<p><em>ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ.</em></p>.<p>ನಮ್ಮ ಆಚಾರ–ವಿಚಾರಗಳಲ್ಲಿ ಪುರಾಣಗಳ ಪ್ರಭಾವ ಸ್ಪಷ್ಟವಾಗಿದೆ. ಪುರಾಣ ಎಂದರೆ ವಿಷ್ಣು, ಶಿವ, ನಾರದ, ಗರುಡ, ದೇವಿ – ಮುಂತಾದ ಹದಿನೆಂಟು ಪುರಾಣಗಳು ಎಂಬ ಎಣಿಕೆ ಸಲ್ಲದು. ಇಲ್ಲಿ ‘ಪುರಾಣ’ ಎಂಬುದಕ್ಕೆ ವಿಶಾಲವಾದ ಅರ್ಥವಿದೆ. ದೇಶ–ಕಾಲಾತೀತ ತತ್ತ್ವದ ಸಗುಣವೂ ಸುಂದರವೂ ಶಿವವೂ ಆದ ಅಭಿವ್ಯಕ್ತಿಯೇ ‘ಪುರಾಣ’. ಈ ಅರ್ಥದಲ್ಲಿ ವೇದವೂ ಪುರಾಣವೇ, ರಾಮಾಯಣ–ಮಹಾಭಾರತ–ಭಾಗವತಗಳೂ ಪುರಾಣವೇ, ಗೋವಿನ ಹಾಡು ಕೂಡ ಪುರಾಣವೇ. ‘The mythical narrative is of timeless and placeless validity, true nowever and everywhere’ – ಎಂಬ ಆನಂದ ಕುಮಾರಸ್ವಾಮಿಯವರ ಮಾತು ಇಲ್ಲಿ ಮನನೀಯ. ದೇಶಕಾಲಗಳನ್ನು ಮೀರಿರುವ, ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಲ್ಲುವ ’ಕಥನ’ವೇ ಪುರಾಣ. ಪುರಾಣಕ್ಕೆ ಇತಿಹಾಸದ ಹಂಗು ಇರದು; ಅದರ ಗಮನವೆಲ್ಲ ಮೌಲ್ಯಗಳ ಪ್ರತಿಪಾದನೆಯ ಕಡೆಗೆ. ಪುರಾಣವನ್ನು ಇತಿಹಾಸದ ‘ವಸ್ತು’ವನ್ನಾಗಿ ನೋಡುವುದು ನಮ್ಮ ಸಂಕುಚಿತ ಬುದ್ಧಿಯಾದೀತು ಎಂಬ ಎಚ್ಚರಿಕೆ ಬೇಕು. ಪುರಾಣ ಎಂಬುದು ರೂಪಕ, ಸಂಕೇತ; ಅದು ನಮ್ಮ ಅಂತರಂಗಪ್ರಜ್ಞೆಯ ಭಾವಾಭಿವ್ಯಕ್ತಿ. ಹೀಗಲ್ಲದೆ ಅದನ್ನು ಒಂದು ಸುದ್ದಿಯನ್ನಾಗಿಯೋ ವಾರ್ತೆಯನ್ನಾಗಿಯೋ ಅನುವಾದಿಸಿಕೊಂಡು ಸರಳರೇಖಾತ್ಮಕವಾಗಿ ವಿಶ್ಲೇಷಿಸುವುದು ನಾವು ನಮ್ಮ ಸಂಸ್ಕೃತಿಗೆ ಮಾಡುವ ಅಪಚಾರವೇ ಹೌದು. ಪುರಾಣಗಳು ನಿರೂಪಿಸುವುದು ವಾಸ್ತವ ಮಾಹಿತಿಯ ‘ತಥ್ಯ’ಗಳನ್ನಲ್ಲ, ಅವು ನಿರೂಪಿಸುವುದು ತಥ್ಯಗಳ ಗರ್ಭದಲ್ಲಿ ಅಡಗಿರುವ ಸಾರ್ವಕಾಲಿಕ ಸತ್ಯಗಳನ್ನು.</p>.<p>ನಮ್ಮ ಹಬ್ಬಗಳ ಆಚರಣೆಯ ಮೂಲವೂ ಪುರಾಣಲೋಕವೇ, ಸಂಕೇತಗಳ ಜಗತ್ತೇ ಹೌದು; ದೀಪಾವಳಿಯೂ ಇದಕ್ಕೆ ಹೊರತಾಗಿಲ್ಲ. ‘ದೀಪ’ – ಎಂದರೆ ಬೆಳಕು ಎಂಬುದೇ ದೊಡ್ದ ಸಂಕೇತ. ಕತ್ತಲು–ಬೆಳಕುಗಳ ಸಂಘರ್ಷ; ಬೆಳಕಿನ ಉತ್ಕರ್ಷ – ಈ ಸಂಕೇತಗಳಲ್ಲಿ ನಮ್ಮ ಜೀವನದ ಸತ್ಯ ಶಿವ ಸುಂದರಗಳೇ ಅಡಗಿದೆ. ನರಕಚತುರ್ದಶಿ, ಲಕ್ಷ್ಮೀಪೂಜೆಯ ಆಚರಣೆಗಳಲ್ಲಿ ಪುರಾಣಗಳ ಪ್ರತಿಮೆಗಳು ಸಮೃದ್ಧವಾಗಿವೆ. ಬಲಿಪಾಡ್ಯಮಿಯ ಆಚರಣೆಯಲ್ಲೂ ಪುರಾಣಗಳ ಸಂಕೇತಗಳೇ ಜೀವಪಡೆದುಕೊಂಡಿವೆ.</p>.<p>ಬಲಿಚಕ್ರವರ್ತಿಯ ಕಥೆ ನಮಗೆ ಗೊತ್ತಿದೆ. ಬಲಿ ಒಬ್ಬ ರಾಕ್ಷಸರಾಜ. ಇಂದ್ರನ ಪದವಿಯನ್ನು ಕಿತ್ತುಕೊಂಡ ಅವನು ಚಕ್ರವರ್ತಿಯಾಗಿ ಮೆರೆಯತೊಡಗಿದ. ಅಹಂಕಾರವೂ ಅವನ ಜೊತೆಗೂಡಿತು.ನಾನು ಕೇಳಿದವರೆಲ್ಲರ ಬಯಕೆಗಳೆಲ್ಲವನ್ನೂ ಪೂರೈಸಬಲ್ಲೆ ಎಂಬ ಗರ್ವ ಅವನಲ್ಲಿ ನೆಲೆಗೊಂಡಿತು. ಇಂಥವನನ್ನು ನಿಗ್ರಹಿಸುವುದು ವಿಷ್ಣುವಿಗೆ ಅನಿವಾರ್ಯವಾಯಿತು; ವಿಷ್ಣುವು ವಾಮನರೂಪವನ್ನು ತಳೆದ. ದಾತೃ ನಾನು ಎಂಬ ಅಹಂಕಾರದ ಬೃಹದಾಕಾರದ ಮುಂದೆ ‘ದೇಹಿ’ ಎಂದು ವಾಮನಾಕಾರದಲ್ಲಿ ಆಗ ನಿಂತವನು ಸರ್ವವ್ಯಾಪಕನಾದ ಮಹಾವಿಷ್ಣು! ಏನನ್ನೂ ಕೊಡಬಲ್ಲೆ – ಎಂಬ ಮದದಲ್ಲಿ ಮುಳುಗಿದವನಿಗೆ ತನ್ನಲ್ಲಿಗೆ ಬಂದವರು ಯಾರು, ಏನನ್ನು ಕೇಳಬಹುದು ಎಂಬ ಆಲೋಚನೆಯ ವಿನಯವೇ ಉಳಿದಿರಲಿಲ್ಲ. ಪುಟ್ಟ ಬಾಲಕ ಏನು ತಾನೆ ಕೇಳಿಯಾನು – ಎಂದು ಕುಬ್ಜವಾಗಿಯೇ ಯೋಚಿಸಿದ ಬಲಿಯನ್ನು ವಾಮನ ಮೂರು ಹೆಜ್ಜೆಯನ್ನು ಕೇಳಿದ; ಅಷ್ಟೇ ತಾನೆ ಎಂದುಕೊಂಡ ಬಲಿಯ ಅರಿವಿನ ಅಳತೆಯನ್ನು ಮೀರಿ ವಾಮನನು ತ್ರಿವಿಕ್ರಮನಾಗಿ ಬೆಳೆದ; ಒಂದು ಹೆಜ್ಜೆಯಿಂದ ಇಡಿಯ ಭೂಮಂಲವನ್ನೂ ಮತ್ತೊಂದು ಹೆಜ್ಜೆಯಿಂದ ಇಡಿಯ ಆಕಾಶವನ್ನೂ ಅಳೆದ; ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ನೆಲೆಯಾಯಿತು.</p>.<p>ತಲೆ ಎಂಬುದು ಅಹಂಕಾರದ ಚಿಹ್ನೆ. ಅದನ್ನು ವಿಷ್ಣು ಮೆಟ್ಟಿದ ಎಂಬುದು ಇಲ್ಲಿರುವ ಒಂದು ಸಂಕೇತ. ವಿಷ್ಣು ಎಂದರೆ ಸರ್ವವ್ಯಾಪಕ ತತ್ತ್ವ. ಎಲ್ಲವೂ ನಾನೇ, ಎಲ್ಲವೂ ನನ್ನಲ್ಲಿದೆ – ಎಂಬ ಅಹಂಕಾರದಲ್ಲಿದ್ದ ಬಲಿಗೆ ದಿಟವಾದ ಸರ್ವವ್ಯಾಪಕತೆಯ ಅರಿವನ್ನು ಮೂಡಿಸಿದ ಮಹಾವಿಷ್ಣು. ನಮ್ಮ ಪ್ರತ್ಯಾಕ್ಷಾನುಭವವನ್ನು ಮೀರಿದ, ನಮ್ಮ ಅಳತೆ–ಲೆಕ್ಕಾಚಾರಗಳಿಗೆ ದಕ್ಕದ ವಿವರವೊಂದು ಎಲ್ಲವನ್ನೂ ಆವರಿಸಿಕೊಂಡು, ಎಲ್ಲವನ್ನೂ ಮೀರಿ ಇನ್ನೂ ‘ಹತ್ತು ಅಂಗುಲದಷ್ಟು ಹೆಚ್ಚಾಗಿಯೇ ಇದೆ’ (ಅತ್ಯತಿಷ್ಠದ್ದಶಾಂಗುಲಮ್) ಎಂಬ ಸತ್ಯವು ಬಲಿಗೆ ತ್ರಿವಿಕ್ರಮನಿಂದ ಸಾಕ್ಷಾತ್ಕಾರವಾಯಿತು. ಆ ಕ್ಷಣ ಅವನ ಅಹಂಕಾರವೂ ಮರೆಯಾಯಿತು; ಶಾಶ್ವತತತ್ತ್ವವನ್ನು ಅವನು ಕಂಡುಕೊಂಡನಾದ್ದರಿಂದಲೇ ಅವನು ಚಿರಂಜೀವಿಯೂ ಆದ.</p>.<p>ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ. ಎಂದಿಗೂ ಅಳಿಯದ ಆ ಸ್ಥಾನವೇ ಆನಂದ; ಅದು ಒದಗುವುದೇ ‘ನಾನು‘ ಎಂಬ ಅಹಂಕಾರದ ವಿಸರ್ಜನೆಯಲ್ಲಿ ಎಂಬ ಮಹಾಸಂದೇಶವನ್ನು ಬಲಿಪಾಡ್ಯಮಿ ನೀಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ.</em></p>.<p>ನಮ್ಮ ಆಚಾರ–ವಿಚಾರಗಳಲ್ಲಿ ಪುರಾಣಗಳ ಪ್ರಭಾವ ಸ್ಪಷ್ಟವಾಗಿದೆ. ಪುರಾಣ ಎಂದರೆ ವಿಷ್ಣು, ಶಿವ, ನಾರದ, ಗರುಡ, ದೇವಿ – ಮುಂತಾದ ಹದಿನೆಂಟು ಪುರಾಣಗಳು ಎಂಬ ಎಣಿಕೆ ಸಲ್ಲದು. ಇಲ್ಲಿ ‘ಪುರಾಣ’ ಎಂಬುದಕ್ಕೆ ವಿಶಾಲವಾದ ಅರ್ಥವಿದೆ. ದೇಶ–ಕಾಲಾತೀತ ತತ್ತ್ವದ ಸಗುಣವೂ ಸುಂದರವೂ ಶಿವವೂ ಆದ ಅಭಿವ್ಯಕ್ತಿಯೇ ‘ಪುರಾಣ’. ಈ ಅರ್ಥದಲ್ಲಿ ವೇದವೂ ಪುರಾಣವೇ, ರಾಮಾಯಣ–ಮಹಾಭಾರತ–ಭಾಗವತಗಳೂ ಪುರಾಣವೇ, ಗೋವಿನ ಹಾಡು ಕೂಡ ಪುರಾಣವೇ. ‘The mythical narrative is of timeless and placeless validity, true nowever and everywhere’ – ಎಂಬ ಆನಂದ ಕುಮಾರಸ್ವಾಮಿಯವರ ಮಾತು ಇಲ್ಲಿ ಮನನೀಯ. ದೇಶಕಾಲಗಳನ್ನು ಮೀರಿರುವ, ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಲ್ಲುವ ’ಕಥನ’ವೇ ಪುರಾಣ. ಪುರಾಣಕ್ಕೆ ಇತಿಹಾಸದ ಹಂಗು ಇರದು; ಅದರ ಗಮನವೆಲ್ಲ ಮೌಲ್ಯಗಳ ಪ್ರತಿಪಾದನೆಯ ಕಡೆಗೆ. ಪುರಾಣವನ್ನು ಇತಿಹಾಸದ ‘ವಸ್ತು’ವನ್ನಾಗಿ ನೋಡುವುದು ನಮ್ಮ ಸಂಕುಚಿತ ಬುದ್ಧಿಯಾದೀತು ಎಂಬ ಎಚ್ಚರಿಕೆ ಬೇಕು. ಪುರಾಣ ಎಂಬುದು ರೂಪಕ, ಸಂಕೇತ; ಅದು ನಮ್ಮ ಅಂತರಂಗಪ್ರಜ್ಞೆಯ ಭಾವಾಭಿವ್ಯಕ್ತಿ. ಹೀಗಲ್ಲದೆ ಅದನ್ನು ಒಂದು ಸುದ್ದಿಯನ್ನಾಗಿಯೋ ವಾರ್ತೆಯನ್ನಾಗಿಯೋ ಅನುವಾದಿಸಿಕೊಂಡು ಸರಳರೇಖಾತ್ಮಕವಾಗಿ ವಿಶ್ಲೇಷಿಸುವುದು ನಾವು ನಮ್ಮ ಸಂಸ್ಕೃತಿಗೆ ಮಾಡುವ ಅಪಚಾರವೇ ಹೌದು. ಪುರಾಣಗಳು ನಿರೂಪಿಸುವುದು ವಾಸ್ತವ ಮಾಹಿತಿಯ ‘ತಥ್ಯ’ಗಳನ್ನಲ್ಲ, ಅವು ನಿರೂಪಿಸುವುದು ತಥ್ಯಗಳ ಗರ್ಭದಲ್ಲಿ ಅಡಗಿರುವ ಸಾರ್ವಕಾಲಿಕ ಸತ್ಯಗಳನ್ನು.</p>.<p>ನಮ್ಮ ಹಬ್ಬಗಳ ಆಚರಣೆಯ ಮೂಲವೂ ಪುರಾಣಲೋಕವೇ, ಸಂಕೇತಗಳ ಜಗತ್ತೇ ಹೌದು; ದೀಪಾವಳಿಯೂ ಇದಕ್ಕೆ ಹೊರತಾಗಿಲ್ಲ. ‘ದೀಪ’ – ಎಂದರೆ ಬೆಳಕು ಎಂಬುದೇ ದೊಡ್ದ ಸಂಕೇತ. ಕತ್ತಲು–ಬೆಳಕುಗಳ ಸಂಘರ್ಷ; ಬೆಳಕಿನ ಉತ್ಕರ್ಷ – ಈ ಸಂಕೇತಗಳಲ್ಲಿ ನಮ್ಮ ಜೀವನದ ಸತ್ಯ ಶಿವ ಸುಂದರಗಳೇ ಅಡಗಿದೆ. ನರಕಚತುರ್ದಶಿ, ಲಕ್ಷ್ಮೀಪೂಜೆಯ ಆಚರಣೆಗಳಲ್ಲಿ ಪುರಾಣಗಳ ಪ್ರತಿಮೆಗಳು ಸಮೃದ್ಧವಾಗಿವೆ. ಬಲಿಪಾಡ್ಯಮಿಯ ಆಚರಣೆಯಲ್ಲೂ ಪುರಾಣಗಳ ಸಂಕೇತಗಳೇ ಜೀವಪಡೆದುಕೊಂಡಿವೆ.</p>.<p>ಬಲಿಚಕ್ರವರ್ತಿಯ ಕಥೆ ನಮಗೆ ಗೊತ್ತಿದೆ. ಬಲಿ ಒಬ್ಬ ರಾಕ್ಷಸರಾಜ. ಇಂದ್ರನ ಪದವಿಯನ್ನು ಕಿತ್ತುಕೊಂಡ ಅವನು ಚಕ್ರವರ್ತಿಯಾಗಿ ಮೆರೆಯತೊಡಗಿದ. ಅಹಂಕಾರವೂ ಅವನ ಜೊತೆಗೂಡಿತು.ನಾನು ಕೇಳಿದವರೆಲ್ಲರ ಬಯಕೆಗಳೆಲ್ಲವನ್ನೂ ಪೂರೈಸಬಲ್ಲೆ ಎಂಬ ಗರ್ವ ಅವನಲ್ಲಿ ನೆಲೆಗೊಂಡಿತು. ಇಂಥವನನ್ನು ನಿಗ್ರಹಿಸುವುದು ವಿಷ್ಣುವಿಗೆ ಅನಿವಾರ್ಯವಾಯಿತು; ವಿಷ್ಣುವು ವಾಮನರೂಪವನ್ನು ತಳೆದ. ದಾತೃ ನಾನು ಎಂಬ ಅಹಂಕಾರದ ಬೃಹದಾಕಾರದ ಮುಂದೆ ‘ದೇಹಿ’ ಎಂದು ವಾಮನಾಕಾರದಲ್ಲಿ ಆಗ ನಿಂತವನು ಸರ್ವವ್ಯಾಪಕನಾದ ಮಹಾವಿಷ್ಣು! ಏನನ್ನೂ ಕೊಡಬಲ್ಲೆ – ಎಂಬ ಮದದಲ್ಲಿ ಮುಳುಗಿದವನಿಗೆ ತನ್ನಲ್ಲಿಗೆ ಬಂದವರು ಯಾರು, ಏನನ್ನು ಕೇಳಬಹುದು ಎಂಬ ಆಲೋಚನೆಯ ವಿನಯವೇ ಉಳಿದಿರಲಿಲ್ಲ. ಪುಟ್ಟ ಬಾಲಕ ಏನು ತಾನೆ ಕೇಳಿಯಾನು – ಎಂದು ಕುಬ್ಜವಾಗಿಯೇ ಯೋಚಿಸಿದ ಬಲಿಯನ್ನು ವಾಮನ ಮೂರು ಹೆಜ್ಜೆಯನ್ನು ಕೇಳಿದ; ಅಷ್ಟೇ ತಾನೆ ಎಂದುಕೊಂಡ ಬಲಿಯ ಅರಿವಿನ ಅಳತೆಯನ್ನು ಮೀರಿ ವಾಮನನು ತ್ರಿವಿಕ್ರಮನಾಗಿ ಬೆಳೆದ; ಒಂದು ಹೆಜ್ಜೆಯಿಂದ ಇಡಿಯ ಭೂಮಂಲವನ್ನೂ ಮತ್ತೊಂದು ಹೆಜ್ಜೆಯಿಂದ ಇಡಿಯ ಆಕಾಶವನ್ನೂ ಅಳೆದ; ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ನೆಲೆಯಾಯಿತು.</p>.<p>ತಲೆ ಎಂಬುದು ಅಹಂಕಾರದ ಚಿಹ್ನೆ. ಅದನ್ನು ವಿಷ್ಣು ಮೆಟ್ಟಿದ ಎಂಬುದು ಇಲ್ಲಿರುವ ಒಂದು ಸಂಕೇತ. ವಿಷ್ಣು ಎಂದರೆ ಸರ್ವವ್ಯಾಪಕ ತತ್ತ್ವ. ಎಲ್ಲವೂ ನಾನೇ, ಎಲ್ಲವೂ ನನ್ನಲ್ಲಿದೆ – ಎಂಬ ಅಹಂಕಾರದಲ್ಲಿದ್ದ ಬಲಿಗೆ ದಿಟವಾದ ಸರ್ವವ್ಯಾಪಕತೆಯ ಅರಿವನ್ನು ಮೂಡಿಸಿದ ಮಹಾವಿಷ್ಣು. ನಮ್ಮ ಪ್ರತ್ಯಾಕ್ಷಾನುಭವವನ್ನು ಮೀರಿದ, ನಮ್ಮ ಅಳತೆ–ಲೆಕ್ಕಾಚಾರಗಳಿಗೆ ದಕ್ಕದ ವಿವರವೊಂದು ಎಲ್ಲವನ್ನೂ ಆವರಿಸಿಕೊಂಡು, ಎಲ್ಲವನ್ನೂ ಮೀರಿ ಇನ್ನೂ ‘ಹತ್ತು ಅಂಗುಲದಷ್ಟು ಹೆಚ್ಚಾಗಿಯೇ ಇದೆ’ (ಅತ್ಯತಿಷ್ಠದ್ದಶಾಂಗುಲಮ್) ಎಂಬ ಸತ್ಯವು ಬಲಿಗೆ ತ್ರಿವಿಕ್ರಮನಿಂದ ಸಾಕ್ಷಾತ್ಕಾರವಾಯಿತು. ಆ ಕ್ಷಣ ಅವನ ಅಹಂಕಾರವೂ ಮರೆಯಾಯಿತು; ಶಾಶ್ವತತತ್ತ್ವವನ್ನು ಅವನು ಕಂಡುಕೊಂಡನಾದ್ದರಿಂದಲೇ ಅವನು ಚಿರಂಜೀವಿಯೂ ಆದ.</p>.<p>ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ. ಎಂದಿಗೂ ಅಳಿಯದ ಆ ಸ್ಥಾನವೇ ಆನಂದ; ಅದು ಒದಗುವುದೇ ‘ನಾನು‘ ಎಂಬ ಅಹಂಕಾರದ ವಿಸರ್ಜನೆಯಲ್ಲಿ ಎಂಬ ಮಹಾಸಂದೇಶವನ್ನು ಬಲಿಪಾಡ್ಯಮಿ ನೀಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>