ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಖಾಸಗೀಕರಣ ಕೈಬಿಡಲು ಎಂದು ಡಿ.ಕೆ. ಶಿವಕುಮಾರ್‌ ಆಗ್ರಹ

Last Updated 7 ಏಪ್ರಿಲ್ 2021, 16:14 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರವು ನಗರಗಳಲ್ಲಿ ಕುಡಿಯುವ ನೀರು ಪೂರೈಕೆಯನ್ನು ಖಾಸಗೀಕರಣ ಮಾಡಿ, ಅವಶ್ಯ ಸೇವೆಯನ್ನೂ ವ್ಯಾಪಾರಿ ಮನೋಭಾವದಿಂದ ನೋಡುತ್ತಿದೆ. ಇದರ ವಿರುದ್ಧ ನಮ್ಮ ‍ಪಕ್ಷ ಹೋರಾಡಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಈ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ವಾಪಸ್ ಪಡೆಯಬೇಕು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೇ ಆ ಜವಾಬ್ದಾರಿ ಕೊಡಬೇಕು. ಖಾಸಗೀಕರಣದ ಮೂಲಕ ಜನರಿಗೆ ಹೊರೆ ಹೇರುವುದು ಸರಿಯಲ್ಲ’ ಎಂದು ಹೇಳಿದರು.

‘ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕಮ್ಯುನಿಸ್ಟ್ ಪಕ್ಷ, ರೈತ ಸಂಘದ ಮುಖಂಡರು, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ರೈತ ಸಂಘದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ, ಕುರುಬೂರು ಶಾಂತಕುಮಾರ್‌, ಚೂನಪ್ಪ ಪೂಜಾರ, ಚಾಮರಸ ಮಾಲಿಪಾಟೀಲ ಮೊದಲಾದವರಿಗೆ ಪತ್ರ ಬರೆಯುತ್ತೇನೆ, ಕರವೇ ಮೊದಲಾದ ಸಂಘನೆಯವರಿಂದಲೂ ಬೆಂಬಲ ಕೋರಿದ್ದೇವೆ. ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆ ಮಾಡಬೇಕು ಎಂದು ಜನರು ಬಯಸಿದ್ದಾರೆ. ಹೀಗಾಗಿ, ಸಂಘಟನೆಗಳು ನಮ್ಮ ಕೈಜೋಡಿಸಬೇಕು. ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಡೆಯುವ ಹೋರಾಟಗಳೊಂದಿಗೆ ಪಕ್ಷವು ಸಂಘನೆಗಳೊಂದಿಗೆ ಇರಲಿದೆ’ ಎಂದರು.

‘ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಬದುಕಿಗೆ ಆಘಾತ ಉಂಟಾಗಿದೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಂದೇಶ ರವಾನಿಸಬೇಕು. ಜಾತ್ಯತೀತ ಮನೋಭಾವದವರ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

‘ಬಿಜೆಪಿ ಪರ ಪ್ರಚಾರ ಮಾಡುತ್ತೇನೆ’ ಎಂದು ಲಖನ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಮ್ಮ ನಾಯಕತ್ವದಲ್ಲಿ ನಂಬಿಕೆ ಇದ್ದವರು ಕೆಲಸ ಮಾಡಲಿ. ಇನ್ನುಳಿದವರನ್ನು ಬಲವಂತ ಮಾಡಲು ಸಿದ್ಧವಿಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT