ವಿಜಯಪುರ(ದೇವನಹಳ್ಳಿ): ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರೇನಹಳ್ಳಿ ಗ್ರಾಮದಲ್ಲಿ ಕದಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಭಟ್ರೇನಹಳ್ಳಿ ಗೇಟ್ ನಿಂದ ದೇವಾಲಯದವರೆಗೂ ಮೆರವಣಿಗೆಯ ಮೂಲಕ ತೆರಳಿದ ಅವರು, ಕೆಲಕಾಲ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಕೀರ್ತನೆ ಹಾಡಿದರು.
ನಂತರ ಗ್ರಾಮದಲ್ಲಿನ ಬೀದಿಗಳಲ್ಲಿ ಸಂಚರಿಸಿದರು. ಸಾರ್ವಜನಿಕರು ಅವರಿಗೆ ಸ್ವಾಗತಕೋರಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ‘ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಾವುದೇ ಭರವಸೆ ನೀಡುವುದಿಲ್ಲ. ಈಗ ದೇವರ ಕಾರ್ಯಕ್ರಮಕ್ಕಷ್ಟೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ನೋಡೋಣ’ ಎಂದು ಭರವಸೆ ನೀಡಲು ನಿರಾಕರಿಸಿದರು.
‘ಭಕ್ತಿ ಯೋಗದಿಂದ ಮಾತ್ರ ಮಾನವನಿಗೆ ಮುಕ್ತಿ ಸಿಗಲು ಸಾಧ್ಯ. ನಾನು, ನನ್ನದು ಎನ್ನುವ ವ್ಯಾಮೋಹ ಬಿಟ್ಟು. ನಮ್ಮ ಜನ್ಮ ರಹಸ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿನಿತ್ಯ ಭಗವಂತನ ಧ್ಯಾನದಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಪ್ರತಿಯೊಬ್ಬರೂ ದೈವಕೃಪೆಗೆ ಪಾತ್ರರಾಗಬೇಕಾದರೆ, ಪರೋಪಕಾರದ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್, ಸದಸ್ಯೆ ಮುನಿಲಕ್ಷ್ಮಮ್ಮ, ವೀರೇಗೌಡ, ನಾರಾಯಣಪ್ಪ, ಶಂಕರಪ್ಪ, ಕೃಷ್ಣಪ್ಪ, ಪ್ರಮೀಳಮ್ಮ, ಅಶ್ವಥನಾರಾಯಣ, ಮುನಿರಾಜು, ವೇಣುಗೋಪಾಲ್, ಲಕ್ಷ್ಮೀಪತಿ, ಡೇರಿ ಅಧ್ಯಕ್ಷ ವೆಂಕಟೇಶಪ್ಪ, ಅರ್ಚಕ ದ್ವಾರಕಿನಾಥ್ ಹಾಜರಿದ್ದರು.