ದೇವನಹಳ್ಳಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಡಿಬೆಲೆ ರಾಜಣ್ಣ ಮತ್ತು ಉಪಾಧ್ಯಕ್ಷೆಯಾಗಿ ಆಶಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಹಿಂದೆ ಅಧ್ಯಕ್ಷರಾಗಿದ್ದ ಶ್ರೀರಾಮಯ್ಯ ಮತ್ತು ಉಪಾಧ್ಯಕ್ಷೆಯಾಗಿದ್ದ ಭಾರತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಡಿಬೆಲೆ ರಾಜಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಶಾ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್, ‘ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ಎರಡು ಬಾರಿ ತಲಾ ಐದು ವರ್ಷಗಳ ಅವಧಿಗೆ ಅಧ್ಯಕ್ಷನಾಗಿ ಆಡಳಿತ ನಡೆಸಿದ್ದೇನೆ. ಅದಕ್ಕೂ ಮೊದಲು ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷನಾಗಿದ್ದೆ. ಸಹಕಾರ ಸಂಘಗಳು ರಾಜಕೀಯಕ್ಕೆ ಮೆಟ್ಟಿಲು. ವೈಯಕ್ತಿಕ ವರ್ಚಸ್ಸು, ರೈತರ ಬಗ್ಗೆ ಕಾಳಜಿ ಜೊತೆಗೆ ಪಕ್ಷ ಸಂಘಟಿಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿರುತ್ತದೆ’ ಎಂದರು.
‘ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಸಹಕಾರ ಸಂಘಗಳ ಚುನಾವಣೆ ನಡೆಯಲಿದ್ದು ಪದಾಧಿಕಾರಿಗಳು ಸಂಘಟನೆಗೆ ಒತ್ತು ನೀಡಬೇಕು. ಯಾವುದೇ ಹುದ್ದೆಗೆ ಆಕಾಂಕ್ಷಿಗಳ ಕೊರತೆ ಇಲ್ಲ. ಎಲ್ಲರಿಗೂ ಒಂದೇ ಬಾರಿಗೆ ಹುದ್ದೆ ನೀಡಲು ಸಾಧ್ಯವಿಲ್ಲ. ಹಂತಹಂತವಾಗಿ ಸಿಗಲಿದೆ’ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಮುನೇಗೌಡ ಹಾಗೂ ಎಪಿಎಂಸಿ ಅಧ್ಯಕ್ಷ ಕೆ.ವಿ. ಮಂಜುನಾಥ್ ಮಾತನಾಡಿ, ‘ಸರ್ವ ಸದಸ್ಯರ ಒಮ್ಮತದೊಂದಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮಂಡಿಬೆಲೆ ರಾಜಣ್ಣ ಎರಡು ಬಾರಿ ನಿರ್ದೇಶಕರಾಗಿದ್ದಾರೆ. ಮಂಡಿಬೆಲೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿ ಸಹಕಾರ ಸಂಘದ ಪ್ರತಿಯೊಂದು ನಿಯಮಗಳ ಅರಿವು ಅವರಿಗಿದೆ. ಸಹಕಾರ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯುವ ಹೊಣೆಗಾರಿಕೆ ಇದೆ. ರೈತರೊಂದಿಗೆ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘದೊಂದಿಗೆ ಸಮನ್ವಯತೆ ಸಾಧಿಸಬೇಕು. ಸಂಘದ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡಬೇಕು’ ಎಂದರು.
ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು ಮಾತನಾಡಿದರು. ಉಪಾಧ್ಯಕ್ಷೆ ಆಶಾ ಮಂಜುನಾಥ್, ತಾಲ್ಲೂಕು ಜೆಡಿಎಸ್ ಘಟಕ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ವಿಜಯಪುರ ಹೋಬಳಿ ಜೆಡಿಎಸ್ ಘಟಕ ಅಧ್ಯಕ್ಷ ವೀರಪ್ಪ, ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಕಸಬಾ ಹೋಬಳಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಎಸ್.ಎಲ್.ಎನ್.ಮುನಿರಾಜು, ತಾಲ್ಲೂಕು ಮಾರುಕಟ್ಟೆ ಸಮಿತಿ ನಿರ್ದೇಶಕರಾದ ಕೆ.ರಮೇಶ್, ಭಾರತಿ, ರವಿ, ಮಂಜುನಾಥ್, ಶ್ರೀರಾಮಯ್ಯ, ನಾಗೇಶ್ ಬಾಬು, ಮನೋಹರ್, ನಾರಾಯಣಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.