ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 12-9-2021ರಿಂದ 18-9-2021ರವರೆಗೆ

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ನಿಮಗೆ ಬರಬೇಕಾಗಿದ್ದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ನಿಮ್ಮ ಉಳಿತಾಯದ ಹಣ ಈಗ ಉಪಯೋಗಕ್ಕೆ ಬರುತ್ತದೆ. ಸಂತಾನಕ್ಕಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರ ದೊರೆಯಬಹುದು. ಕಟ್ಟಡ ನಿರ್ಮಾಣ ಕಾರ್ಯದಲ್ಲಿತೊಂದರೆ ಬಂದರೂ ಎಲ್ಲವೂ ಸರಿಯಾಗುತ್ತದೆ. ನಿಮ್ಮ ಬೆಳವಣಿಗೆ ಕಂಡು ನಿಮ್ಮ ಸಂಗಾತಿಯ ಕಡೆಯವರು ತಗಾದೆ ತೆಗೆಯಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವೃದ್ಧರಿಗೆ ಆರೋಗ್ಯದಲ್ಲಿ ವ್ಯತ್ಯಯ ಆಗುವ ಸಾಧ್ಯತೆಗಳಿವೆ. ಪುಸ್ತಕ ವ್ಯಾಪಾರಿಗಳಿಗೆ ವ್ಯವಹಾರ ಕುದುರುತ್ತದೆ. ಮಠಾಧೀಶರ ಅಥವಾ ಗುರುಗಳ ದರ್ಶನದ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಉತ್ತಮ ಯೋಗವಿದೆ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಬೇರೆಯವರನ್ನು ಅಪಹಾಸ್ಯ ಮಾಡಲು ಹೋಗಿ ನೀವೇ ಅಪಹಾಸ್ಯಕ್ಕೊಳಗಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರವಹಿಸಿರಿ. ಹಿತಮಿತವಾದ ಮಾತುಗಳಿಂದ ಜನರನ್ನು ಗೆಲ್ಲಲು ಯತ್ನಿಸಿರಿ. ಶೃಂಗಾರ ಸಾಮಗ್ರಿಗಳನ್ನು ಮಾರುವವರ ವ್ಯವಹಾರ ವೃದ್ಧಿಸುತ್ತದೆ. ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಹೊಸ ರೀತಿಯ ಪ್ರಯೋಗವನ್ನು ಮಾಡಲು ಚಿಂತಿಸದಿರಿ. ವಿದ್ಯಾರ್ಥಿಗಳಿಗೆ ಸಾಧನೆಗೆ ತಕ್ಕ ಫಲವಿರುತ್ತದೆ. ಸ್ಥಿರಾಸ್ತಿಯ ಬಗ್ಗೆ ಇದ್ದ ಗೊಂದಲಗಳು ದೂರವಾಗುತ್ತದೆ. ತಾಯಿಯಿಂದ ನಿಮಗೆ ಆರ್ಥಿಕ ಸಹಕಾರ ದೊರೆಯಬಹುದು. ಕೃಷಿಕರ ಆದಾಯ ಹಂತ ಹಂತವಾಗಿ ವೃದ್ಧಿಸುತ್ತದೆ. ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಿರಿ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನೌಕರರು ತಮ್ಮ ವೃತ್ತಿಯಲ್ಲಿ ಯಾವುದೇ ರೀತಿ ತಪ್ಪಾಗದಂತೆ ನಡೆದುಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಕಠಿಣ ಶಿಕ್ಷೆ ಒದಗಬಹುದು. ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗುವ ಸಾಧ್ಯತೆಗಳಿವೆ. ನಿಮ್ಮ ಬಹುದಿನದ ಬಯಕೆಯೊಂದನ್ನು ವಿಶ್ವಾಸಿಗರಲ್ಲಿ ಸಮಾಲೋಚನೆ ಮಾಡಿ ಕಾರ್ಯರೂಪಕ್ಕೆ ತರುವಿರಿ ಹಾಗೂ ಇದರಲ್ಲಿ ಯಶಸ್ಸನ್ನು ಕಾಣುವಿರಿ. ಚಿತ್ರನಟರಿಗೆ ಬೇಡಿಕೆ ಬಂದು ಮುಂಗಡ ಹಣ ದೊರೆಯುವ ಸಂದರ್ಭವಿದೆ. ಮಹಿಳಾ ರಾಜಕಾರಣಿಗಳ ಆಸೆಯಂತೆ ಯಾವುದೋ ರೀತಿಯ ಧನಾಗಮನದ ಸಾಧ್ಯತೆಗಳಿವೆ. ಗಣಿಗಾರಿಕೆ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ.

**
ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಆರ್ಥಿಕ ಅನುಕೂಲ ನಿಮಗೆ ಒದಗಿ ಬರುತ್ತದೆ. ಸ್ನೇಹಿತರಲ್ಲಿ ಕೆಲವರ ಸ್ನೇಹ ಅವರ ನಡವಳಿಕೆಯಿಂದ ದೂರವಾಗುತ್ತದೆ. ಕೆಲವು ಹಳೆಯ ಯೋಜನೆಗಳನ್ನು ನವೀಕರಣ ಮಾಡಿಕೊಂಡು ಮುಂದುವರಿಸಬಹುದು. ನವೀನ ರೀತಿಯ ಬಟ್ಟೆಗಳ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಲಾಭದ ಜೊತೆಗೆ ವ್ಯವಹಾರ ವಿಸ್ತರಿಸುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ರೀತಿಯ ಅನುಕೂಲ ದೊರೆಯುತ್ತದೆ. ಔಷಧಿ ವಿತರಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಸರ್ಕಾರಿ ಸಾಲ ಸರಾಗವಾಗಿ ದೊರೆಯುತ್ತದೆ. ವ್ಯವಹಾರದಲ್ಲಿ ವಿಷಯಾಧಾರಿತ ಚರ್ಚೆಗಳನ್ನು ಮಂಡಿಸಿ ಪಾಲುದಾರರ ಮನಸ್ಸನ್ನು ಗೆಲ್ಲುವಿರಿ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆತು ರೈತರಿಗೆ ಸಂತೋಷವಾಗುತ್ತದೆ. ಆಮದು ವ್ಯವಹಾರ ಮಾಡುವವರ ವ್ಯಾಪಾರ ವ್ಯವಹಾರ ವೃದ್ಧಿಸಿ ಹೆಚ್ಚು ಹಣ ದೊರೆಯುತ್ತದೆ.

*
ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಅತಿಯಾದ ವಾದ-ವಿವಾದಗಳಿಂದ ವೈರತ್ವ ಬರುವ ಸಾಧ್ಯತೆಗಳಿವೆ. ನಿಮ್ಮ ವಶದಲ್ಲಿರುವ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ಇದರಿಂದ ಉದ್ಯೋಗದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರವಾಗಿರಿ. ಪ್ರಭಾವಿಗಳೊಂದಿಗೆ ಸ್ನೇಹಬೆಳೆಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ನಿವೇಶನಕ್ಕಾಗಿ ಬಂಡವಾಳ ಹೂಡುವ ಸಾಧ್ಯತೆ ಇದೆ. ಆದರೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿರಿ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಗೊಂದಲ ಮೂಡಬಹುದು. ಮಾತುಕತೆಯಿಂದ ಬಗೆಹರಿಸಿಕೊಳ್ಳುವುದು ಬಹಳ ಒಳ್ಳೆಯದು. ಲೇವಾದೇವಿ ಮಾಡುವುದು ಅಷ್ಟು ಒಳಿತಲ್ಲ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕೆಲಸ ಕಾರ್ಯಗಳು ಮಂದಗತಿಯಲ್ಲಿ ಪ್ರಗತಿಯನ್ನು ಕಾಣುತ್ತವೆ. ಉದರ ಸಂಬಂಧಿ ದೋಷಗಳು ಕಂಡುಬರಬಹುದು. ಕೆಲವರ ಜಾಣತನಕ್ಕೆ ಮತ್ತು ಪ್ರತಿಭೆಗೆ ಪುರಸ್ಕಾರಗಳು ದೊರೆಯಬಹುದು. ಹೊಸ ಆದಾಯದ ಮೂಲಗಳತ್ತ ಗಮನ ಹರಿಸುವಿರಿ. ಸಂಗೀತಗಾರರಿಗೆ ಉತ್ತಮ ದಿನಗಳಾಗಿದ್ದು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಣಕಾಸು ಸಂಸ್ಥೆಯನ್ನು ನಡೆಸುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಬಟ್ಟೆ ಸಗಟು ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ತುರ್ತು ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು. ದ್ವಂದ್ವ ನಿರ್ಧಾರಗಳಿಂದಾಗಿ ವ್ಯವಹಾರದಲ್ಲಿ ಅಸ್ಥಿರತೆಯನ್ನು ಕಾಣಬಹುದು.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೆಲವು ಸಂಕಷ್ಟಗಳು ಕಡಿಮೆಯಾಗಿ ಕೆಲಸಕಾರ್ಯಗಳು ಸುಗಮ ಚಾಲನೆಯನ್ನು ಪಡೆಯುವವು. ಸಿಟ್ಟು ಸೆಡವುಗಳು ಬಂಧುಗಳ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸುವುದು ಒಳಿತು. ಹಣದ ಒಳಹರಿವು ಕಡಿಮೆಯಿದ್ದು ಖರ್ಚಿಗೆ ಕಡಿವಾಣವನ್ನು ಹಾಕುವುದು ಬಹಳ ಮುಖ್ಯ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಅನಿರೀಕ್ಷಿತ ತೊಂದರೆಗಳು ಎದುರಾಗಬಹುದು. ಹೂಡಿಕೆ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ. ವಿದ್ಯುತ್ ಕೆಲಸದ ಗುತ್ತಿಗೆದಾರರಿಗೆ ಕಾರ್ಮಿಕರಿಂದ ಸಮಸ್ಯೆ ಬರಬಹುದು. ಔಷಧಿ ವಿತರಕರಿಗೆ ವ್ಯವಹಾರ ವೃದ್ಧಿಸುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ.

