ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಗಳ ತಾಣವಾದ ಆಶ್ರಯ ಮನೆ

Last Updated 25 ಏಪ್ರಿಲ್ 2018, 10:36 IST
ಅಕ್ಷರ ಗಾತ್ರ

ನರೇಗಲ್: ಸರ್ವರಿಗೂ ಸೂರು, ಎಲ್ಲರಿಗೂ ಸ್ವಂತ ಮನೆ ಪರಿಕಲ್ಪನೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಆಶ್ರಯ ಮನೆಗಳು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಆಗದೇ ಪಾಳುಬಿದ್ದಿವೆ. ಪಟ್ಟಣದ 7ನೇ ವಾರ್ಡಿನ ದಾಂಪುರದಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳು ಅಕ್ರಮ ಚಟುವಟಿಕೆಗಳ ತಾಣವಾಗಿವೆ. ರಾಜಕೀಯ ಮೇಲಾಟದಲ್ಲಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ.

ಬಿಜೆಪಿ ಆಡಳಿತ ಅವಧಿಯಲ್ಲಿ ಮನೆ ಇಲ್ಲದ ಬಡವರಿಗೆಂದು 39 ಎಕರೆ 23 ಗುಂಟೆ ಜಮೀನನ್ನು ಖರೀದಿ ಮಾಡಲಾಗಿತ್ತು. ವಾಜಪೇಯಿ ವಸತಿ ಯೋಜನೆಯಡಿ 1,246 ನಿವೇಶನಗಳನ್ನು ನಿರ್ಮಿಸುವ ಕಾಮಗಾರಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ ನಿಡಿದ್ದರು. ಪ್ರತಿ ಮನೆಗೂ ಅಂದಾಜು ₹ 1.80 ಲಕ್ಷ ವ್ಯಯಿಸಿ 200 ಮನೆಗಳನ್ನು ನಿರ್ಮಿಸಿಲಾಗಿದೆ.

ಕಳೆದ ಬಾರಿಯ ಚುನಾವಣೆ ಸಮೀಪಿಸುತ್ತಿದ್ದಂತೆ ನಿವೇಶನ ಹಂಚಿಕೆಯ ಕಾರ್ಯಕ್ರಮವನ್ನು ಮಾಡಿದ ಮಾಜಿ ಸಚಿವರು ಕೇವಲ 8ರಿಂದ10 ಪಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಿದ್ದರು. ನಂತರ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೆಪಕ್ಕೆ ಮಾತ್ರ ಆಶ್ರಯ ಸಮಿತಿ ರಚನೆ ಮಾಡಿದ್ದು ಬಿಟ್ಟರೆ ಇದುವರೆಗೆ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವತ್ತ ಗಮನ ಹರಿಸಿಲ್ಲ. ಶಾಸಕ ಜಿ.ಎಸ್.ಪಾಟೀಲ ಅವರೂ ಸಹ ಚುನಾವಣೆಯ ತರಾತುರಿಯಲ್ಲಿ ಪಾಳು ಬಿದ್ದ ಆಶ್ರಯ ಮನೆಗಳ ದುರಸ್ಥಿಗೆ ಹಾಗೂ ಹಂಚಿಕೆಗೆ ಮುಂದಾಗಿದ್ದರು. ಆದರೆ, ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆ ಆ ಕಾರ್ಯಸ್ಥಗಿತಗೊಂಡಿತು.

ಏಳು ವರ್ಷಗಳ ಹಿಂದೆ ನಿರ್ಮಾಣಗೊಂಡ ಮನೆಯ ಗೋಡೆಗಳು ಈಗಾಗಲೇ ಅಧೋಗತಿಗೆ ತಲುಪಿವೆ. ಮನೆಯ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿವೆ. ಆಶ್ರಯ ಮನೆ ನಿರ್ಮಿಸಿದ ಪ್ರದೇಶದಲ್ಲಿ  ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಇನ್ನಿತರ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ, ಇಲ್ಲಿನ ಮನೆಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಜನಪ್ರತಿನಿಧಿಗಳು, ಆಶ್ರಯ ಸಮಿತಿ ಅಧ್ಯಕ್ಷರು ಪರಿಶೀಲಿಸಿ ತಕ್ಷಣ ಮಂಜೂರಾತಿಗೆ ಸೂಚನೆ ನೀಡದೆ ಇರುವ ನಿರ್ಲಕ್ಷ್ಯ ಧೋರಣೆಯಿಂದ ಮಂಜೂರಾಗಿರುವ ಮನೆಗಳು ಹಂಚಿಕೆಯಾಗದೇ ಉಳಿದುಕೊಂಡಿವೆ.ಆದ್ದರಿಂದ ಸೂರಿಗಾಗಿ ಅರ್ಜಿ ಸಲ್ಲಿಸಿದವರು ಗುಡಿಸಲು, ತಗಡಿನ ಶೆಡ್, ಬಾಡಿಗೆ ಮನೆಗಳಲ್ಲಿ ಜೀವನ ನಡೆಸುವಂತಾಗಿದೆ. ಪ್ರತಿ ವರ್ಷ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳಿಗೆ ಮನೆಗಳು ದೊರೆಯದಂತಾಗಿವೆ. ‘ಆಯ್ಕೆಯಾದ ಪ್ರತಿ ಫಲಾನುಭವಿಗಳಿಂದ ₹ 30 ಸಾವಿರ ವಂತಿಕೆ ಪಡೆದಿದ್ದಾರೆ’ ಎಂಬ ಆರೋಪ ಕೇಳಿ ಬಂದಿದೆ.

ಮನೆ ಹಂಚಿಕೆಯ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಜನ ಪ್ರತಿನಿಧಿಗಳು, ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಂಬರುವ ಸರ್ಕಾರವಾದರೂ ನಿರ್ಗತಿಕರ ಕುರಿತು ಮುತುವರ್ಜಿ ವಹಿಸಿ ಮನೆ ಹಂಚಿಕೆ ಮಾಡಬೇಕು ಎಂದು ಸೌಲಭ್ಯ ವಂಚಿತರು ಆಗ್ರಹಿಸಿದ್ದಾರೆ.

**
ಆಶ್ರಯ ಮನೆ ಹಂಚಿಕೆಯನ್ನು ಬಿಜೆಪಿ ಕಗ್ಗಂಟಾಗಿಸಿತ್ತು. ಅಲ್ಲದೆ, ಬಡವರಿಂದ ₹ 30 ಸಾವಿರ ವಂತಿಕೆ ಸಂಗ್ರಹಿಸಿತ್ತು. ಈಗ ಕಾಂಗ್ರೆಸ್ ಸರ್ಕಾರವೇ ವಂತಿಕೆ ಭರಿಸಲಾಗಿದೆ
– ಜಿ.ಎಸ್.ಪಾಟೀಲ,ಶಾಸಕ

**
5 ವರ್ಷದ ಆಡಳಿತ ನಡೆಸಿದರೂ ಕಾಂಗ್ರೆಸ್ ಸರ್ಕಾರ ಮನೆ ಹಂಚಿಕೆ ಮಾಡದೇ ಪಾಳು ಬಿಟ್ಟಿರುವುದು ಸರಿಯಲ್ಲ. ಮನೆಗಿಂತಲೂ ಎತ್ತರವಾಗಿ ಮುಳ್ಳಿನ ಕಂಟಿಗಳು ಬೆಳೆದಿವೆ
– ಕಳಕಪ್ಪ ಬಂಡಿ, ಮಾಜಿ ಸಚಿವ

**
ಚಂದ್ರು ಎಂ. ರಾಥೋಡ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT