ಬೆಳಗಾವಿ: ‘ಆಸ್ತಿಕರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮೇಯರ್ ಶೋಭಾ ಸೋಮನಾಚೆ ಅವರು ಸಹಿ ಮಾಡಿದ ಗೊತ್ತುವಳಿಯ ಮೂಲಪ್ರತಿ ಕಾಣೆಯಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಇಲ್ಲಿನ ಮಾರ್ಕೆಟ್ ಠಾಣೆಗೆ ಶನಿವಾರ ರಾತ್ರಿ ದೂರು ದಾಖಲಿಸಿದ್ದಾರೆ.
2023–24ನೇ ಸಾಲಿನಲ್ಲಿ ನಗರದ ಆಸ್ತಿ ಕರ ಪರಿಷ್ಕರಣೆ ಮಾಡಬೇಕು ಎಂದು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಪಾಲಿಕೆ ಆಯುಕ್ತರು 2024–25ನೇ ಸಾಲಿನಲ್ಲಿ ಪರಿಷ್ಕರಣೆಗೆ ನಿರ್ಣಯಿಸಲಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ರವಾನಿಸಿದ್ದಾರೆ. ಇದು ಆಯುಕ್ತರು ಮಾಡಿದ ಲೋಪ. ಇದೇ ಕಾರಣಕ್ಕೆ ಸರ್ಕಾರದಿಂದ ಪಾಲಿಕೆಗೆ ಷೋಕಾಸ್ ನೋಟಿಸ್ ಬಂದಿದೆ ಎಂದು ಆಡಳಿತ ಗುಂಪಿನ ಬಿಜೆಪಿ ಸದಸ್ಯರು ಆರೋಪ ಮಾಡಿದ್ದರು.
ಇದೇ ವಿಚಾರವಾಗಿ ಮಹಾನಗರ ಪಾಲಿಕೆಯಲ್ಲಿ ಶನಿವಾರ ವಿಶೇಷ ಪರಿಷತ್ ಸಭೆ ನಡೆಯಿತು. ಇಡೀ ದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು.
‘ಆಸ್ತಿ ಕರ ಪರಿಷ್ಕರಣೆಯ ಗೊತ್ತುವಳಿ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮುನ್ನ ಮೇಯರ್ ಸಹಿ ಮಾಡಿಲ್ಲವೇ ಅಥವಾ ನಕಲಿ ಸಹಿ ಮಾಡಲಾಗಿದೆಯೇ?’ ಎಂದು ಪ್ರಶ್ನಿಸಿದ ಸಚಿವ ಸತೀಶ ಜಾರಕಿಹೊಳಿ; ‘ಈ ಪ್ರತಿಯನ್ನು ಶಾಸಕ ಅಭಯ ಪಾಟೀಲ ಕದ್ದಿದ್ದಾರೆ’ ಎಂದೂ ಆರೋಪಿಸಿದ್ದರು.
ಈ ಎಲ್ಲ ಬೆಳವಣಿಗೆಗಳಿಂದಾಗಿ ಆಯುಕ್ತ ಅಶೋಕ ಅವರು, ‘ಪಾಲಿಕೆ ಪರಿಷತ್ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.