**
ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)
ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆಯನ್ನು ಕಾಣಬಹುದು. ಶತ್ರುಗಳನ್ನು ಅವರದೇ ರೀತಿಯ ತಂತ್ರ ಬಳಸಿ ಮಟ್ಟ ಹಾಕುವಿರಿ. ಕೆಲವರಿಗೆ ಬಹಳ ದಿನಗಳಿಂದ ಇದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆತು ನೆಮ್ಮದಿ ಮೂಡುವುದು. ಕೆಲವು ರಾಜಕಾರಣಿಗಳಿಗೆ ಇರುವ ಸ್ಥಾನದಲ್ಲಿ ಡೋಲಾಯಮಾನ ಇದ್ದರೂ ಸ್ಥಾನಭ್ರಷ್ಟತೆ ಇರುವುದಿಲ್ಲ. ಲೆಕ್ಕಪರಿಶೋಧಕರಿಗೆ ಉತ್ತಮ ಕೆಲಸದ ಜೊತೆಗೆ ಉತ್ತಮ ಆದಾಯವೂ ಇರಲಿದೆ. ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂತಸ ಪಡುವಿರಿ. ನ್ಯಾಯಾಲಯದಲ್ಲಿನ ತಗಾದೆಗಳು ನಿಮ್ಮ ಪರವಾಗಿ ವಾಲತೊಡಗುತ್ತವೆ.

**
ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ನಿಮ್ಮನ್ನು ಅವಲಂಬಿಸಿರುವವರಿಗೆ ಭರವಸೆಯನ್ನು ಮೂಡಿಸುವವಿರಿ. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ತಕ್ಕಮಟ್ಟಿಗೆ ಖರ್ಚನ್ನು ಕಡಿಮೆ ಮಾಡುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮ್ಮ ನಿರ್ಣಯಗಳು ಹೆಚ್ಚು ಫಲ ಕೊಡುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಗೌರವಾದಾರಗಳು ದೊರೆತು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಿಡುವಿಲ್ಲದ ಕೆಲಸದ ಒತ್ತಡಗಳು ಇರುತ್ತವೆ. ಸ್ತ್ರೀಯರ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಹಿರಿಯರು ಕೊಂಕು ಮಾತನಾಡಿ ಎಲ್ಲರ ಮುಂದೆ ಸಣ್ಣವರಾಗುವರು. ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ.

