ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ತೋರಿದ ಬದ್ಧತೆಯೇ ಈ ಬಜೆಟ್ನ ಅತ್ಯಂತ ಪ್ರಮುಖ ಅಂಶ ಎಂಬುದು ನನ್ನ ಅನಿಸಿಕೆ; ಉಪನಗರ ರೈಲು ಯೋಜನೆಗೆ ಗಣನೀಯ ಮೊತ್ತವನ್ನು ನಿಗದಿ ಮಾಡಲಾಗಿದ್ದು, ಯೋಜನೆಯು ಕೊನೆಗೂ ಹಳಿಗೆ ಬರುವ ಲಕ್ಷಣ ಕಾಣಿಸುತ್ತಿದೆ. ಯಶವಂತಪುರ–ಚನ್ನಸಂದ್ರ ಮತ್ತು ಬೈಯ್ಯಪ್ಪನಹಳ್ಳಿ–ಹೊಸೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗೂ ಹಣ ನೀಡಿ ಅದನ್ನು 2023ರೊಳಗೆ ಪೂರ್ಣಗೊಳಿಸಲು ಮುಂದಾಗಿರುವುದು ಸಂತಸದ ವಿಚಾರ. ಲಕ್ಷಾಂತರ ನೌಕರರುಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ನಿತ್ಯದ ಪ್ರಯಾಣಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಹಾಗಾಗಿ, ಉಪನಗರ ರೈಲು ಜಾಲವು ಬೆಂಗಳೂರಿನ ಮಟ್ಟಿಗೆ ಬಹುದೊಡ್ಡ ಕೊಡುಗೆ ಆಗಲಿದೆ. ಹೊಸ ಮೇಲ್ಸೇತುವೆ ಅಥವಾ ಎತ್ತರಿಸಿದ ಮಾರ್ಗದ ಯೋಜನೆಯನ್ನು ಘೋಷಿಸದೇ ಇರುವ ಮೂಲಕ ಸರ್ಕಾರವು ಸಂದೇಶವೊಂದನ್ನು ರವಾನಿಸಿದಂತೆ ಕಾಣಿಸುತ್ತಿದೆ. ಇದೇ ನೀತಿಗೆ ಅಂಟಿಕೊಂಡರೆ ಮುಂದಿನ ಕೆಲವು ವರ್ಷಗಳಲ್ಲಿ ನಗರದ ವಾಹನ ದಟ್ಟಣೆ ಇಳಿಕೆಯಾಗಿ ವಾಯು ಗುಣಮಟ್ಟ ಉತ್ತಮಗೊಳ್ಳಲಿದೆ.