ಇಡೀ ಸಮಾಜ ಸದಾ ಕೃತಜ್ಞತೆಯಿಂದ ಸ್ಮರಿಸಬೇಕಾದಂತಹ ಎಷ್ಟೋ ಮಹನೀಯರು ನೇಪಥ್ಯದಲ್ಲೇ ಉಳಿದ ಉದಾಹರಣೆಗಳು ಚರಿತ್ರೆಯಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ಪದ್ಮನಾಭನ್ ಪಲ್ಪು ಅವರೂ ಹಾಗೆ ಸಮಾಜದ ಮರೆವಿಗೆ ಸಂದ ಗಣ್ಯ ಸಾಧಕರಲ್ಲೊಬ್ಬರು. ಅವರ ಸಾಧಕ ಬದುಕಿನ ಪುಟಗಳ ಮೇಲಿನ ದೂಳನ್ನು ಕೊಡವಿ, ಅವರ ಹೊಳೆಯುವ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿಯೇ ಲಕ್ಷ್ಮಣ ಕೊಡಸೆ ಅವರ ‘ನಾರಾಯಣ ಗುರುಗಳ ಆಪ್ತ ಡಾ. ಪದ್ಮನಾಭನ್ ಪಲ್ಪು’. ಕೇರಳದಲ್ಲಿ ಜನಿಸಿದರೂ ಕರ್ನಾಟಕವನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡ ಪಲ್ಪು ಅವರು ಒಬ್ಬ ದಕ್ಷ ಆರೋಗ್ಯಾಧಿಕಾರಿಯಾಗಿ ಬೆಂಗಳೂರಿಗೆ ನೀಡಿದ ಕೊಡುಗೆ ಅನನ್ಯವಾದುದು. ಬೆಂಗಳೂರು ನಗರದ ವಿನ್ಯಾಸದಲ್ಲೂ ಅವರು ಮಹತ್ತರ ಪಾತ್ರವನ್ನು ವಹಿಸಿದ್ದರು.