**
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕೈಬಿಟ್ಟ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಯಶಸ್ಸು ದೊರೆಯುತ್ತದೆ. ಪ್ರಕಾಶನ ಹಾಗೂ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿಯನ್ನು ಕಾಣಬಹುದು. ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳುವುದು ನಿಮಗೆ ಉತ್ತಮ. ಸಾಮಾಜಿಕ ಕಾರ್ಯ ಮಾಡುವವರಿಗೆ ವಿನಾಕಾರಣ ವೈಮನಸ್ಯ ಬರಬಹುದು. ಸ್ವತಂತ್ರ ಉದ್ಯೋಗ ಮಾಡುವವರಿಗೆ ಯಶಸ್ಸು ಇರುತ್ತದೆ. ರಾಜಕಾರಣಿಗಳು ತಮ್ಮ ಅನುಚಿತ ವರ್ತನೆಯಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿರುವವರು ಎಚ್ಚರವಾಗಿ ಆಡಳಿತ ನಡೆಸುವುದು ಒಳ್ಳೆಯದು. ನಿಮ್ಮನ್ನು ಸಿಕ್ಕಿಹಾಕಿಸಲು ನಿಮ್ಮ ವಿರೋಧಿ ಬಣ ಸದಾಕಾಲ ಕಾಯುತ್ತಿರುತ್ತದೆ. ಆಭರಣ ತಯಾರಕರಿಗೆ ಉತ್ತಮ ಬೇಡಿಕೆ ಬರುತ್ತದೆ.

**
ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಉದ್ದಿಮೆದಾರರ ಯೋಜಿತ ಕಾರ್ಯಗಳಲ್ಲಿನ ಆತಂಕಗಳು ದೂರವಾಗಿ ಕೆಲಸಗಳು ನಡೆಯುತ್ತವೆ. ಆದಾಯ ಅಗತ್ಯಕ್ಕೆ ತಕ್ಕಷ್ಟು ಇದ್ದರೂ ಖರ್ಚಿನ ಮೇಲೆ ಕಡಿವಾಣ ಹಾಕುವುದು ಉತ್ತಮ. ನೌಕರಿಯಲ್ಲಿರುವ ಯುವಕರಿಗೆ ಸ್ಥಾನ ಭ್ರಷ್ಟತೆ ಅಥವಾ ದೂರದ ಊರಿಗೆ ಶಿಕ್ಷಾರ್ಹ ವರ್ಗಾವಣೆ ಆಗಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕಾರಕ್ಕಾಗಿ ಹೋರಾಟ ಮಾಡಬೇಕಾದೀತು. ಆಭರಣಕ್ಕೆ ಸಂಬಂಧಿಸಿದ ಶೃಂಗಾರ ಸಾಮಗ್ರಿಗಳ ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ. ವಾಹನ ದುರಸ್ತಿ ಮಾಡುವವರ ಆದಾಯ ನಿಧಾನವಾಗಿ ಹೆಚ್ಚಾಗುವುದು. ಸಂಗಾತಿಯ ಕಡೆಯಿಂದ ಧನಸಹಾಯ ಹರಿದು ಬರುವ ಸಾಧ್ಯತೆ ಇದೆ.

**
ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಕೆಲವೊಂದು ವಿಷಯಗಳ ಬಗ್ಗೆ ಯೋಚಿಸಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಯೋಜನೆಗಳ ಅಭಿವೃದ್ಧಿಗಾಗಿ ತಜ್ಞರ ಜೊತೆ ಚರ್ಚಿಸುವುದು ಒಳ್ಳೆಯದು. ಆಹಾರ ವ್ಯತ್ಯಯದಿಂದಾಗಿ ಅನಾರೋಗ್ಯ ಕಾಡಬಹುದು. ಹೆಚ್ಚಿನ ಸಂಪಾದನೆಗಾಗಿ ಹೊಸಮಾರ್ಗಗಳನ್ನು ಹುಡುಕುವಿರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು.ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಒಡಹುಟ್ಟಿದವರಿಂದ ಧನಸಹಾಯ ದೊರೆಯುವ ಸೂಚನೆ ಸಿಗುತ್ತದೆ. ಖರ್ಚಿನ ಬಗ್ಗೆ ಬಹಳ ನಿಗಾ ಇಡಿರಿ. ಕ್ರೀಡಾಪಟುಗಳು ತಮ್ಮ ಆಯ್ಕೆಗಾಗಿ ಹೆಚ್ಚಿನ ಶ್ರಮ ಮಾಡಬೇಕಾಗಬಹುದು. ಸಂಗಾತಿಯ ಕೆಲವು ನಿರ್ಧಾರಗಳು ನಿಮಗೆ ಸರಿ ಕಾಣದಿದ್ದರೂ ನಿಧಾನವಾಗಿ ತಿಳಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT