಕೆ ಮಾಡುವ ಇವರು ಭೂರಹಿತರು. ಈ ವೃತ್ತಿಯೊಂದರಿಂದ ಜೀವನ ನಿರ್ವಹಣೆ ಕಷ್ಟ. ‘ಇನ್ನೂ ಕುಂಬಾರಿಕೆಯನ್ನೇ ಮಾಡಿಕೊಂಡು ಜೀವ್ನಾ ಮಾಡ್ತಾರಿವರು’ ಎಂಬ ಹಳ್ಳಿಯವರ ಮಾತಿಗಿವರು ನೋಯುತ್ತಾರೆ. ಮಣ್ಣಿನ ಮಡಕೆ ಕುಡಿಕೆಗಳಿಗೆ ಬೆನ್ನು ಹಾಕಿರುವ ಗ್ರಾಹಕರು ಬದಲಾಗಬಹುದು ಎಂದು ಇವರು ಕಾಯುತ್ತಿದ್ದಾರೆ. ದೀಪಾವಳಿಯಲ್ಲಿ ಹಚ್ಚುವ ಪಣತಿಗಳು ಹೆಚ್ಚು ಮಾರಾಟವಾಗುವ ಮೂಲಕ ಇಂಥ ಕುಂಬಾರರ ಬದುಕಿನ ಕತ್ತಲನ್ನೂ ಓಡಿಸುವಂತಾಗಲಿ. ಮಾಹಿತಿಗೆ ಮೊ. 9972768450

ತಿಗರಿಗೆ ’ಸೌರಶಕ್ತಿ’: ಕಳೆದೊಂದು ವರ್ಷದಿಂದ ಶೇಕಪ್ಪನವರು ಸೋಲಾರ್ ಮೋಟಾರ್‌ ಚಾಲಿತ ತಿಗರಿ ಬಳಸುತ್ತಿದ್ದಾರೆ. ಮಾನವಾಧಾರಿತವಾದ ತಿಗರಿಯಲ್ಲಿ ಆಗಾಗ ಚಕ್ರವನ್ನು ಕೋಲಿನಿಂದ ತಿರುಗಿಸುವ ಶ್ರಮವಿರುತ್ತಿತ್ತು. ಈಗ ಮನೆಯ ಚಾವಣಿಯಲ್ಲಿ ಅಳವಡಿಸಿದ ಸೋಲಾರ್ ಪ್ಯಾನೆಲ್‍ನಿಂದ ಬ್ಯಾಟರಿ ಛಾರ್ಜ್‌ ಆಗುತ್ತದೆ. ಆ ವಿದ್ಯುತ್‍ನಿಂದ ತಿಗರಿ ಒಂದೇ ವೇಗದಲ್ಲಿ ತಿರುಗುತ್ತದೆ. ಸೆಲ್ಕೊ ಫೌಂಡೇಷನ್ ಸಂಸ್ಥೆ ‘ಸೋಲಾರ್’ ಅಳವಡಿಸಿಕೊಳ್ಳಲು ಈ ಕುಟುಂಬಕ್ಕೆ ನೆರವಾಗಿದೆ. ತಿಗರಿ ಇರುವ ಸ್ಥಳದಲ್ಲಿ ಸೋಲಾರ್ ದೀಪವೂ ಬೆಳಗುವುದರಿಂದ ವರ್ಷವಿಡೀ ಕುಂಬಾರಿಕೆ ಕೆಲಸಕ್ಕೆ ಅನುಕೂಲವಾಗಿದೆ ಎನ್ನುತ್ತಾರೆ ಶೇಕಪ್ಪ.

**

ಬದುಕು ಕಟ್ಟಿದ ಮಣ್ಣಿನ ಕಾಯಕ
ಮಂಗಳೂರು ಸಮೀಪದ ಸುರತ್ಕಲ್‌ನ ಕಾನ ಗ್ರಾಮದಲ್ಲೊಂದು ಪುಟ್ಟ ಶೆಡ್‌ ಇದೆ. ಅದರೊಳಗೆ ನಿತ್ಯವೂ ತಿಗರಿ ತಿರುಗುತ್ತಿರುತ್ತದೆ. ಎದುರಿಗೆ ಕುಳಿತ ಯುವಕರೊಬ್ಬರು ತಿಗರಿ ನಡುವೆ ಮಣ್ಣಿನ ಮುದ್ದೆ ಇಟ್ಟು, ಮೇಲೆ ಬೆರಳಾಡಿಸುತ್ತಾ ಹಣತೆಗಳನ್ನು ತಯಾರಿಸುತ್ತಿದ್ದಾರೆ. ಪಕ್ಕದಲ್ಲಿ ಆಗಷ್ಟೇ ತಯಾರಾದ ಹಣತೆಗಳು ಸಾಲಾಗಿ ಜೋಡಿಸಿಟ್ಟಿದ್ದಾರೆ..

ದೀಪಾವಳಿ ಬಂದರೆ, ಅಲ್ಲಿ ಹಣತೆ ಸಾಲುಗಳಿರುತ್ತವೆ. ಕೃಷ್ಣಜನ್ಮಾಷ್ಟಮಿ, ದಸರೆ ಬಂದರೆ ಮಡಕೆಗಳ ಸಾಲುಗಳಿರುತ್ತವೆ. ಹೀಗೆ ವರ್ಷದಲ್ಲಿ ಒಂದಲ್ಲ ಒಂದು ಸೀಸನ್‌ ಜೋಡಿಸಿಕೊಂಡೇ, ಕುಂಬಾರಿಕೆ ಮುಂದುವರಿಸಿದ್ದಾರೆ ಕಾನ ಗ್ರಾಮದ ಯುವಕ ವೇಣುಗೋಪಾಲ್‌. ಪದವಿ ಮುಗಿಸಿದ್ದರೂ, ಐದು ದಶಕಗಳ ಕುಂಬಾರಿಕೆ ಪರಂಪರೆಯನ್ನು ಎರಡು ದಶಕಗಳಿಂದ ಮುಂದುವರಿಸುತ್ತಿದ್ದಾರೆ.

‘ತಂದೆಯವರು 50 ವರ್ಷ ಈ ಕಾಯಕದಲ್ಲಿ ತೊಡಗಿದ್ದರು. ಅವರ ಬಳಿಕ ನಾನು ಈ ಕೆಲಸ ಕಲಿತೆ. ಈಗ ಮುಂದುವರಿಸುತ್ತಿದ್ದೇನೆ’ ಎನ್ನುವ ವೇಣುಗೋಪಾಲ್‌, ‘ಈ ಮಣ್ಣಿನ ಕಾಯಕದಿಂದಲೇ ಬದುಕು ನಡೆಸುತ್ತಿದ್ದೇನೆಂದು’ ಉಲ್ಲೇಖಿಸುವುದನ್ನು ಮರೆಯುವುದಿಲ್ಲ.

ಮಾರುಕಟ್ಟೆಯಲ್ಲಿ ಯಾವುದೇ ಆಧುನಿಕ ಸ್ವರೂಪದ ದೀಪ ಬಂದರೂ ಮಣ್ಣಿನ ಹಣತೆಗಳ ಸೆಳೆತ ಕಡಿಮೆ ಆಗಿಲ್ಲ ಎನ್ನುವ ವೇಣುಗೋಪಾಲ್‌ ಅವರಿಗೆ ತಮ್ಮ ಉತ್ಪನ್ನಗಳಿಗೆ (ಮಡಕೆ, ಹಣತೆ ಇತ್ಯಾದಿ) ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿಯಲ್ಲಿ ಭಾರೀ ಬೇಡಿಕೆ ಬಂದೇ ಬರುತ್ತದೆ ಎಂಬ ವಿಶ್ವಾಸ.

ಸಗಟು ಮಾರಾಟದಲ್ಲಿ ಪ್ರತಿ ಹಣತೆಗೆ ₹ 1.60 , ಚಿಲ್ಲರೆ ಮಾರಾಟವಾದರೆ ಪ್ರತಿ ಹಣತೆಗೆ ₹ 2 ಪಡೆಯುತ್ತಾರೆ. ಇಡೀ ವರ್ಷ ಮಡಿಕೆ ಮತ್ತು ಹಣತೆ ತಯಾರಿಸಲು ಎರಡು ಲೋಡ್‌ ಮಣ್ಣು ಸಾಕು. ಒಂದು ಲೋಡ್‌ ಮಣ್ಣಿಗೆ ₹15 ಸಾವಿರ. ಆದರೆ, ತಯಾರಿಸಿದ ಮಣ್ಣಿನ ವಸ್ತುಗಳನ್ನು ಸುಡಲು ಸೌದೆಗೆ ತಗುಲುವ ಖರ್ಚೇ ಹೆಚ್ಚು. ಒಂದು ಲೋಡು ವಸ್ತುಗಳನ್ನು ಸುಡಲು ಕನಿಷ್ಠ 8 ರಿಂದ 10 ಕ್ವಿಂಟಲ್‌ ಸೌದೆ ಬೇಕು. ‘ಏನೇ ಇರಲಿಹಿರಿಯರಿಂದ ಬಂದ ಕೌಶಲ ಕೈಹಿಡಿದಿದೆ. ಇದು ಯಾವತ್ತೂ ಕೈಬಿಟ್ಟಿಲ್ಲ’ ಎಂದು ನಗುಬೀರುತ್ತಾರೆ ಅವರು.ಸಂಪರ್ಕಕ್ಕೆ: 9964698812

–ಚಿತ್ರ–ಲೇಖನ: ಗೋವಿಂದರಾಜ ಜವಳಿ

**

ಬಣ್ಣದ ಪಾಟ್‌ನಲ್ಲಿ ಬದುಕಿನ ಚಿತ್ರ ಕಾಣುತ್ತಿರುವ ಬಸಪ್ಪ
ಬಣ್ಣದ ಪಾಟ್‌ನಲ್ಲಿ ಬದುಕಿನ ಚಿತ್ರ ಕಾಣುತ್ತಿರುವ ಬಸಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT