ವಿಜಯಪುರ-ಚಿಕ್ಕಬಳ್ಳಾಪುರದ ಮುಖ್ಯರಸ್ತೆಯಲ್ಲಿರುವ ನಾರಾಯಣಪುರ ಪ್ರೌಢಶಾಲೆಯಲ್ಲಿ ನೂರಾರು ಮಂದಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಶಾಲೆಯ ಆವರಣದಲ್ಲಿ ನೂತನವಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿ, ಕಾಂಪೌಂಡ್ಗೆ ಬಣ್ಣ ಬಳಿಯಲಾಗಿದೆ. ಆದರೂ ಕಸದ ತಿಪ್ಪೆಯನ್ನು ಕಾಂಪೌಂಡ್ ಪಕ್ಕದಲ್ಲಿ ಹಾಕಿದ್ದು, ಸಗಣಿ ದುರ್ವಾಸನೆ ಬೀರುತ್ತಿದೆ. ಜೊತೆಗೆ ಅನೇಕ ಹುಳುಗಳು ಶಾಲೆಯ ಕೊಠಡಿಗಳಿಗೆ ಹೋಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಹಾಗಾಗಿ ಗ್ರಾಮ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಲಾ ಸಿಬ್ಬಂದಿ ಮನವಿ ಮಾಡಿದ್ದಾರೆ.