ಗಾಣದಿಂದ ತೈಲ ತೆಗೆಯುತ್ತಿದ್ದ ಗಾಣಿಗರು ಕಟ್ಟಿದ ಊರು, ಸಮೃದ್ಧಿಯ ಹಾಲು, ಮೊಸರಿನ ಊರಾದ ಕಾರಣ ‘ತೈಲೂರು’ ಸೃಷ್ಟಿಯಾಗಿ, ಅಲ್ಲಿನ ಕೃಷಿ, ಕೋಳಿರಾಯನ ಗುಡ್ಡ, ಅಲ್ಲಿನ ರಂಗನಟರು, ಊರಹಬ್ಬದಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳು, ಹನುಮಂತನ ಕಿರೀಟದ ಕಥೆ, ಕನಸು, ಊರಹಬ್ಬ, ಊರಿನ ಪರಿಸರ ಹಾಗೂ ಪಕ್ಷಿಗಳು ಹೀಗೆ ಐವತ್ತೊಂದು ಶೀರ್ಷಿಕೆಗಳಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ‘ಗ್ರಾಮ ಪಲ್ಲಟ’ವನ್ನು ತೆರೆದಿಟ್ಟಿದ್ದಾರೆ. ಲೇಖಕರ ನೆನಪಿನ ಶಕ್ತಿ ಪ್ರತೀ ಅಧ್ಯಾಯದಲ್ಲಿ ಉಲ್ಲೇಖಾರ್ಹ. ಶೀರ್ಷಿಕೆಯಡಿಯ ವಿಷಯವನ್ನು ವಿವರಿಸುತ್ತಲೇ ಮತ್ತೊಂದಿಷ್ಟು ನೆನಪನ್ನು ಕೆದಕಿ ಮತ್ತೆ ಮೂಲ ವಿಷಯಕ್ಕೆ ಮರಳುತ್ತಾರೆ.