ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದಲ್ಲಿ ಮಂಗಳವಾರ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಐಶ್ವರ್ಯ ಶಂಕರ ಬಾರಕೇರ (16) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಶ್ವರ್ಯಾ ಅಪ್ಪ ಶಂಕರ ಬಾರಕೇರ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅಮ್ಮ ಶಾಂತವ್ವ ಅವರೊಂದಿಗೆ ಅಲ್ಲಿನ ಭೋವಿ ಗಲ್ಲಿಯಲ್ಲಿ ವಾಸವಿದ್ದರು. ಶಾಂತವ್ವ ಸುಣ್ಣದ ವ್ಯಾಪಾರ ಮಾಡಿ ಮಗಳನ್ನು ಓದಿಸುತ್ತಿದ್ದರು.
'ಸೋಮವಾರ ಫಲಿತಾಂಶ ಪ್ರಕಟವಾಗಿದ್ದು ಐಶ್ಚರ್ಯಾಗೆ ಶೇ 43 ಅಂಕ ಬಂದಿದ್ದವು. ಶೇ 95 ಅಂಕ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಗಳು ಕಡಿಮೆ ಅಂಕ ಬಂದಿದ್ದರಿಂದ ಮನಸ್ಸಿಗೆ ನೋವು ಮಾಡಿಕೊಂಡಿದ್ದಳು. ನಾನು ಸಮಾಧಾನ ಮಾಡಿದ್ದೆನು' ಎಂದು ಶಾಂತವ್ವ ಪೊಲೀಸರಿಗೆ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಬೇಸರದಲ್ಲಿಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಾಂತವ್ವ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.